ಚೆನೈ: ತಮಿಳುನಾಡಿನಲ್ಲಿ (Tamil Nadu) ಅಮುಲ್ (AMUL) ಹಾಲು ಸಂಗ್ರಹ ಮಾಡುವುದನ್ನಿ ನಿಲ್ಲಿಸಿ ಎಂದು ಮುಖ್ಯಮಂತ್ರಿ ಸ್ಟಾಲಿನ್ (M.K Stalin) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿದ್ದಾರೆ.
ಅಮುಲ್ ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುವುದು ದುರದೃಷ್ಟಕರ ವಿಚಾರವಾಗಿದೆ. ಇದು ಆವಿನ್ (Aavin) ಹಿತಾಸಕ್ತಿಗೆ ಹಾನಿಕರ ಮತ್ತು ಸಹಕಾರಿ ಸಂಸ್ಥೆಗಳ ನಡುವೆ ಅನಗತ್ಯ ಪೈಪೋಟಿಗೆ ಕಾರಣವಾಗಿದೆ. ಇದು ಉತ್ತಮವಾದ ಬೆಳವಣಿಗೆಯಲ್ಲ. ಪ್ರಾದೇಶಿಕ ಸಹಕಾರಿ ಸಂಸ್ಥೆಗಳು ರಾಜ್ಯಗಳಲ್ಲಿ ಡೈರಿ ಅಭಿವೃದ್ಧಿಯ ಆಧಾರವಾಗಿದೆ. ಅಮುಲ್ ಹಸ್ತಕ್ಷೇಪದಿಂದ ಸಹಕಾರಿ ಸಂಸ್ಥೆಗಳ ಬುಡಕ್ಕೆ ಹೊಡೆತ ಬೀಳುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಟೇಕಾಫ್ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ – ಸಮಯಪ್ರಜ್ಞೆ ಮೆರೆದ ಪೈಲೆಟ್
ಪತ್ರದಲ್ಲಿ ಏನಿದೆ?
ತಮಿಳುನಾಡಿನಲ್ಲಿ ಡೈರಿ ಸಹಕಾರಿ ಸಂಸ್ಥೆಯು 1981 ರಿಂದ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಹಾಲು (Milk) ಉತ್ಪಾದಕರು ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸಹಕಾರಿ ಸಂಸ್ಥೆಗಳು ನಡೆದುಕೊಳ್ಳುತ್ತಿವೆ. ಅದ್ದರಿಂದ ಆವಿನ್ಗೆ ನಮ್ಮ ಅಗ್ರಸ್ಥಾನ ನೀಡುತ್ತೇವೆ.
ಆವಿನ್ ಸಹಕಾರಿ ವ್ಯಾಪ್ತಿಯಡಿಯಲ್ಲಿ 9,673 ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುಮಾರು 4.5 ಲಕ್ಷ ಸದಸ್ಯರಿಂದ 35 ಎಲ್ಎಲ್ಪಿಡಿ ಹಾಲನ್ನು ಸಂಗ್ರಹಿಸುತ್ತಿದೆ. ನಮ್ಮ ವ್ಯವಸ್ಥೆಯಲ್ಲಿ ವರ್ಷ ಪೂರ್ತಿ ರೈತರಿಗೆ ಲಾಭ ಮತ್ತು ಎಲ್ಲರಿಗೂ ಏಕ ರೀತಿಯ ಬೆಲೆ ನೀಡಲಾಗುತ್ತಿದೆ. ಇಡೀ ದೇಶದಲ್ಲೇ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ತಲುಪುವ ಹಾಲು ನಮ್ಮ ರಾಜ್ಯದ್ದಾಗಿದೆ. ಅಲ್ಲದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಜಾನುವಾರುಗಳಿಗೆ ಆಹಾರ, ಮೇವು ಹಾಗೂ ತಳಿಯನ್ನು ಉಳಿಸುವ ಕಾರ್ಯಗಳಲ್ಲಿ ತೊಡಗಿಕೊಂಡಿವೆ.
ಇತ್ತೀಚೆಗೆ ಅಮುಲ್ ಕೃಷ್ಣಗಿರಿ ಜಿಲ್ಲೆಯಲ್ಲಿ ಹಾಲು ಸಂಗ್ರಹಣಾ ಮತ್ತು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಬಹು ರಾಜ್ಯ ಸಹಕಾರಿ ಪರವಾನಗಿಯನ್ನು ಬಳಸಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅಮುಲ್ನ ಈ ಕ್ರಮವು ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಗ್ರಹಣೆ ಹಾಗೂ ಮಾರಾಟದಲ್ಲಿ ತೊಡಗಿರುವ ಸಹಕಾರಿ ಸಂಸ್ಥೆಗಳ ನಡುವೆ ಅನಗತ್ಯ ಸ್ಪರ್ಧೆಯನ್ನು ಸೃಷ್ಟಿಸುತ್ತದೆ. ಆದ್ದರಿಂದ ಅಮುಲ್ನ ಹಸ್ತಕ್ಷೇಪವನ್ನು ನಿಲ್ಲಿಸುವಂತೆ ನಿರ್ದೇಶಿಸಲು ತುರ್ತು ಮಧ್ಯಸ್ಥಿಕೆಗೆ ಅಮಿತ್ ಶಾ ಅವರಿಗೆ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: New Parliament Building – ಕರ್ನಾಟಕ ವಿಧಾನಸೌಧದ ಉದಾಹರಣೆ ನೀಡಿ ಕಾಂಗ್ರೆಸ್ಗೆ ಸಂಬಿತ್ ಪಾತ್ರ ತಿರುಗೇಟು