ಬೆಂಗಳೂರು: ಮೈತ್ರಿ ಸರ್ಕಾರ ಐದು ವರ್ಷ ಆಡಳಿತ ನಡೆಸಲಿದೆ ಎಂದು ಸಿಎಂ ಸೇರಿದಂತೆ ಎಲ್ಲ ದಳ-ಕೈ ನಾಯಕರು ಹೇಳಿಕೊಂಡು ಬರುತ್ತಿದ್ದಾರೆ. ಮೇಲ್ನೋಟಕ್ಕೆ ಎಲ್ಲವು ಸರಿಯಾಗಿ ನಡೆಯುತ್ತಿದೆ ಎಂದು ತೋರಿಸಲು ಸಂಪುಟದ ಸಚಿವರು ಪ್ರಯತ್ನ ಮಾಡುತ್ತಿದ್ದಾರೆ. ಎರಡು ಪಕ್ಷದೊಳಗಿನ ಆಂತರಿಕ ಕಲಹ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಮೈತ್ರಿ ಪಕ್ಷಗಳ ಶಾಸಕರು ಪರೋಕ್ಷವಾಗಿ ಒಬ್ಬರನ್ನೊಬ್ರನ್ನು ಟೀಕಿಸುತ್ತಾ ಬರುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರಿಗೆ ಕಡಿವಾಣ ಹಾಕಲು ಸಚಿವ ಹೆಚ್.ಡಿ.ರೇವಣ್ಣ ಬಿಜೆಪಿಯ ಅಸ್ತ್ರವನ್ನು ಪ್ರಯೋಗಿಸದಂತೆ ಕಾಣುತ್ತಿದೆ.
ಕಾಂಗ್ರೆಸ್ ನಾಯಕರು ಸಾರ್ವಜನಿಕ ಸಮಾರಂಭಗಳಲ್ಲಿ ಜೆಡಿಎಸ್ ನಾಯಕರನ್ನು ಟೀಕಿಸುತ್ತಾ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸತ್ತ ಸಚಿವ ಹೆಚ್.ಡಿ.ರೇವಣ್ಣ ಹೊಸ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಮಂಗಳವಾರ ಸಂಜೆ ರೇವಣ್ಣ ಬಿಜೆಪಿ ನಾಯಕರನ್ನು ಭೇಟಿಯಾಗಿ ಒಂದು ಗಂಟೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ಕಾಂಗ್ರೆಸ್ ನಾಯಕರು ಮಾನಸಿಕವಾಗಿ ನೀಡುತ್ತಿರುವ ಕಿರುಕುಳವನ್ನು ಹಂಚಿಕೊಂಡಿದ್ದಾರೆ. ಈ ರಹಸ್ಯ ಮಾತುಕತೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದ್ದರು ಎಂದು ಹೇಳಲಾಗುತ್ತಿದೆ.
ಮಂಗಳವಾರ ಯಡಿಯೂರಪ್ಪನವರು ವಿಶ್ರಾಂತಿಯಲ್ಲಿದ್ದರು. ಹಾಗಾಗಿ ಅವರು ಯಾರನ್ನು ಭೇಟಿಯಾಗಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಬೇಸತ್ತು ರೇವಣ್ಣವರೇ ಈ ರೀತಿಯ ಸುದ್ದಿಯೊಂದನ್ನು ರಾಜಕೀಯ ಅಂಗಳದಲ್ಲಿ ಹರಿಬಿಟ್ಟರಾ ಎಂಬುವುದು ಗೊತ್ತಿಲ್ಲ. ಒಟ್ಟಿನಲ್ಲಿ ರೇವಣ್ಣ ಮಂಗಳವಾರ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ ಎಂಬ ಗುಸು ಗುಸು ಚರ್ಚೆ ಆರಂಭವಾಗಿರೋದಂತು ಸತ್ಯ.
ಒಂದು ವೇಳೆ ಭೇಟಿ ನಿಜವಾದಲ್ಲಿ ಕಾಂಗ್ರೆಸ್ಗೆ ರೇವಣ್ಣರ ನಡೆ ನುಂಗಲಾರದ ತುತ್ತಾಗಲಿದೆ. ಲೋಕಸಭಾ ಚುನಾವಣೆ ತಯಾರಿಯಲ್ಲಿರುವ ಕಾಂಗ್ರೆಸ್ಗೆ ದೊಡ್ಡ ಹೊಡೆತವೇ ಬಿದ್ದಂತಾಗುತ್ತದೆ. ಜೆಡಿಎಸ್ ತಮ್ಮ ಬೆಂಬಲವನ್ನು ಬಿಜೆಪಿ ನೀಡಿದರೆ ಆಪರೇಷನ್ ಕಮಲ ನಡೆಸುವ ಅವಶ್ಯಕತೆ ಕಮಲ ನಾಯಕರಿಗಿರಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv