ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಎಲ್ಲೆಡೆ ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಕಾರ್ಯಗಳನ್ನು ಭರದಿಂದ ನಡೆಸುತ್ತಿದ್ದಾರೆ. ಈ ನಡುವೆಯೇ ಐಟಿ (IT) ಅಧಿಕಾರಿಗಳು ಅಲರ್ಟ್ ಆಗಿದ್ದು, ಬುಧವಾರ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಸುಮಾರು 50 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಕೆಜಿಎಫ್ ಬಾಬು (KGF Babu) ನಿವಾಸ ಸೇರಿದಂತೆ ಹಲವು ಕಾಂಗ್ರೆಸ್ (Congress) ನಾಯಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ (IT Raid) ನಡೆಸಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ ಬಳಿ ಇರುವ ಕೆಜಿಎಫ್ ಬಾಬುಗೆ ಸೇರಿದ ರುಕ್ಸಾನಾ ಪ್ಯಾಲೆಸ್ ಮೇಲೆ ದಾಳಿ ನಡೆಸಲಾಗಿದೆ. ಇದರೊಂದಿಗೆ ಹಲವು ಕಾಂಗ್ರೆಸ್ ನಾಯಕರ ನಿವಾಸದ ಮೇಲೂ ದಾಳಿ ನಡೆದಿದೆ.
ಬುಧವಾರ 6 ಗಂಟೆ ವೇಳೆಗೆ ರುಕ್ಸಾನಾ ಪ್ಯಾಲೆಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 3 ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಮನೆಯಲ್ಲಿ ದಾಖಲಾತಿ, ಲೆಕ್ಕಪತ್ರ ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ‘ಪುಷ್ಪ’ ಟೀಮ್ ಗೆ ED ಶಾಕ್: ನಿರ್ದೇಶಕ, ನಿರ್ಮಾಪಕರ ಕಚೇರಿ ಮೇಲೆ ಅಧಿಕಾರಿಗಳು ದಾಳಿ
ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಕೆಜಿಎಫ್ ಬಾಬು ಪ್ರಚಾರವನ್ನು ನಡೆಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡಿರಲಿಲ್ಲ. ಈ ಹಿನ್ನೆಲೆ ಅವರ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕೆಜಿಎಫ್ ಬಾಬು ಕಣಕ್ಕೆ ಇಳಿಸಿದ್ದಾರೆ.
ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಯಾರೆಲ್ಲ ನಮ್ಮೊಂದಿಗೆ ಇದ್ದಾರೆ ಅವರ ಮೇಲೆಲ್ಲಾ ಐಟಿ ದಾಳಿ ನಡೆಯುತ್ತಿದೆ. ಹೆದರಿಸಿ ಬೆದರಿಸಿ ಕಾಂಗ್ರೆಸ್ ಹೆಸರಿನ ಮೇಲೆ ಎಲ್ಲವೂ ಮಾಡುತ್ತಿದ್ದಾರೆ. ಕಾಂಗ್ರೆಸ್ನವರನ್ನು ಹೆದರಿಸೋಕೆ ಅವರು ಏನು ಬೇಕಾದರೂ ಮಾಡಲಿ. ಅವರು ಏನೇ ಮಾಡಿದರೂ ನಾವು ರಾಜ್ಯದಲ್ಲಿ ಬದಲಾವಣೆ ತರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಬರಲಿದ್ದಾರೆ ಮೋದಿ, ಯೋಗಿ – ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಯಾರಿದ್ದಾರೆ?