ನವದೆಹಲಿ/ಬೆಂಗಳೂರು: ಜಾಮೀನು ಪಡೆದು ಬೆಂಗಳೂರು ಬಂದ ಕನಕಪುರದ ಬಂಡೆಗೆ ಭರ್ಜರಿ ವೆಲ್ಕಮ್ ಸಿಕ್ಕಿದೆ. ರಾಜ್ಯದ ಬೇರೆ ಬೇರೆ ಭಾಗದಿಂದಲೂ ಬಂದ ಬೆಂಬಲಿಗರು ಡಿಕೆಶಿಯನ್ನು ನೋಡಲು ಮುಗಿ ಬಿದ್ದಿದ್ರು. ಈ ಬೆಂಬಲವನ್ನ ನೋಡುತ್ತಿದ್ದರೆ ಆಂಧ್ರಪ್ರದೇಶದ ಇತಿಹಾಸ ರಾಜ್ಯದಲ್ಲೂ ಮರುಕಳಿಸುತ್ತಾ ಅನ್ನೋ ಕುತೂಹಲ ಮೂಡಿಸಿದೆ.
ಹೌದು. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ತಿಹಾರ್ ಜೈಲು ಸೇರಿ ಜಾಮೀನು ಪಡೆದು ಬೆಂಗಳೂರಿಗೆ ಬಂದ ಬಂದ ಡಿ.ಕೆ ಶಿವಕುಮಾರ್ ಗೆ ಸಿಕ್ಕಿರೋ ಭಾರೀ ಜನ ಬೆಂಬಲ ದೊರೆತಿದೆ. ಶನಿವಾರ ದೆಹಲಿಯಿಂದ ಬೆಂಗಳೂರಿಗೆ ಬಂದ ಟ್ರಬಲ್ ಶೂಟರ್ಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಈ ಜನ ಬೆಂಬಲ ಈಗ ರಾಜಕೀಯ ಪಡಸಾಲೆಯಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕನಕಪುರ ಬಂಡೆ ಸಿಡಿಗುಂಡು- ‘ಬಂಡೆ’ ಕೆತ್ತಿದ್ರೆ ಆಕೃತಿ, ಪೂಜೆ ಮಾಡಿದ್ರೆ ಸಂಸ್ಕೃತಿ
ಆಂಧ್ರಪ್ರದೇಶದ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿಯೂ ಜೈಲು ಸೇರಿ ಜಾಮೀನು ಪಡೆದು ಹೊರ ಬಂದಾಗ ಇದೇ ಪ್ರಮಾಣದ ಜನ ಬೆಂಬಲ ವ್ಯಕ್ತವಾಗಿತ್ತು. ಜೈಲಿನಿಂದ ಹೊರ ಬಂದ ಬಳಿಕ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ತುಂಬೆಲ್ಲ ಪಾದಯಾತ್ರೆ ಮೂಲಕ ಪ್ರವಾಸ ಮಾಡಿ ಜನರ ವಿಶ್ವಾಸಗಳಿಸಿದ್ದರು. ಕಳೆದ ವಿಧಾಧಾನಸಭೆ ಚುನಾವಣೆಯಲ್ಲಿ ಗೆದ್ದು ಸಿಎಂ ಕೂಡ ಆಗಿದ್ದು ಇತಿಹಾಸ.
ರಾಜ್ಯದಲ್ಲಿ, ಡಿಕೆಶಿ ವಿಚಾರದಲ್ಲಿ ಇದೇ ಮಾದರಿ ರಿಪೀಟ್ ಆಗುತ್ತಾ ಅನ್ನೋದು ಈಗ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಚರ್ಚೆಯಾಗಿದೆ. ಸಿದ್ದರಾಮಯ್ಯ ಹೊರತುಪಡಿಸಿದರೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಎರಡನೇ ಹಂತದಲ್ಲಿ ಮಾಸ್ ಲೀಡರ್ ಆಗಿ ವೇಗವಾಗಿ ಬೆಳೆಯುತ್ತಿರೋದು ಡಿ.ಕೆ ಶಿವಕುಮಾರ್. ರಾಜ್ಯದ ಎಲ್ಲ ಭಾಗದಲ್ಲೂ ಡಿಕೆಶಿ ಬೆಂಬಲಿಗರನ್ನ ಹೊಂದಿದ್ದಾರೆ. ಈಗ ಜೈಲು ಸೇರಿ ಜಾಮೀನು ಪಡೆದು ಹೊರ ಬಂದಿರುವ ಡಿಕೆ ಶಿವಕುಮಾರ್ ಗೆ ಅನುಕಂಪದ ಅಲೆ ಕೂಡ ಜೊತೆಯಾಗಿದೆ.
ಇದೇ ಸನ್ನಿವೇಶ ಬಳಸಿಕೊಂಡು ಡಿ.ಕೆ ಶಿವಕುಮಾರ್, ಆಂಧ್ರ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಮಾದರಿಯಲ್ಲಿ ರಾಜ್ಯಾದ್ಯಂತ ಪಾದಯಾತ್ರೆ ಮೂಲಕ ಪ್ರವಾಸ ಮಾಡಬಹುದು ಎನ್ನಲಾಗುತ್ತಿದೆ. ಕಣ್ಮುಂದೆ ಬೈ ಎಲೆಕ್ಷನ್ಗಳಿದ್ದು, ಪಕ್ಷವನ್ನು ಸಂಘಟನೆಗೆ ಡಿಕೆಶಿ ನಿಲ್ಲಬಹುದು. ಈ ಮೂಲಕ ತಮ್ಮನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದವರಿಗೆ ಡಿ.ಕೆ ಪ್ರತ್ಯುತ್ತರವನ್ನೂ ಕೊಡಬಹುದು ಎನ್ನಲಾಗಿದೆ.
ಜಾರಿ ನಿರ್ದೇಶನಾಲಯ(ಇಡಿ) ಕೇಸ್ನಲ್ಲಿ ಸಿಲುಕಿದ ಬಳಿಕ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿ ಆಗಿರುವ ಡಿ.ಕೆ ಮುಂದೊಂದು ದಿನ, ಜನ ಬೆಂಬಲ ಬಳಸಿಕೊಂಡು ಉಳಿಸಿಕೊಂಡು ಸಿಎಂ ಕೂಡ ಆಗಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.