ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಚಿವರ ಆಪ್ತರಾದ ಗನ್ ಇಸ್ಮಾಯಿಲ್, ಯುಗೇಂಧರ್ ಮತ್ತು ವಂದಿತ್ ರೆಡ್ಡಿ ಕಚೇರಿ ಮತ್ತು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಸ್ಮಾಯಿಲ್ ಎಂಬವರು ಗನ್ ಮಾರುವ ಅಂಗಡಿಯನ್ನು ಹೊಂದಿದ್ದು, ಸಚಿವ ಕೆಜೆ ಜಾರ್ಜ್ ಆರ್ಥಿಕ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಬಿಬಿಎಂಪಿ ಹಾಗೂ ಬಿಡಿಎ ಕಾಮಗಾರಿಗಳ ಗುತ್ತಿಗೆಯನ್ನು ಪಡೆಯುವ ಕೆಲಸವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಜಾರ್ಜ್ ಅವರ ಮಗ ರಾಣಾ ಅವರ ಜೊತೆ ಆಪ್ತವಾಗ ಕಾಣಿಸಿಕೊಳ್ಳುತ್ತಿದ್ದರು. ಇವರ ಮೇಲೆ ಗುರುವಾರ ಐಟಿ ದಾಳಿ ನಡೆಸಿದೆ.
ವಂದಿತ್ ರೆಡ್ಡಿ ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಮೂಲದವರಾಗಿದ್ದು, ನಗರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದಾರೆ. ರಾಣಾ ಆಪ್ತವಲಯದಲ್ಲಿ ವಂದಿತ್ ಗುರುತಿಸಿಕೊಂಡಿದ್ದರು. ಅಲ್ಲದೇ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೂ ಆಪ್ತ ಎನ್ನಲಾಗಿದೆ. ಬೆಂಳೂರು ಕೆರೆಗಳ ಪುನರುತ್ಥಾನ ಉಸ್ತುವಾರಿಯನ್ನು ಟೆಂಡರ್ ಇಲ್ಲದೆಯೇ ನೀಡಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿವೆ.
ಐಟಿ ದಾಳಿಗೊಳಗಾದ ಯುಗೇಂಧರ್ ಸಹ ಗುತ್ತಿಗೆದಾರರಾಗಿದ್ದು, ಜಾರ್ಜ್ ಅವರ ವೈಯಕ್ತಿಕ ವ್ಯವಹಾರದ ಜವಾಬ್ದಾರಿಯನ್ನು ಹೊಂದಿದ್ದರು ಎನ್ನಲಾಗಿದೆ.
ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಹ ಕೆಜೆ ಜಾರ್ಜ್ ಅವರ ಹೆಸರು ಕೇಳಿ ಬಂದಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆಗಾಗಿ ಫೆಬ್ರವರಿ 10 ಅಥವಾ 12 ರೊಳಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ ಯಾವುದೇ ವೇಳೆ ಅಗತ್ಯ ಬಿದ್ದರೆ ಜಾರ್ಜ್ರನ್ನು ಸಿಬಿಐ ವಶಕ್ಕೆ ಪಡೆಯುವ ಸಂಭವವಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಭಾನುವಾರ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸಲಿದ್ದು, ನಂತರ ಸಿಬಿಐ ಬ್ರಹ್ಮಾಸ್ತ್ರ ಪ್ರಯೋಗ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ರಾಜ್ಯ ಸರ್ಕಾರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಆರ್. ಅಶೋಕ್ ಮೇಲೆ ಎಸಿಬಿ ಹಲವು ಭೂಹಗರಣಗಳ ಕುರಿತು ಕೇಸು ದಾಖಲಿಸುತ್ತಿದ್ದಂತೆ ಜಾರ್ಜ್ ಆಪ್ತರ ಮನೆಗಳ ಮೇಲೆ ಐಟಿ ದಾಳಿ ಮಾಡಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
https://www.youtube.com/watch?v=jcIkDVzctzY