– ಹಲವು ತಿಂಗಳ ಹಿಂದೆಯೇ ಇಸ್ಕಾನ್ನ ಎಲ್ಲಾ ಸ್ಥಾನಗಳಿಂದ ಚಿನ್ಮಯ್ ವಜಾ ಎಂದು ಸ್ಪಷ್ಟನೆ
ಢಾಕಾ: ಬಾಂಗ್ಲಾ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಸಂತ ಚಿನ್ಮಯ್ ಕೃಷ್ಣದಾಸ್ ಅವರಿಂದ ಇಸ್ಕಾನ್ ಅಂತರ ಕಾಯ್ದುಕೊಂಡಿದೆ. ಚಿನ್ಮಯ್ ಅವರ ನಡಾವಳಿಗೂ ಇಸ್ಕಾನ್ (ISKCON) ಸಂಸ್ಥೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಸ್ಕಾನ್ ಬಾಂಗ್ಲಾದೇಶದ ಪ್ರಧಾನ ಕಾರ್ಯದರ್ಶಿ ಚಾರು ಚಂದ್ರದಾಸ್ ಬ್ರಹ್ಮಚಾರಿ ಅವರು, ಶಿಸ್ತಿನ ಉಲ್ಲಂಘನೆಯಿಂದಾಗಿ ಸನ್ಯಾಸಿ ಚಿನ್ಮಯ್ರನ್ನು (Chinmoy Krishna Das) ಸಂಸ್ಥೆಯ ಎಲ್ಲಾ ಸ್ಥಾನಗಳಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳ ಸುರಕ್ಷತೆ ಖಚಿತಪಡಿಸಿ: ಚಿನ್ಮಯ್ ಕೃಷ್ಣ ದಾಸ್ ಬಂಧಿಸಿದ್ದಕ್ಕೆ ಬಾಂಗ್ಲಾಗೆ ಭಾರತ ತರಾಟೆ
ಈ ತಿಂಗಳ ಆರಂಭದಲ್ಲಿ ಬಂಧಿತರಾದ ಚಿನ್ಮಯ್ ಕೃಷ್ಣದಾಸ್ ಅವರ ಚಟುವಟಿಕೆಗಳಲ್ಲಿ ಇಸ್ಕಾನ್ ಯಾವುದೇ ಜವಾಬ್ದಾರರಲ್ಲ ಎಂದು ಚಾರು ಚಂದ್ರದಾಸ್ ಅವರು ತಿಳಿಸಿದ್ದಾರೆ.
ಹಲವು ತಿಂಗಳ ಹಿಂದೆಯೇ ಪ್ರಬಾರತಕ್ ಶ್ರೀಕೃಷ್ಣ ಮಂದಿರದ ಮುಖ್ಯಸ್ಥ ಗೌರಂಗ್ ದಾಸ್ ಮತ್ತು ಚಿತ್ತಗಾಂಗ್ನ ಶ್ರೀ ಪುಂಡರೀಕ್ ಧಾಮದ ಮುಖ್ಯಸ್ಥ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಶಿಸ್ತು ಉಲ್ಲಂಘನೆಯ ಕಾರಣದಿಂದ ಇಸ್ಕಾನ್ನ ಎಲ್ಲಾ ಸಾಂಸ್ಥಿಕ ಚಟುವಟಿಕೆಗಳಿಂದ ತೆಗೆದುಹಾಕಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ವಕೀಲ ಸೈಫುಲ್ ಇಸ್ಲಾಂ ಅಲಿಫ್ ಅವರ ಸಾವಿಗೂ ಮತ್ತು ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್ನ ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್
ಇಸ್ಕಾನ್ ಬಾಂಗ್ಲಾದೇಶದಲ್ಲಿ ಎಂದಿಗೂ ಕೋಮು ಅಥವಾ ಸಂಘರ್ಷ ಪೀಡಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಮಾತ್ರ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಇಸ್ಕಾನ್ ಮೇಲೆ ನಿಷೇಧ ಹೇರುವ ಮನವಿಯನ್ನು ಢಾಕಾ ಹೈಕೋರ್ಟ್ ವಜಾಗೊಳಿಸಿದೆ. ಈ ಬೆನ್ನಲ್ಲೇ ಚಾರು ಚಂದ್ರದಾಸ್ ಅವರು ಸ್ಪಷ್ಟನೆ ನೀಡಿದ್ದಾರೆ.
ಅಕ್ಟೋಬರ್ನಲ್ಲಿ ನಡೆದ ರ್ಯಾಲಿಯಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜದ ಮೇಲೆ ಕೇಸರಿ ಧ್ವಜವನ್ನು ಹಾರಿಸಿದ್ದಕ್ಕಾಗಿ ಎಂಡಿ ಫಿರೋಜ್ ಖಾನ್ ಮತ್ತು ಇತರ 18 ಜನರ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಚಿನ್ಮಯ್ ಕೃಷ್ಣದಾಸ್ ಅವರನ್ನು ಸೋಮವಾರ ಬಂಧಿಸಲಾಗಿತ್ತು.