ಕಳೆದ ಕೆಲವು ದಿನಗಳ ಹಿಂದೆ ಕಾರ್ಗೋ ಶಿಪ್ನ ಕೆಲವು ಕಂಟೇನರ್ಗಳು ಕೇರಳದ ಕೊಚ್ಚಿಯ ದಡಕ್ಕೆ ತೇಲಿ ಬಂದಿದ್ದವು. ಇದರಿಂದಾಗಿ ಕೇರಳದ ಕರಾವಳಿ ಜನರಲ್ಲಿ ಜಲಚರ ಜೀವಿಗಳನ್ನು ಆಹಾರವಾಗಿ ಸೇವಿಸುವ ಬಗ್ಗೆ ಭಯ ಹುಟ್ಟಿಕೊಂಡಿದೆ.
ಲೈಬೀರಿಯಾದ 28 ವರ್ಷ ಹಳೆಯ MSC ELSA 3 ಕಾರ್ಗೋ ಶಿಪ್ 640 ಕಂಟೇನರ್ಗಳನ್ನು ಹೊತ್ತುಕೊಂಡು ವಿಝಿಂಜಂನಿಂದ ಕೊಚ್ಚಿಗೆ ಬರುತ್ತಿತ್ತು. ಈ ಕಂಟೇನರ್ಗಳ ಮೂಲಕ ಕೆಲವು ಅಪಾಯಕಾರಿ ಸರಕುಗಳು ಸೇರಿದಂತೆ ಇಂಧನಗಳನ್ನು ಕೊಂಡೊಯ್ಯುತ್ತಿತ್ತು. ಆದರೆ ಮೇ 24ರಂದು ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು (70.376 ಕಿ.ಮೀ) ದೂರದ ಅರಬ್ಬಿ ಸಮುದ್ರದಲ್ಲಿ ಹಡಗು ಮುಳುಗಿತ್ತು. ಮುಳುಗುವ ಮುನ್ನ ಹಡಗು ಒಂದು ಭಾಗಕ್ಕೆ ವಾಲಿದ್ದರಿಂದ ಅದರಲ್ಲಿದ್ದ ಕಂಟೇನರ್ಗಳು ಸಮುದ್ರದ ಪಾಲಾಗಿದ್ದವು. ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಭಾರತದ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದರು. ಮುಳುಗಿದ ಹಡಗನ್ನು ಕೊಚ್ಚಿ ಬಂದರಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಭಾರೀ ಅಲೆಗಳು ಮತ್ತು ಗಾಳಿಯ ಪರಿಣಾಮದಿಂದಾಗಿ ಹಡಗಿನಲ್ಲಿದ್ದ ಸರಕುಗಳನ್ನು ಬೇರೆಡೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ.
ಮೇ 26ರಂದು ಕಾರ್ಗೋ ಶಿಪ್ನಲ್ಲಿದ್ದ ಕಂಟೇನರ್ಗಳು ಭಾರಿ ಅಲೆಗಳ ಹೊಡೆತಕ್ಕೆ ಕೇರಳದ ಕೊಚ್ಚಿ ದಡ ಸೇರಿಕೊಂಡಿತ್ತು. ದಡ ತಲುಪುವ ಮುನ್ನ ಹಡಗು ಮುಳುಗಿದ್ದಾಗ ಕಂಟೇನರ್ಗಳಲ್ಲಿದ್ದ ಇಂಧನ ಸೋರಿಕೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಇದರ ಪರಿಣಾಮವಾಗಿ ನೀರು ಮಲೀನಗೊಂಡಿದೆ ಎಂಬ ಭಯ ಸೃಷ್ಟಿಯಾಗಿದೆ. ಜೊತೆಗೆ ನರ್ಡಲ್ಸ್ ಎಂದು ಕರೆಯಲ್ಪಡುವ ಪ್ಲಾಸ್ಟಿಕ್ ಉಂಡೆಗಳು ಹೆಚ್ಚಿನ ಪ್ರಮಾಣದ ಮಾಲಿನ್ಯವನ್ನು ಉಂಟು ಮಾಡುತ್ತದೆ. ಹೀಗಾಗಿ ಕರಾವಳಿ ಜನರಲ್ಲಿ ಆತಂಕ ಮನೆಮಾಡಿದೆ. ಆದರೆ ತೈಲ ಸೋರಿಕೆಯ ಕುರಿತು ಈವರೆಗೂ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಕೋಸ್ಟ್ ಗಾರ್ಡ್ ಪ್ರಕಾರ, MSC ELSA 3 ಕಾರ್ಗೋ ಶಿಪ್ 84.44 ಮೆಟ್ರಿಕ್ ಟನ್ ಡೀಸೆಲ್ ಮತ್ತು 367 ಮೆಟ್ರಿಕ್ ಟನ್ ಫರ್ನೇಸ್ ಎಣ್ಣೆ ಸೇರಿದಂತೆ ಭಾರೀ ಪ್ರಮಾಣದ ಇಂಧನವನ್ನು ಸಾಗಿಸುತ್ತಿತ್ತು. 640 ಕಂಟೇನರ್ಗಳ ಪೈಕಿ 5 ಕಂಟೇನರ್ಗಳು ಪತ್ತೆಯಾಗಿವೆ. ಇದರಲ್ಲಿ 25 ಕಂಟೇನರ್ಗಳು ಕ್ಯಾಲ್ಸಿಯಂ ಕಾರ್ಬೈಡ್ ಸೇರಿ, ಹಾನಿಕಾರಕ ಕೆಮಿಕಲ್ಗಳನ್ನು ಹೊತ್ತೊಯ್ಯುತ್ತಿತ್ತು. ಈಗಾಗಲೇ ಕಂಟೇನರ್ಗಳು ಪತ್ತೆಯಾದ ಸ್ಥಳಕ್ಕೆ ಕೊಲ್ಲಂ ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಜೊತೆಗೆ ರಾಜ್ಯ ಸರ್ಕಾರ ಕಂಟೇನರ್ ಕಾಣಿಸಿಕೊಂಡರೆ ಅದರ ಬಳಿ ಹೋಗಬೇಡಿ, ಮುಟ್ಟಬೇಡಿ ಎಂದು ಮುನ್ನೆಚ್ಚರಿಕೆ ನೀಡಿತ್ತು. ಜೊತೆಗೆ ಇದರಿಂದಾಗಿ ಜಲಚರ ಜೀವಿಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆಯೂ ಇದೆ ಎಂದು ಕಳವಳ ಉಂಟುಮಾಡಿತ್ತು.
