ಚೆನ್ನೈ: ಜಗಳವಾಡಿ ಪತ್ನಿ ಮನೆ ಬಿಟ್ಟು ಹೋದಳು ಎಂದು ಕೋಪಗೊಂಡ ಪತಿರಾಯ ತನ್ನ ಮರ್ಮಾಂಗವನ್ನು ತಾನೇ ಕತ್ತರಿಸಿಕೊಂಡ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಸುನಾಮಿ ಕ್ವಾಟ್ರಸ್ನ ನಿವಾಸಿ ಬಾಬು(40) ಪತ್ನಿ ಮನೆ ಬಿಟ್ಟು ಹೋದ ಕೋಪಕ್ಕೆ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ. ದೇವಿ(35) ಬಾಬುವಿನ ಪತ್ನಿ. ಬಾಬು ಹಾಗೂ ದೇವಿ ದಂಪತಿಗೆ ಮಕ್ಕಳಿಲ್ಲ. ಹೀಗಾಗಿ ಪ್ರತಿನಿತ್ಯ ದಂಪತಿ ಇದೇ ವಿಚಾರಕ್ಕೆ ಜಗಳವಾಡುತ್ತಿದ್ದರು. ಜೊತೆಗೆ ಬಾಬು ಕುಡಿತಕ್ಕೆ ದಾಸನಾಗಿದ್ದನು. ಪ್ರತಿದಿನ ಮನೆಗೆ ಕುಡಿದು ಬರುತ್ತಿದ್ದನು. ಪತಿಯ ಈ ಗುಣ ಪತ್ನಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಪ್ರತಿ ದಿನ ಜಗಳ ಹಾಗೂ ಪತಿಯ ಕುಡಿತದ ಚಟದಿಂದ ಬೇಸತ್ತು ಪತ್ನಿ ಮನೆ ಬಿಟ್ಟು ಸೋಮವಾರ ತನ್ನ ತವರು ಮನೆಗೆ ಹೋಗಿದ್ದಳು.
ಆದರೆ ಮರುದಿನ ಹೊಸ ವರ್ಷವನ್ನು ಪತಿಯ ಜೊತೆಗೆ ಆಚರಿಸುವ ಆಸೆಯಿಂದ ಮರಳಿ ಮನೆಗೆ ಬಂದಿದ್ದಳು. ಆದರೆ ಹೊಸ ವರ್ಷದ ದಿನವೂ ಪತಿ ಕುಡಿದು ಮನೆ ಬಂದಿದ್ದನು. ಅಲ್ಲದೆ ಪತ್ನಿಯ ಜೊತೆ ಜಗಳವಾಡಿದ್ದನು. ಇದರಿಂದ ರೋಸಿ ಹೋದ ಪತ್ನಿ ಮರಳಿ ತವರು ಮನೆಗೆ ಹೋದಳು.
ಇದರಿಂದ ಸಿಟ್ಟಿಗೆದ್ದ ಪತಿ ಅತ್ತ ಪತ್ನಿ ತವರಿಗೆ ಹೋಗುತ್ತಿದ್ದಂತೆ ಇತ್ತ ಅಡುಗೆ ಮನೆಗೆ ಹೋಗಿ ಚಾಕುವಿನಿಂದ ತನ್ನ ಮರ್ಮಾಂಗವನ್ನೇ ಕತ್ತಿರಿಸಿಕೊಂಡಿದ್ದಾನೆ. ಈ ವೇಳೆ ನೋವಿನಿಂದ ನರಳುತ್ತಿದ್ದ ಆತನ ಕಿರುಚಾಟ ಕೇಳಿ ಅಕ್ಕ ಪಕ್ಕದ ಮನೆಯವರು ಬಾಬು ಮನೆಗೆ ಬಂದಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಬಾಬು ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.