ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ನೀಡಿರುವ ಐಟಿ ಇಲಾಖೆ, ರಮೇಶ್ ಅವರನ್ನು ಯಾವುದೇ ವಿಚಾರಣೆಗೆ ಒಳಪಡಿಸಿಲ್ಲ ಎಂದು ತಿಳಿಸಿದೆ.
ಪ್ರಕರಣದ ಸಂಬಂಧ ಐಟಿ ಇಲಾಖೆಯಿಂದ ಮಾಧ್ಯಮಗಳಿಗೆ ಸ್ಪಷ್ಟನೆ ಲಭಿಸಿದ್ದು, ಮೃತ ರಮೇಶ್ ಅವರ ಮನೆಯಲ್ಲಿ ನಮ್ಮ ತಂಡ ಶೋಧ ಕಾರ್ಯ ನಡೆಸಿಲ್ಲ. ಅಲ್ಲದೇ ರಮೇಶನಿಂದ ಯಾವುದೇ ರೀತಿಯ ಹೇಳಿಕೆಯನ್ನು ಸಹ ಪಡೆದಿಲ್ಲ. ಐಟಿ ಆಕ್ಟ್ ಸೆಕ್ಷನ್ 131, 132 ರ ಅಡಿಯಲ್ಲಿ ಯಾವುದೇ ಹೇಳಿಕೆಯನ್ನು ಕೂಡ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಐಟಿಯವ್ರ ಬಳಿಯೇ ಆತ್ಮಹತ್ಯೆ ಮಾಡ್ಕೊಳ್ಳೋದಾಗಿ ಹೇಳಿದ್ದರು: ರಮೇಶ್ ಪತ್ನಿ
ಅಕ್ಟೋಬರ್ 10ರಂದು ಪರಮೇಶ್ವರ್ ನಿವಾಸಕ್ಕೆ ನಮ್ಮ ಅಧಿಕಾರಿಗಳ ತಂಡ ಪರಿಶೀಲನೆಗೆ ತೆರಳಿತ್ತು. ಈ ವೇಳೆ ಪರಮೇಶ್ವರ್ ಕಾರ್ಯಕ್ರಮದ ನಿಮಿತ್ತ ಕೊರಟಗೆರೆಗೆ ತೆರಳಿದ್ದಾರೆ ಎಂದು ಮಾಜಿ ಡಿಸಿಎಂ ಪತ್ನಿ ತಿಳಿಸಿದರು. ಮಾಹಿತಿ ತಿಳಿದ ಕೂಡಲೇ ನಮ್ಮ ತಂಡ ಕೊರಟಗೆರೆಗೆ ತೆರಳಿ ಭದ್ರತೆಯೊಂದಿಗೆ ಬೆಂಗಳೂರಿನ ನಿವಾಸಕ್ಕೆ ಕರೆತರಲಾಗಿತ್ತು. ಪರಮೇಶ್ವರ್ ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸುತ್ತಿರುವ ವೇಳೆ ಪಿಎ ರಮೇಶ್ ಉಪಸ್ಥಿತರಿದ್ದರು. ಸಂಪೂರ್ಣ ತಪಾಸಣೆಯ ವೇಳೆ ಅವರು ಅಲ್ಲಿಯೇ ಇದ್ದರು. ಆ ವೇಳೆ ಪಂಚನಾಮೆಗೆ ರಮೇಶ್ ಹೇಳಿಕೆಯನಷ್ಟೇ ಪಡೆದುಕೊಂಡಿದ್ದೇವೆ ಎಂದು ಐಟಿ ಹೇಳಿದೆ. ಇದನ್ನು ಓದಿ: ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದೇನೆ, ಪತ್ನಿ-ಮಕ್ಕಳಿಗೆ ಟಾರ್ಚರ್ ಕೊಡ್ಬೇಡಿ: ರಮೇಶ್
ಪರಮೇಶ್ವರ್ ಮನೆಯಲ್ಲಿ ಅಕ್ಟೋಬರ್ 10 ರಂದು ಆರಂಭವಾದ ತಪಾಸಣೆ ಅ.12 ಬೆಳಗಿನ 2:45 ರ ಜಾವದವರೆಗೆ ನಡೆದಿದೆ. ಅಲ್ಲಿಯವರೆಗೂ ರಮೇಶ್ ಅವರ ಮನೆಯಲ್ಲಿಯೇ ಇದ್ದರು ಎಂದು ವಿವರಗಳನ್ನು ನೀಡಿದೆ.
ಇತ್ತ ಪರಮೇಶ್ವರ್ ಆಪ್ತ ಆತ್ಮಹತ್ಯೆ ಹಿನ್ನೆಲೆಯಲ್ಲಿ ಐಟಿ ಕೇಂದ್ರ ಕಚೇರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಡಿಸಿಎಂ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ಮುನ್ನೆಚ್ಚರಿಕೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಬೆಂಗಳೂರಿನ ಕ್ವೀನ್ಸ್ ರೋಡ್ ನಲ್ಲಿರೋ ಐಟಿ ಕಚೇರಿ ಎದುರು ಒಂದು ಸಿಆರ್ ತುಕಡಿ ನಿಯೋಜಿಸಲಾಗಿದ್ದು, ಗೇಟ್ ಗಳಿಗೆ ಬೀಗ ಹಾಕಲಾಗಿದ್ದು, ಇಂದು ಐಟಿ ಕಚೇರಿ ರಜೆ ಎಂಬ ಬೋರ್ಡ್ ಕೂಡ ಗೇಟ್ಗೆ ಹಾಕಿದ್ದಾರೆ. ಇದನ್ನು ಓದಿ: ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಹೊಣೆ: ಸಿದ್ದರಾಮಯ್ಯ
https://www.youtube.com/watch?v=leX5_YpaTpc