ಧಾರವಾಡ: ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯಬೇಕು ಎಂಬ ದೃಷ್ಠಿಯಿಂದ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವನ್ನು ರಚನೆ ಮಾಡಲಾಗಿದ್ದು, ಇದನ್ನು ಅನುಷ್ಠಾನಕ್ಕೆ ತಂದಿದ್ದೆ ಆದಲ್ಲಿ, ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಕನ್ನಡದ ಚಳವಳಿಯನ್ನು ಹುಟ್ಟು ಹಾಕಿದ ಧಾರವಾಡ ಜಿಲ್ಲೆಯಲ್ಲೂ ಕನ್ನಡದ ಅನುಷ್ಠಾನ ಅರ್ಧಕ್ಕರ್ಧ ಆಗಿದೆ. ಇದಕ್ಕೆ ಅಧಿಕಾರಿಗಳ ಇಚ್ಛಾಶಕ್ತಿ ಹಾಗೂ ತಾತ್ಸಾರ ಭಾವನೆ ಕಾರಣ ಇರಬಹುದು. ಧಾರವಾಡವನ್ನು ಮಾದರಿ ಮಾಡುವ ಆಸೆ ನನಗಿದೆ. ಇಲ್ಲಿ ಕನ್ನಡದ ಅನುಷ್ಠಾನ ಅಚ್ಚುಕಟ್ಟಾಗಿ ಆಗಬೇಕಿದೆ ಎಂದರು. ಇದನ್ನೂ ಓದಿ: ನಡು ರಸ್ತೆಯಲ್ಲೇ ಜಿ.ಪಂ. ಸದಸ್ಯನಿಗೆ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿದ್ರು
ಕನ್ನಡ ಭಾಷೆ ಮೇಲಾಗುತ್ತಿರುವ ಅನ್ಯಾಯವನ್ನು ತಡೆಗಟ್ಟುವ ಉದ್ದೇಶಕ್ಕಾಗಿ ಕಾನೂನು ಆಯೋಗದ ಸಹಕಾರದೊಂದಿಗೆ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವನ್ನು ರಚಿಸಿ, ಒಂದು ವಾರದ ಹಿಂದೆ ಕಾನೂನು ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಕೊಟ್ಟಿದ್ದೇವೆ. ಸಿಎಂ ಅವರಿಗೂ ಈ ವಿಧೇಯಕವನ್ನು ನೀಡಲಿದ್ದೇವೆ. ಸರೋಜಿನಿ ಮಹಿಷಿ ವರದಿಯಲ್ಲಿ ಅಂಶಗಳನ್ನೇ ಈ ವಿಧೇಯಕದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಎಲ್ಲಾ ವರದಿಗಳಿಗೂ ಕಾನೂನಿನ ಬಲ ಇಲ್ಲ. ವರದಿಗಳಿಗೆ ಬಲ ಬರಬೇಕಾದರೆ ಅವುಗಳು ಕಲಾಪದಲ್ಲಿ ಪಾಸಾಗಬೇಕು. ಧಾರವಾಡದಲ್ಲಿ ಮಾತ್ರ ಕನ್ನಡ ಅರ್ಧಕ್ಕರ್ಧ ಅನುಷ್ಠಾನಗೊಂಡಿಲ್ಲ. ಬೆಂಗಳೂರಿನಲ್ಲೂ ಭಾಷೆಯ ಸಮಸ್ಯೆ ಇದೆ. ಬೆಂಗಳೂರಿನಲ್ಲೂ ಭಾಷೆ ಅರ್ಧಕ್ಕರ್ಧ ಅನುಷ್ಠಾನಗೊಂಡಿದೆ. ಕನ್ನಡದ ಜಾಲತಾಣಗಳ ಮುಖಪುಟ ಮಾತ್ರ ಕನ್ನಡದಲ್ಲಿವೆ. ಕೇಂದ್ರೀಯ ವಿದ್ಯಾಲಯದ ಸಿಬಿಎಸ್ಸಿ ಪಠ್ಯಕ್ರಮದಲ್ಲಿ ಕನ್ನಡ ಇಲ್ಲ. ಅವು ತಮ್ಮದೇ ಆದಂತ ತೀರ್ಮಾನಗಳನ್ನು ತೆಗೆದುಕೊಂಡಿವೆ. ಐಚ್ಛಿಕ ವಿಷಯವಾಗಿ ಕನ್ನಡವನ್ನು ತೆಗೆದುಕೊಂಡಿವೆ. ಈ ನೆಲದ ಕಾನೂನನ್ನು ಯಾರೂ ಪಾಲಿಸುತ್ತಿಲ್ಲ ಎಂದು ಕಿಡಿಕಾರಿದರು.