ಬೆಂಗಳೂರು: ಮಾತೆತ್ತಿದ್ರೆ ಕೇರಳ ಸರ್ಕಾರ (Kerala Government) ಕರ್ನಾಟಕವನ್ನ ಬಳಸಿಕೊಳ್ತಿದೆ. ಅಷ್ಟೇ ಅಲ್ಲ ಕರ್ನಾಟಕಕ್ಕೆ ಬಂದು ಕೇರಳ ಜನಪ್ರತಿನಿಧಿಗಳು ದರ್ಬಾರ್ ನಡೆಸುವಂತಾಗಿದೆ. ಸಿಎಂ, ಡಿಸಿಎಂ ಇಬ್ಬರೂ ಅಕ್ರಮ ಅಂತೇಳಿದ್ರೂ ಹೆಲ್ಪ್ ಮಾಡಿ ಅಂತಾ ಕೆ.ಸಿ ವೇಣುಗೋಪಾಲ್ (KC Venugopal) ಆರ್ಡರ್ ಮಾಡಿದ್ದಾರೆ. ಹಾಗಾದ್ರೆ ಕೇರಳದವರ ಕರ್ಮಕ್ಕೆ ಕರ್ನಾಟಕ ಬಗ್ಗಬೇಕಾ..? ಅಕ್ರಮ ಇದ್ದರೂ ಜೀ ಹುಜೂರ್ ಅನ್ನಬೇಕಾ..? ಅನ್ನೋ ಪ್ರಶ್ನೆ ಜನರನ್ನೂ ಕಾಡುತ್ತಿದೆ.
ಅಕ್ರಮ ಒತ್ತುವರಿ ತೆರವು ಮಾಡಿದ್ದೇ ಅಪರಾಧವಾ?
ಕರ್ನಾಟಕದಲ್ಲಿ (Karnataka) ಕೇರಳ ದರ್ಬಾರ್ ಜೋರಾಗಿದೆ. ಪದೇ ಪದೇ ಕರ್ನಾಟಕದ ವಿಷಯಗಳಿಗೆ ಕೇರಳ ಮೂಗು ತೂರಿಸುತ್ತಿದೆ. ಅನವಶ್ಯಕವಾಗಿ ಕರ್ನಾಟಕದ ವಿಷಯಕ್ಕೆ ಕೇರಳ ಸಿಎಂ ಮೂಗು ತೂರಿಸಿ ರಾಜಕಾರಣ ಮಾಡುತ್ತಿದ್ದಾರೆ. ಕೇರಳ ಚುನಾವಣೆಯ ಲೆಕ್ಕಚಾರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕರ್ನಾಟಕದ ತೀರ್ಮಾನಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಕೋಗಿಲು ಲೇಔಟ್ ಅಕ್ರಮ ಮನೆ ತೆರವುದಾರರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ದೆಹಲಿಯ ಕೇರಳ ಮೂಲದ ನಾಯಕರಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ರಾಜ್ಯ ಸರ್ಕಾರದ ತೆರವು ಕಾರ್ಯಾಚರಣೆ ಕಾನೂನು ಬದ್ಧವಾಗಿದ್ದರೂ ಕೇರಳ ಕಾಂಗ್ರೆಸ್ಗೆ ತೀವ್ರ ಮುಜುಗರ ಸೃಷ್ಟಿ ಆಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಎಂಟ್ರಿಯಿಂದ ರಾಜಕೀಯ ಜಟಾಪಟಿಗೆ ತಿರುಗಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮಧ್ಯಪ್ರವೇಶಿಸಿದ್ದಾರೆ. ಸಿಎಂ, ಡಿಸಿಎಂ ಜೊತೆ ಮಾತುಕತೆ ನಡೆಸಿರುವ ವೇಣುಗೋಪಾಲ್, ಮಾನವೀಯತೆ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ. ಸಿಎಂ, ಡಿಸಿಎಂ ಇಬ್ಬರೂ ಇದು ಅಕ್ರಮ ಅಂತೇಳಿದ್ರೂ ವೇಣುಗೋಪಾಲ್ ಆರ್ಡರ್ ಪಾಲಿಸಬೇಕಾ? ಎಂಬ ಆಕ್ರೋಶ ವ್ಯಕ್ತವಾಗ್ತಿದೆ.
ಸಿಎಂ, ಡಿಸಿಎಂ ಧ್ವನಿ ಅಡಗಿಸಿದ್ರಾ?
