ಮೈಸೂರು: ಮೊದಲ ಹಂತದ ಮತದಾನ ನಡೆಯುವ ಸುಮಾರು 6 ಜಿಲ್ಲೆಗಳಲ್ಲಿ ಗುರುವಾರ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದಾರೆ. ಸಚಿವ ಎಚ್.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಅಕ್ಕನ ಮಗನ ಮನೆ ಮೇಲೂ ಐಟಿ ದಾಳಿ ನಡೆದಿದೆ.
ಮೈಸೂರಿನ ನಿರ್ಮಿತಿ ಕೇಂದ್ರದ ಬಳಿ ಇರುವ ಶರತ್ಗೌಡ ಅವರ ಮನೆಯಲ್ಲಿ ಸುಮಾರು 19 ಗಂಟೆ ಐಟಿ ಅಧಿಕಾರಿಗಳ ತಂಡ ಜಾಲಾಡಿದೆ. ಗುರುವಾರ ಬೆಳಗ್ಗೆಯಿಂದ ಐಟಿ ದಾಳಿ ಶುರುವಾಗಿದ್ದು, ಮಧ್ಯರಾತ್ರಿ ಸುಮಾರು 12.30ಗೆ ಮುಕ್ತಾಯವಾಗಿದೆ.
ಭವಾನಿ ರೇವಣ್ಣ ಅಕ್ಕನ ಮಗನ ಮನೆ ಜೊತೆಗೆ ಮೈಸೂರಿನ ವಿಜಯನಗರದಲ್ಲಿನ ಸಚಿವ ಪುಟ್ಟರಾಜು ಅವರ ಸಹೋದರರ ಪುತ್ರ ಶಿವಕುಮಾರ್ ಅವರ ಮನೆ ಮೇಲೆಯೂ ಐಟಿ ದಾಳಿ ನಡೆದಿತ್ತು. ಆದಾಯ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯ ನಗದನ್ನು ತೆಗೆದುಕೊಂಡು ಹೋಗಿಲ್ಲ. ಜೊತೆಗೆ ಎಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಿ ನಮಗೆ ವಾಪಸ್ ಕೊಟ್ಟಿದ್ದಾರೆ. ವಿಚಾರಣೆಗೆ ಹಾಜರಾಗಿ ಎಂದು ಹೇಳಿದ್ದಾರೆ. ನಮ್ಮಿಂದ ಯಾವುದೇ ರೀತಿಯ ದಾಖಲಾತಿಯನ್ನು ವಶಪಡಿಸಿಕೊಂಡಿಲ್ಲ ಎಂದು ಎರಡು ಮನೆಯವರು ಹೇಳುತ್ತಿದ್ದಾರೆ.
ಸದ್ಯಕ್ಕೆ ಯಾವುದೇ ಹಣವೂ ಪತ್ತೆಯಾಗಿಲ್ಲ. ಸೋಮವಾರ ಎರಡು ಕುಟುಂಬದವರು ಮೈಸೂರಿನಲ್ಲಿರುವ ಐಟಿ ಕಚೇರಿಗೆ ಹಾಜರಾಗುತ್ತಾರೆ. ಗುರುವಾರ ಹಾಸನದಲ್ಲಿ ಸಚಿವ ರೇವಣ್ಣ ಅವರ ಆಪ್ತರ ಮತ್ತು ಸಂಬಂಧಿಕರ ಮನೆಯ ಮೇಲೆ ಐಟಿ ದಾಳಿ ಮಾಡಿದ್ದರು.