ಬೆಂಗಳೂರು: ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಜೀವನಾಧಾರಿತ ಸಿನಿಮಾವನ್ನು ತೆರೆ ಮೇಲೆ ತರಲು ಸ್ಯಾಂಡಲ್ವುಡ್ನಲ್ಲಿ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.
ಹೌದು. ನಿರ್ದೇಶಕ ನಾಗೇಶ್ ‘ಕನಕಪುರ ಬಂಡೆ’, ‘ಕನಕಪುರ ಕೆಂಪೇಗೌಡ’, ‘ಕನಕಪುರ ಬೆಳಗಾವಿ ಎಕ್ಸ್ಪ್ರೆಸ್’ ಎಂಬ ಮೂರು ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲು ಸಿದ್ದತೆ ನಡೆಸುತ್ತಿದ್ದಾರೆ. ಆದರಿಂದ ಅವರು ಈ ಮೂರರಲ್ಲಿ ಯಾವುದಾದರು ಒಂದು ಟೈಟಲ್ ಆಯ್ಕೆ ಮಾಡಿ, ಸಿನಿಮಾ ಟೈಟಲ್ ನೊಂದಣಿ ಮಾಡಿಕೊಳ್ಳಲು ಕನ್ನಡ ಫಿಲಂ ಚೇಂಬರ್ಗೆ ಕದ ತಟ್ಟಿದ್ದಾರೆ. ಈ ಮೂರರಲ್ಲಿ ಯಾವ ಟೈಟಲ್ ಅನ್ನು ಚೇಂಬರ್ ನೀಡದಿದ್ದರೆ ಕೋರ್ಟ್ ಮೊರೆ ಹೋಗಲು ಸಿದ್ಧ ಎಂದು ನಾಗೇಶ್ ತಿಳಿಸಿದ್ದಾರೆ.
ಸಿನಿಮಾಗೆ ನಾಗೇಶ್ ಅವರು ಆಯ್ಕೆ ಮಾಡಿಕೊಂಡಿರುವ ಟೈಟಲ್ಗಳನ್ನು ನೋಡಿದರೆ ಇದು ಡಿಕೆಶಿ ಅವರು ಜೀವನಾಧಾರಿಕ ಚಿತ್ರನಾ? ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ನಾಗೇಶ್ ಅವರು ಡಿಕೆಶಿ ಅವರ ಬಗ್ಗೆಯೇ ಸಿನಿಮಾ ಮಾಡುತ್ತಿದ್ದಾರೆ ಅದರಲ್ಲಿ ಅನುಮಾನ ಬೇಡ ಎಂಬ ಊಹಪೋಹದ ಮಾತುಗಳು ಕೂಡ ಕೇಳಿ ಬರುತ್ತಿದೆ. ಟೈಟಲ್ ನೋಡಿದರೆ ಮೇಲ್ನೋಟಕ್ಕೆ ಈ ಚಿತ್ರ ಕಾಂಗ್ರೆಸ್ ಟ್ರಬಲ್ ಶೂಟರ್ ಕುರಿತಾಗಿಯೇ ಇರುತ್ತದೆ ಎನಿಸುತ್ತಿದ್ದರೂ, ಈ ಬಗ್ಗೆ ನಾಗೇಶ್ ಅವರು ಸ್ಪಷ್ಟನೆ ನೀಡಿದ ಮೇಲೆಯೇ ಸತ್ಯಾಂಶ ತಿಳಿಯಬೇಕಿದೆ.
ಡಿಕೆಶಿ ಅವರಿಗೆ ಸೇರಿದ ದೆಹಲಿ ಫ್ಲಾಟ್ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ, ಅವರ ಹಾಗೂ ಆಪ್ತರ ಮನೆಗಳಲ್ಲಿ ಇದ್ದ 8.59 ಕೋಟಿ ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇಡಿ ಡಿಕೆಶಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿ, ಸದ್ಯ ತಿಹಾರ್ ಜೈಲಿಗೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಡಿಕೆಶಿ ಆಪ್ತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ 184 ಜನರಿಗೆ ನೋಟಿಸ್ ನೀಡಲಾಗಿದೆ.
ಇದೇ ವಿಚಾರ ಇಟ್ಟುಕೊಂಡು ನಾಗೇಶ್ ಅವರು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ? ಚಿತ್ರ ನಿಜಕ್ಕೂ ಕಾಂಗ್ರೆಸ್ ಟ್ರಬಲ್ ಶೂಟರ್ ಅವರಿಗೆ ಸಂಬಂಧ ಪಟ್ಟಿದ್ದಾ? ಎನೆಲ್ಲಾ ಅಂಶ ಸಿನಿಮಾನದಲ್ಲಿ ಇರಲಿದೆ ಎಂದು ನಿರ್ದೇಶಕರೇ ಸ್ಪಷ್ಟನೆ ನೀಡಬೇಕಿದೆ.