ಬೆಂಗಳೂರು: ಭವಿಷ್ಯದಲ್ಲಿ ರಾಜಕೀಯಕ್ಕೆ ಬರಲು ಅವಕಾಶ ಸಿಕ್ಕರೆ ನೋಡೋಣ ಎನ್ನುವ ಮೂಲಕ ರಾಜಕೀಯ ಪ್ರವೇಶದ ಬಗ್ಗೆ ಚಂದನವನದ ನಟ, ನಿರ್ದೇಶಕ ಪ್ರೇಮ್ ಸುಳಿವನ್ನು ನೀಡಿದರು.
‘ಏಕ್ ಲವ್ ಯಾ’ ಸಿನಿಮಾ ಪ್ರಚಾರಕ್ಕಾಗಿ ಬಂದ ಪ್ರೇಮ್ ರಾಜಕೀಯ ಎಂಟ್ರಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾವು ಚುನಾವಣೆಗೆ ನಿಲ್ಲದಿದ್ದರೂ, ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಪ್ರೇಮ್ ಫೌಂಡೇಶನ್ ಟ್ರಸ್ಟ್ ಮಾಡಿದ್ದೇವೆ. ಈ ಮೂಲಕ ಹಲವು ಜನರಿಗೆ ಸಹಾಯ ಮಾಡಿದ್ದೇವೆ. ನನ್ನ ತಾಯಿ ಹೆಸರಲ್ಲಿ ವಿದ್ಯಾರ್ಥಿಗಳಿಗೆ, ರೈತರಿಗಾಗಿ ಸಹಾಯ ಮಾಡಿದ್ದೇವೆ. ಇದನ್ನು ನಾವು ಹೇಳಿಕೊಳ್ಳಬೇಕು ಎಂಬುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೊನೆಗೂ ತನ್ನ ಕನಸು ನೆರವೇರಿತು ಎಂದ ಪ್ರಭಾಸ್ !
ಸಮಾಜಸೇವೆ ಎಂದರೆ ಜನರು ಇರುವಲ್ಲಿಗೆ ಹೋಗಿ ಮಾಡಬೇಕು ಎಂದು ಇಲ್ಲ. ನಮ್ಮ ಕೈಯಲ್ಲಿ ಆದ ಸಹಾಯವನ್ನು ನಾವು ಮಾಡುತ್ತಿದ್ದೇವೆ. ಅದಕ್ಕೆ ರಾಜಕೀಯಕ್ಕೆ ಬಂದು ಮಾಡಬೇಕು ಎಂಬುದಿಲ್ಲ ಎಂದು ನಕ್ಕರು.
ರಾಜಕೀಯ ವಿಷಯಕ್ಕೆ ಬಂದ್ರೆ. ನಾನು ಮಂಡ್ಯದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದೇ ಎಷ್ಟೋ ಜನರು ಹೇಳುತ್ತಿದ್ದರು. ಆದರೆ ಅಲ್ಲಿ ನನ್ನ ಅಣ್ಣ ರೆಬೆಲ್ ಸ್ಟಾರ್ ಅಂಬಿ ಇರುವವರೆಗೂ ನಾನು ಆ ಕ್ಷೇತ್ರದಲ್ಲಿ ನಿಲ್ಲುವುದಿಲ್ಲ ಎಂಬುದು ಸಹ ಎಲ್ಲರಿಗೂ ತಿಳಿದಿತ್ತು. ಅವರಿಟ್ಟ ಹೆಜ್ಜೆಯನ್ನು ನಾವು ತುಳಿಯುವುದಕ್ಕೆ ಆಗುವುದಿಲ್ಲ. ಅವರು ಮಹಾನ್ ವ್ಯಕ್ತಿ. ಭವಿಷ್ಯದಲ್ಲಿ ಏನಾದರೂ ಅವಕಾಶ ಬಂದ್ರೆ ನೋಡೋಣ ಎಂದು ರಾಜಕೀಯಕ್ಕೆ ಎಂಟ್ರಿ ಬಗ್ಗೆ ಸುಳಿವನ್ನು ಕೊಟ್ಟರು.
ನನಗೆ ಯಾವುದೇ ಪಕ್ಷಕ್ಕೆ ಸೇರಬೇಕು ಎಂಬುದಿಲ್ಲ. ಸಹಜವಾಗಿ ನನಗೆ ಎಲ್ಲ ಪಕ್ಷದಲ್ಲಿಯೂ ನನ್ನ ಹಿರಿಯರು, ಸ್ನೇಹಿತರು, ಹಿತೈಷಿಗಳು ಇದ್ದಾರೆ. ಅದಕ್ಕೆ ಇದೇ ಪಕ್ಷ ಸೇರಬೇಕು ಎಂದು ನಾನು ಹೇಳಲಾಗುವುದಿಲ್ಲ. ಪ್ರೇಮ್ ಒಬ್ಬ ರೈತರ ಮಗ ಎಂದು ಎಲ್ಲರೂ ನನಗೆ ಆರ್ಶೀವಾದವನ್ನು ಮಾಡಿದ್ದಾರೆ. ಎಲ್ಲ ಪಕ್ಷದವರು ನನ್ನನ್ನು ಪ್ರೀತಿಯಿಂದ ಕರೆಯುತ್ತಾರೆ ಎಂದರು. ಇದನ್ನೂ ಓದಿ: ಮದುವೆಗೂ ಮುನ್ನ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವಧು – ವೀಡಿಯೋ ವೈರಲ್
ಪ್ರಸ್ತುತ ನನ್ನ ‘ಏಕ್ ಲವ್ ಯಾ’ ಸಿನಿಮಾ ಬಿಡುಗಡೆಯಾಗುತ್ತಿದೆ. ಮುಂದೆ ಐತಿಹಾಸಿಕ ಸಿನಿಮಾ ಮಾಡಬೇಕು ಎಂದುಕೊಂಡಿದ್ದೇನೆ. ಸದ್ಯಕ್ಕೆ ನನಗೆ ತಲೆಯಲ್ಲಿ ಅದೇ ಇದೆ. ಅದರ ಕಡೆ ಹೆಚ್ಚು ಗಮನಕೊಡಬೇಕು. ಭವಿಷ್ಯದಲ್ಲಿ ರಾಜಕೀಯದ ಬಗ್ಗೆ ನೋಡೋಣ. ನೀವು ಇದ್ದೀರಾ ಅಲ್ಲ ನೀವು ಹೋಗಿ ಎಂದರೆ ಹೋಗೋಣ ಎಂದು ಹೇಳಿದರು.