ಸರ್ಕಾರ‌ 1 ವರ್ಷ ಪೂರೈಸಿದ್ದು ಮುಖ್ಯವಲ್ಲ, ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿರುವುದು ಮುಖ್ಯ: ಡಿಕೆಶಿ

Public TV
1 Min Read
d.k.shivakumar KPCC

ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಕೆಪಿಸಿಸಿ ಘಟಕದಿಂದ ಸನ್ಮಾನ ಮಾಡಲಾಯಿತು.

ಕೆಪಿಸಿಸಿ (KPCC) ಕಚೇರಿಯ ಸನ್ಮಾನದ ಸಂದರ್ಭದಲ್ಲಿ‌ ಮಾತನಾಡಿದ ಅವರು, ಸರ್ಕಾರ ಒಂದು ವರ್ಷ ಪೂರೈಸಿದ್ದು ಮುಖ್ಯವಲ್ಲ, ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಅದು ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಇನ್ನುಮುಂದೆ ಪೆನ್‌ಡ್ರೈವ್ ಬಗ್ಗೆ ಮಾತನಾಡೋದೆ ಬೇಡ: ಜಿ.ಸಿ ಚಂದ್ರಶೇಖರ್

D.K.Shivakumar

ಬಿಬಿಎಂಪಿ ಎಲೆಕ್ಷನ್ ಬಗ್ಗೆ ಈಗ ಚರ್ಚೆ ಬೇಡ. ಇನ್ನೂ ಟೈಮ್ ಇದೆ. ರಾಜೀವ್ ಗಾಂಧಿ ತಂದ ತಿದ್ದುಪಡಿಯಿಂದಲೇ ಸ್ಥಳೀಯ ಸಂಸ್ಥೆಗಳಿಗೆ ಎಲೆಕ್ಷನ್ ನಡೀತಿರೋದು. ಇದಕ್ಕೆಲ್ಲಾ ನೀವು ತಯಾರಿ ಮಾಡಿಕೊಳ್ಳಬೇಕು. ಎಂಪಿ ಎಲೆಕ್ಷನ್‌ನಲ್ಲಿ ಗೆದ್ವೋ ಸೋತ್ವೋ ಮುಖ್ಯವಲ್ಲ. ಎಲ್ಲಾ ಸೆಲ್‌ಗಳಲ್ಲಿ ಲೀಡರ್‌ಗಳು ಆ್ಯಕ್ಟೀವ್ ಆಗಿರಬೇಕು. ಇಲ್ಲಾಂದ್ರೆ ಡಿಸಾಲ್ವ್ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಬೂತ್ ಮಟ್ಟದಲ್ಲಿ ಲೀಡ್ ಕೊಡಬೇಕು, ಇಲ್ಲಾಂದ್ರೆ ಅಧಿಕಾರ ಯಾರೂ ಕೇಳಬಾರದು. ಖಾದಿ ಬಟ್ಟೆ, ಒಂದು ಕಾರ್ ಇಟ್ಕೊಂಡು ಎಂಎಲ್ಎ, ಎಂಎಲ್‌ಸಿ ಮಾಡಿ ಅಂದ್ರೆ ಆಗಲ್ಲ. ಲೀಡ್ ತಂದುಕೊಡಬೇಕು. ಇಲ್ಲಾಂದ್ರೆ ಹೊಸಬರನ್ನ ತಯಾರಿ ಮಾಡ್ತೀವಿ. ಮೂರ್ನಾಲ್ಕು ತಿಂಗಳಲ್ಲಿ ಪ್ಲ್ಯಾನ್ ಆಫ್ ಆಕ್ಷನ್ ರೆಡಿ ಮಾಡ್ತೀವಿ. ಎಲ್ಲದಕ್ಕೂ ತಾವು ತಯಾರಾಗಿರಬೇಕು. ನಾಲ್ಕು ವೋಟ್ ಹಾಕಿಸದೆ ಬಂದು ಸ್ಥಾನ ಕೇಳ್ತಿರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಡಿಕೆಶಿ ರಕ್ಷಣೆಗೆ ಸಿಎಂ, ಸರ್ಕಾರ ನಿಂತಿದೆ: ಹೆಚ್‍ಡಿಕೆ ಆರೋಪ

ಮೊದಲು ನಿಮ್ಮ ಬೂತ್‌ನಲ್ಲಿ ಸಂಘಟನೆ ಮಾಡಿ. ಬೂತ್ ಲೀಡ್ ಕೊಡಿಸಿ ಬಂದು ನಾಯಕತ್ವ ಕೇಳಿ. ಇಲ್ಲದೆ ಹೊದ್ರೆ ನಾಯಕತ್ವ ಕೊಡಲ್ಲ. ಬಿಳಿ‌ ಜುಬ್ಬಾ, ಬಿಳಿ‌ ಕಾರು ತೆಗೆದುಕೊಂಡು ಬಂದು ಸ್ಥಾನ ಕೇಳೋದಲ್ಲ. ಮೊದಲು ಸಂಘಟನೆ ‌ಮಾಡಿ, ಇಲ್ಲ ಜಾಗ ಖಾಲಿ ಮಾಡಿ. ನಾವು ಹೊಸ ‌ನಾಯಕತ್ವ ಬೆಳೆಸುತ್ತೇವೆ. ನಾನು ಸದ್ಯ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಇನ್ನೂ ಎಷ್ಟು ದಿನ ಇರ್ತೇನೆ ಅನ್ನುವುದು ಗೊತ್ತಿಲ್ಲ. ನಮ್ಮ ಪಕ್ಷದ ನಾಯಕತ್ವ ಬುನಾದಿ ಗಟ್ಟಿ ಮಾಡಬೇಕು. ಬೂತ್ ಮಟ್ಟದಲ್ಲಿ ಗಟ್ಟಿ ಮಾಡಬೇಕು ಎಂದು ಕರೆ ನೀಡಿದರು.

Share This Article