– ಉಪಚುನಾವಣೆಗಾಗಿ ರೌಡಿಶೀಟರ್ ಮೊರೆ ಹೋಯ್ತಾ ಕಾಂಗ್ರೆಸ್?
ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ರೌಡಿಶೀಟರ್ ಯಶಸ್ವಿನಿ ಸನ್ಮಾನ ಮಾಡಿದ್ರೆ, ಇತ್ತ ಕಾಂಗ್ರೆಸ್ ಕಚೇರಿಯಲ್ಲಿ ರೌಡಿಶೀಟರ್ ಕಾಣಿಸಿಕೊಂಡಿದ್ದಾನೆ.
ಹೌದು. ಐಎಂಎ ಪ್ರಕರಣದಲ್ಲಿಯೂ ಆರೋಪಿಯಾಗಿರುವ ರೌಡಿ ಶೀಟರ್ ಇಸ್ತಿಯಾಕ್ ಪೈಲ್ವಾನ್ ಇಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭೇಟಿ ಮಾಡಿದ್ದಾನೆ. ಅಲ್ಲದೆ ಕೆಲ ಹೊತ್ತು ಮಾತುಕತೆ ಕೂಡ ನಡೆಸಿದ್ದಾನೆ. ಈ ಮೂಲಕ ಕಾಂಗ್ರೆಸ್ ನಾಯಕರು ಶಿವಾಜಿನಗರ ಉಪಚುನಾವಣೆ ಕುರಿತು ಚರ್ಚೆಗೆ ಇಸ್ತಿಯಾಕ್ ಕರೆಸಿಕೊಂಡ್ರಾ ಅನ್ನೋ ಅನುಮಾನ ಮೂಡಿದೆ.
ಯಾರು ಈ ಇಸ್ತಿಯಾಕ್?
ಇಸ್ತಿಯಾಕ್ ಪೈಲ್ವಾನ್ ವಿರುದ್ಧ ಕೊಲೆ, ಬೆದರಿಕೆ, ಕೊಲೆಯತ್ನ ಸೇರಿ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಇತ್ತೀಚೆಗೆ ಗಲಾಟೆ ಕೇಸ್ ಕೂಡ ದಾಖಲಾಗಿದೆ. ಐಎಂಎ ಕೇಸ್ ನಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ಈತನ ಮೇಲಿದ್ದು, ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಇಸ್ತಿಯಾಕ್ ಪತ್ನಿ ಫರೀದಾ ಇಸ್ತಿಯಾಕ್ ಹಾಲಿ ಕಾರ್ಪೊರೇಟರ್ ಆಗಿದ್ದು, ಇಸ್ತಿಯಾಕ್ ಸ್ಥಳೀಯ ಕಾಂಗ್ರೆಸ್ ಮುಖಂಡನಾಗಿದ್ದಾನೆ.
ಕಮಿಷನರ್ಗೆ ಸನ್ಮಾನ:
ಇತ್ತ ಮೀಟರ್ ಬಡ್ಡಿ ದುಡ್ಡಿಗೆ ಅಮಾಯಕರ ಪ್ರಾಣ ತೆಗೆದಿದ್ದು ಅಲ್ಲದೆ ಹಣ ಕೊಡಲಿಲ್ಲ ಅಂದರೆ ಚಪ್ಪಲಿ ಕಾಲಿನಲ್ಲೇ ಒದೀತಿದ್ದಾಕೆ ಇದೀಗ ಸಾಮಾಜಿಕ ಕಾರ್ಯಕರ್ತೆ ವೇಷ ಹಾಕಿ ಈಗ ಕಮಿಷನರ್ ಅವರಿಗೇ ಸನ್ಮಾನ ಮಾಡಿರುವುದು ಬೆಳಕಿಗೆ ಬಂದಿದೆ. ರೌಡಿ ಯಶಸ್ವಿನಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ಗೆ ಸನ್ಮಾನ ಮಾಡಿದ್ದಾರೆ. ಶ್ರೀರಾಮಸೇನೆಯ ಮುತಾಲಿಕ್ ಜೊತೆ ನಿಂತು ಭಾಸ್ಕರ್ ರಾವ್ ಅವರಿಗೆ ಶಾಲು ಹೊದಿಸಿ, ಗಂಧದ ಹಾರ ಹಾಕಿದ್ದಾರೆ. ಯಶಶ್ವಿನಿ ಮತ್ತು ಈಕೆಯ ಪತಿ ದಡಿಯಾ ಮಹೇಶ್ ಅವರ ಸನ್ಮಾನವನ್ನು ನಗುಮೊಗದಿಂದಲೇ ಭಾಸ್ಕರ್ ರಾವ್ ಸ್ವೀಕರಿಸಿದ್ದಾರೆ.
ಸದ್ಯ ಶ್ರೀ ರಾಮಸೇನೆಯಲ್ಲಿ ಗುರುತಿಸಿಕೊಂಡಿರುವ ಯಶಸ್ವಿನಿ, ಈಗ ಕಮಿಷನರ್ ಗೆ ಸನ್ಮಾನ ಮಾಡಿದ ಫೊಟೊಗಳು ವೈರಲ್ ಆಗುತ್ತಿವೆ. ರೌಡಿಗಳಿಂದ ಸನ್ಮಾನ ಮಾಡಿಸಿಕೊಂಡ ಕಮೀಷನರ್ ಭಾಸ್ಕರ್ ರಾವ್ ನಡೆಗೆ ಆಕ್ರೋಶ ವ್ಯಕ್ತವಾಗಿದೆ.