ಅಂದು ಸಂಸದೆ ಪ್ರಿಯಾಂಕಾ ಗಾಂಧಿ, ಇಂದು ಕೆ.ಸಿ.ವೇಣುಗೋಪಾಲ್ ಆರ್ಡರ್ ಮಾಡಲು ಹೊರಟ್ರಾ ಎಂಬ ಆಕ್ರೋಶ ವ್ಯಕ್ತವಾಗಿದೆ. ಕೇರಳ ರಾಜಕಾರಣಕ್ಕೆ ಪದೇ ಪದೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಳಕೆ ಆಗ್ತಿದೆ. ಮಾನವೀಯತೆ ಕಾರ್ಡ್ ಪ್ಲೇ ಮಾಡಿ ಕರ್ನಾಟಕ ಸರ್ಕಾರದಿಂದ ಸಹಾಯ ಕೇಳುತ್ತಿರುವುದು ವಿಪರ್ಯಾಸ. ವಯನಾಡು ಪ್ರವಾಹಕ್ಕೆ ಕರ್ನಾಟಕ ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ಹಣ ಕೊಟ್ಟರು. ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟರೆ ಕರ್ನಾಟಕ ಸರ್ಕಾರದಿಂದ ಪರಹಾರ ಕೊಟ್ಟರು. ಈಗ ಕರ್ನಾಟಕದಲ್ಲಿ ಬೆಂಗಳೂರಿನ ಕೋಗಿಲು ಲೇಔಟ್ ಅಕ್ರಮವಾಸಿಗಳಿಗೆ ಸಹಾಯಕ್ಕೆ ವೇಣುಗೋಪಾಲ್ ಸೂಚಿಸಿದ್ದಾರೆ.
ಈ ನಡುವೆ ನಿನ್ನೆಯಷ್ಟೇ ಕೇರಳದ ಸಂಸದ ಎ.ಎ ರಹೀಂ ಸ್ಥಳಕ್ಕೆ ಭೇಟಿ ಕೊಟ್ಟಿದ್ರು. ಇವತ್ತು ಕೇರಳ ಸರ್ಕಾರದ ಮಾಜಿ ಸಚಿವ, ಶಾಸಕ ಜಲೀಲ್ ಸ್ಥಳಕ್ಕೆ ಭೇಟಿ ನೀಡಿದ್ದು. ಕೇರಳದ ನಾಯಕರು ಕರ್ನಾಟಕಕ್ಕೆ ಬಂದು ಟೀಕೆ ಮಾಡುವುದನ್ನ ಸಹಿಸಬೇಕಾ..? ನಾವು ಕೇರಳಕ್ಕೆ ಹೋಗಿ ಅಕ್ರಮಗಳನ್ನ ಬೆಂಬಲಿಸಿದ್ರೆ ಸುಮ್ಮನಿರ್ತಾರಾ..? ಅನ್ನೋ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇನ್ನು, ಕರ್ನಾಟಕ ರಾಜಕೀಯದಲ್ಲಿ ಕೇರಳ ಸರ್ಕಾರ ದರ್ಬಾರ್ ಮಾಡುತ್ತಿರುವ ಬಗ್ಗೆ ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಅವರ ರಾಜಕೀಯ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಕೈ’ ಸರ್ಕಾರಕ್ಕೆ `ಪಬ್ಲಿಕ್’ ಪ್ರಶ್ನೆ..?
* ಕರ್ನಾಟಕದಲ್ಲಿ ಕೇರಳದ ದರ್ಬಾರ್, ಸರ್ಕಾರದ ಗಟ್ಟಿ ಧ್ವನಿ ಯಾಕಿಲ್ಲ..?
* ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೇರಳಕ್ಕೆ ಜೀ ಹುಜೂರ್ ನಿಲುವು ಯಾಕೆ..?
* ಕೇರಳದ ಜನಪ್ರತಿನಿಧಿಗಳು ಕರ್ನಾಟಕದಲ್ಲಿ ದರ್ಬಾರ್ ಮಾಡುವುದೇಕೆ..?
* ಕೇರಳದಿಂದ ಬಂದು ಅಕ್ರಮಕ್ಕೆ ಕರ್ನಾಟಕದಲ್ಲಿ ಮಾತಾಡುವುದು ಸರಿನಾ..?
* ಸಿಎಂ, ಡಿಸಿಎಂ ಧ್ವನಿ ಅಡಗಿಸಿದ್ರಾ..? ಕಾಂಗ್ರೆಸ್ ನಿಲುವು ಬದಲಾಗುತ್ತಾ…?
ಹೀಗೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇತ್ತ, ಬಿಜೆಪಿ ಕೂಡ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಕೇರಳ ಸರ್ಕಾರದ ಎದುರು ಕಾಂಗ್ರೆಸ್ ರಾಜ್ಯದ ಮಾನ ಅಡಮಾನ ಇಟ್ಟಿದೆ ಎಂದಿದ್ದಾರೆ.
ಚುನಾವಣಾ ಭೀತಿಯೇ?
ಒಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ಕೇರಳ ವಿಧಾನಸಭೆ ಚುನಾವಣಾ ಭೀತಿ ಎದುರಾಗಿದ್ದು, ಪರಿಣಾಮ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೈಕಮಾಂಡ್ ಪನಿಶ್ಮೆಂಟ್ ಕೊಡ್ತಿದೆ. ಸಿಎಂ ಡಿಸಿಎಂ ಇಬ್ಬರು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ರಾ ಕೆ.ಸಿ ವೇಣುಗೋಲ್? ಚುನಾವಣೆಗಾಗಿ ಕೇರಳದ ರಾಜಕೀಯ ಕೆಸರೆರಚಾಟಕ್ಕೆ ಕರ್ನಾಟಕವೇ ವೇದಿಕೆ ಸರಿನಾ ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರ ಕೊಡಬೇಕಿದೆ.