ಈ ಕುರಿತು ಹೈದರಾಬಾದ್ ಮೂಲದ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ (INCOIS) ನಿರ್ದೇಶಕ ಡಾ. ಟಿ.ಎಂ. ಬಾಲಕೃಷ್ಣನ್ ನಾಯರ್ ಅವರು ಆಲಪ್ಪುಳ ಕರಾವಳಿಯಲ್ಲಿ ತೈಲ ಸೋರಿಕೆಯಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಕೆಲವು ಏಜೆನ್ಸಿಗಳ ಪ್ರಕಾರ, ಹಡಗಿನಲ್ಲಿದ್ದ ಎಲ್ಲಾ ಡೀಸೆಲ್ ಮತ್ತು ಫರ್ನೇಸ್ ಆಯಿಲ್ ಸಮುದ್ರಕ್ಕೆ ಸೋರಿಕೆಯಾದರೆ, ಅದು ಕೇರಳ ಕರಾವಳಿಯ ಕಡೆಗೆ, ವಿಶೇಷವಾಗಿ ಆಲಪ್ಪುಳ ಮತ್ತು ತಿರುವನಂತಪುರಂ ನಡುವಿನ ಪ್ರದೇಶದ ಕಡೆಗೆ ತೇಲಿ ಬರುವ ಸಾಧ್ಯತೆಯಿದೆ ಎಂದು ತಿಳಿಸಿತ್ತು.
ಆತಂಕ ಉಂಟಾಗಿದ್ದು ಯಾಕೆ?
ಮುಖ್ಯವಾಗಿ ತೈಲವು ಸಮುದ್ರದಲ್ಲಿನ ಸಣ್ಣ ಪ್ರಭೇದಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಇದರಿಂದಾಗಿ ಮೀನುಗಾರಿಕೆ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುವುದಲ್ಲದೇ ಕರಾವಳಿ ಪ್ರದೇಶಗಳಲ್ಲಿನ ಮೀನುಗಾರರ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ಸೋರಿಕೆಯಾಗಿ ಅದು ಹರಡಿಕೊಂಡರೆ ಸಮುದ್ರದ ಉತ್ಪನ್ನಗಳಿಗೆ ಹಾನಿಯುಂಟು ಮಾಡುತ್ತದೆ. ಕೆಲವು ಮೀನಿನ ಪ್ರಬೇಧವನ್ನೇ ನಾಶಪಡಿಸಬಹುದು. ಉದಾಹರಣೆಗೆ ಮಳೆಗಾಲವು ಪೆಲಾಜಿಕ್ ಮೀನುಗಳ ಸಂತಾನೋತ್ಪತ್ತಿ ಮತ್ತು ಬೆಳವಣಿಗೆಗೆ ನಿರ್ಣಾಯಕ ಅವಧಿಯಾಗಿದೆ. ಹೀಗಾಗಿ ಅವುಗಳ ಮೇಲೆ ಶಾಶ್ವತ ಪರಿಣಾಮ ಬೀರಬಹುದು.
ಜಲಚರ ಜೀವಿಗಳನ್ನು ಆಹಾರವಾಗಿ ಸೇವಿಸುವುದು ಸುರಕ್ಷಿತನಾ?
ಕಾರ್ಗೋ ಶಿಪ್ ಮುಳುಗಿದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಸ್ತುತ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಜಲಚರ ಜೀವಗಳು ಮಾರುಕಟ್ಟೆಗೆ ಬರುತ್ತಿಲ್ಲ. ಜೊತೆಗೆ ರಾಜ್ಯ ಮೀನುಗಾರಿಕೆ ಇಲಾಖೆ ಮತ್ತು ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (CMFRI) ನೀರಿನ ಮಾದರಿಗಳನ್ನು ಸಂಗ್ರಹಿಸುವುದು ಹಾಗೂ ನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತಿದೆ. ಆದರೆ ಇಲ್ಲಿಯವರೆಗೆ, ಯಾವುದೇ ಹಾನಿಕಾರಕ ವಸ್ತುಗಳು ಇರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೆ ಈಗಾಗಲೇ ಸರ್ಕಾರವು ಜನರು ಯಾವುದೇ ಭಯವಿಲ್ಲದೇ ಜಲಚರ ಜೀವಗಳನ್ನು ಆಹಾರವಾಗಿ ಸೇವಿಬಹುದು ಎಂದು ತಿಳಿಸಿದೆ. ಜೊತೆಗೆ ಭಾರತೀಯ ಕರಾವಳಿ ರಕ್ಷಣಾ ಪಡೆ ನಡೆಸಿದ ತ್ವರಿತ ಕಾರ್ಯಚರಣೆಯಿಂದಾಗಿ ಕಂಟೇನರ್ನಿಂದ ಭಾರೀ ಪ್ರಮಾಣದ ತೈಲ ಸೋರಿಕೆ ತಪ್ಪಿಸುವಲ್ಲಿ ನೆರವಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.