ತುಮಕೂರು: ನನ್ನ ಮೇಲೆ ಐಟಿ ದಾಳಿ ಆದರೆ ಅದಕ್ಕೆ ದೇವೇಗೌಡರೇ ಕಾರಣ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಪರಮೇಶ್ವರ್ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಕುರಿತು ನಗರದಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಐಟಿ ದಾಳಿಯಾದರೆ ಅದಕ್ಕೆ ದೇವೇಗೌಡರೇ ಕಾರಣ. ಏಕೆಂದರೆ ಸೋತಿದ್ದಾರೆ, ಹೀಗಾಗಿ ನನ್ನ ವಿರುದ್ಧ ಪತ್ರ ಬರೆಯುತ್ತಾರೆ. ಏನು ಕೆಲಸ ಇರಲ್ಲ ಕೂತು ಪತ್ರ ಬರೆಯುತ್ತಾರೆ ಎಂದರು.
ನಾನು ದಾಳಿಗೆ ಹೆದರುವುದಿಲ್ಲ. ನನ್ನ ಮೇಲೆ ಐಟಿ ದಾಳಿಯಾದಲ್ಲಿ ನಾನೂ ಪತ್ರ ಬರೆಯುತ್ತೇನೆ. ದೇವೇಗೌಡರ ಆಸ್ತಿಯನ್ನು ತನಿಖೆ ಮಾಡಲು ನಾನು ಒತ್ತಾಯಿಸುತ್ತೇನೆ. ಅವರ ಕುಟುಂಬದ ಎಲ್ಲವನ್ನೂ ತನಿಖೆ ಮಾಡುವಂತೆ ನಾನೂ ಪತ್ರ ಬರೆಯುತ್ತೇನೆ ಎಂದರು.
ನಾಳೆ, ನಾಡಿದ್ದು ನಮ್ಮ ಮೇಲೂ ಐಟಿ ದಾಳಿ ಆಗುತ್ತದೆ ಎಂದುಕೊಂಡಿದ್ದೇನೆ. ಅದಕ್ಕೆಲ್ಲ ತಯಾರಿದ್ದೇವೆ. ನಮಗೂ ಎಲ್ಲ ಕಡೆ ಗುಪ್ತಚರ ಮಾಹಿತಿ ಬರುತ್ತೆ. ಐಟಿ ಅಧಿಕಾರಿಗಳು ದಾಳಿ ಮಾಡಬಹುದು, ಮಾಡಲಿ ನಮ್ಮದೇನು ತೊಂದರೆ ಇಲ್ಲ ಎಂದು ತಿಳಿಸಿದರು.
ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ತುಂಬಾ ಒಳ್ಳೆಯ ಹುಡುಗ, ಈ ಹಿಂದೆ ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್ ಬಳಿ ಕೆಲಸ ಮಾಡುತ್ತಿದ್ದ, ಈಗ ಪರಮೇಶ್ವರ್ ಬಳಿ ಇದ್ದ. ಎಲ್ಲವನ್ನೂ ಎದುರಿಸಬೇಕಿತ್ತು. ಅದನ್ನು ಬಿಟ್ಟು ಸಾಯುವ ತೀರ್ಮಾನ ಮಾಡಿದ್ದು ತಪ್ಪು. ಅವನ ಸಾವಿಗೆ ವಿಷಾದ ವ್ಯಕ್ತಪಡಿಸ್ತೇನೆ. ಐಟಿ ಅವರೇನೂ ಸಾಯಿಸಬೇಕು ಎಂದು ಬರಲ್ಲ. ಅವರ ಕೆಲಸ ಅವರು ಮಾಡಿದ್ದಾರೆ. ಐಟಿಯಿಂದ ಸತ್ತ ಎಂದು ನಾನು ಹೇಳಲ್ಲ ಎಂದರು.
ಐಟಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎನ್ನುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ತಪ್ಪು ಮಾಡುತ್ತಾರೋ ಅವರ ಮೇಲೆ ಐಟಿ ದಾಳಿಯಾಗುತ್ತದೆ. ಐಟಿ ದೃಷ್ಟಿಯಲ್ಲಿ ನಾನು ತಪ್ಪು ಮಾಡಿರಬಹುದು. ಆದರೆ ಜನರ ದೃಷ್ಟಿಯಲ್ಲಿ ನಾನು ತಪ್ಪು ಮಾಡಿಲ್ಲ ಎಂದರು.
ಇಡಿ ನೋಟಿಸ್, ವಿಚಾರಣೆ ಕುರಿತು ಪ್ರತಿಕ್ರಿಯಿಸಿದ ಅವರು, ನನಗೂ ಇಡಿ ವಿಚಾರಣೆಗೂ ಸಂಬಂಧವೇ ಇಲ್ಲ. ಕೆಲವು ಮಾಹಿತಿಗಳನ್ನು ಇಡಿಯವರು ಕೇಳಿದ್ದಾರೆ. ಅದನೆಲ್ಲ ತಗೊಂಡು ಹೋಗಿ ನಾಳೆ ಕೊಟ್ಟು ಬರುತ್ತೇನೆ. ಇನ್ನೊಂದು ಬಾರಿ ನೋಟಿಸ್ ನೀಡಬೇಡಿ, ಯಾವಾಗ ಬೇಕೋ ಅವಾಗ ನಾನೇ ಬರುತ್ತೇನೆ ಎಂದು ಹೇಳಿದ್ದೇನೆ. ಲಕ್ಷ್ಮೀ ಹೆಬ್ಬಾಳ್ಕರ್ ಮಾಲೀಕತ್ವದ ಹರ್ಷ ಶುಗರ್ಸ್ಗೆ ಸಾಲ ಕೊಟ್ಟಿರುವ ಬಗ್ಗೆ ಕೇಳಿದರು. ಅದರ ಜೊತೆಗೆ ನನ್ನ ವರಮಾನ ಬಗ್ಗೆನೂ ಕೇಳಿದರು ಅದನ್ನೂ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.