ಬೆಂಗಳೂರು: ಇತ್ತೀಚೆಗೆ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮಮತಾ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ. ಇದೀಗ ಸಾರಿಗೆ ಸಂಸ್ಥೆ ಇಲಾಖೆಯಿಂದ 5 ಲಕ್ಷ ರೂ. ಪರಿಹಾರ ಘೋಷಣೆಯಾಗಿದೆ. ಆದ್ರೆ ಆಕೆಯ ಪ್ರಾಣಕ್ಕೆ 5 ಲಕ್ಷ ರೂ. ಪರಿಹಾರ ಸಾಕಾ ಎಂದು ಮಮತಾ ಅಣ್ಣ ಕೃಷ್ಣೇಗೌಡ ಪ್ರಶ್ನಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಮಮತಾ ಅವರ ಮಗ ಯಶಸ್ಗೆ ಒಳ್ಳೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸುವುದಾಗಿ ಹಾಗೂ ಆತನ ಹೆಸರಿನಲ್ಲಿ ಬಾಂಡ್ ಮಾಡಿಕೊಡುವುದಾಗಿ ಕೆಎಸ್ಆರ್ಟಿಸಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹಾಗೆಯೇ ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ಪರಿಹಾರ ಕೊಡಬೇಕು. ಆತನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಇಲಾಖೆ ವಹಿಸಿಕೋಳ್ಳಬೇಕು ಅಂತಾ ಕೃಷ್ಣೇಗೌಡ ಹೇಳಿದ್ದಾರೆ.
ಮಮತ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಮೃತದೇಹವನ್ನು ಹಾಸನದ ಭಾಗೇಶ್ವರದಲ್ಲಿರುವ ಪತಿ ಮನೆಗೆ ತೆಗೆದುಕೊಂಡು ಹೋಗುತ್ತೇವೆ. ಬಳಿಕ ಅಲ್ಲಿಯೇ ಇಂದು ಅಂತ್ಯಸಂಸ್ಕಾರ ನಡೆಸುತ್ತೇವೆ. ಸಾರಿಗೆ ಸಂಸ್ಥೆ ವತಿಯಿಂದ ಮಮತಾ ದೇಹ ತೆಗೆದುಕೊಂಡು ಹೋಗಲು ಬಸ್ ವ್ಯವಸ್ಥೆ ಮಾಡಿಲಾಗಿದೆ ಎಂದು ಕೇಷ್ಣೇಗೌಡ ತಿಳಿಸಿದ್ರು.
ಫೆ.20ರಂದು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಮಧ್ಯರಾತ್ರಿ ಬೆಂಕಿಗಾಹುತಿಯಾಗಿತ್ತು. ಘಟನೆಯಲ್ಲಿ ಓರ್ವ ಮಹಿಳೆ ಸಜೀವವಾಗಿ ದಹನವಾಗಿದ್ದರು. ಅವಘಡದಲ್ಲಿ 10 ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿತ್ತು. ಇದರಲ್ಲಿ ಮಮತಾ ಎಂಬವರು ತೀವ್ರವಾಗಿ ಗಾಯಗೊಂಡು 6 ತಿಂಗಳಿನಿಂದ ದೂರವಾಗಿದ್ದ ಪತಿಯನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದರು. ಶುಕ್ರವಾರದಂದು ಪತಿ ಸುರೇಶ್ ಮಮತಾ ಅವರನ್ನು ನೋಡಲು ಬಂದಿದ್ದರು. ಪತಿಯನ್ನು ನೋಡಿದ ಕೆಲವೇ ಗಂಟೆಗಳಲ್ಲಿ ಮಮತಾ ಕೊನೆಯುಸಿರೆಳೆದರು.