ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಯುದ್ಧದ ಕಾವು ಹೆಚ್ಚಾಗುತ್ತಿದ್ದು, ಬೇರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ. ಅದರಲ್ಲೂ ತಮ್ಮ ಸುಪ್ರೀಂ ಲೀಡರ್ ಅಯತೊಲ್ಲಾ ಖಮೇನಿಯನ್ನು ಕೊಂದ ಬಳಿಕ ಗಾಯಗೊಂಡ ಸಿಂಹದಂತೆ ಕೆರಳಿರುವ ಇರಾನ್, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಬಾಂಬ್ಗಳ ಸುರಿಮಳೆಗೈಯುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿಯ ಮೂಲಕ ಭೀಕರ ಸನ್ನಿವೇಶವನ್ನು ಇರಾನ್ ಸೃಷ್ಟಿಸುತ್ತಿದೆ. ಅತ್ತ ಅಮೆರಿಕ ಮತ್ತು ಇಸ್ರೇಲ್ ಕೂಡ ಇರಾನ್ನಲ್ಲಿರುವ ಪ್ರಮುಖ ಸ್ವತ್ತುಗಳನ್ನು ನಾಶ ಮಾಡುತ್ತಿವೆ. ಅಲ್ಲದೆ, ಈ ಪರಿಸ್ಥಿತಿ ಭಾರತಕ್ಕೆ ಪೆಟ್ಟು ನೀಡಲಿದೆ ಎಂದು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ. ಹಾಗಿದ್ರೆ, ಈ ಯುದ್ಧ ಭಾರತದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಇಂಧನ ಬೆಲೆ ಏರಿಕೆ:
ಯುದ್ಧ ತೀವ್ರಗೊಂಡ ಪರಿಣಾಮ ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಬ್ಯಾರೆಲ್ಗೆ 100 ಡಾಲರ್ ದಾಟಿದೆ. ಇದು ತೈಲ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಹೆಚ್ಚಾಗಬಹುದು. ಕಚ್ಚಾ ತೈಲದ ಬೆಲೆಯಲ್ಲಿ ಕೇವಲ ಒಂದು ಡಾಲರ್ ಹೆಚ್ಚಳವು ಕೂಡ ಭಾರತದ ಆಮದು ಬಿಲ್ ಅನ್ನು ಸುಮಾರು 2 ಬಿಲಿಯನ್ ಡಾಲರ್ ಹೆಚ್ಚಿಸುತ್ತದೆ.
ಸದ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಜಾಗತಿಕವಾಗಿ ತೈಲ ಆಮದುದಾರರಲ್ಲಿ ಒಂದಾಗಿರುವ ಭಾರತ ವಾರ್ಷಿಕವಾಗಿ ಸುಮಾರು 2 ಬಿಲಿಯನ್ ಬ್ಯಾರೆಲ್ ತೈಲವನ್ನ ಆಮದು ಮಾಡಿಕೊಳ್ಳುತ್ತದೆ. ಇದರಿಂದ ತೈಲ ಬೆಲೆಯಲ್ಲಿ ಪ್ರತಿ 1 ಡಾಲರ್ ಏರಿಕೆಯಿಂದ ಆಮದು ಬಿಲ್ ವರ್ಷಕ್ಕೆ 2 ಬಿಲಿಯನ್ ಡಾಲರ್ ಹೆಚ್ಚಾಗಬಹುದು. ಹೆಚ್ಚಿನ ತೈಲ ಬೆಲೆ ಭಾರತಕ್ಕೆ ಅನಾನೂಕೂಲಕರ.

ವಿಶ್ವದಲ್ಲಿ ಬಳಸುವ ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗವಾಗಿರುವ ಹಾರ್ಮುಜ್ ಜಲಸಂಧಿಯ ಮೂಲಕ ಇಂಧನ ಹರಿವನ್ನು ಅಡ್ಡಿಪಡಿಸುವ ಅಪಾಯವೂ ಇದೆ. ಇದು ದೀರ್ಘಕಾಲದವರೆಗೂ ಮುಂದುವರೆದರೆ ಇನ್ನೂ ಅನಾನೂಕೂಲವಾಗಲಿದೆ. ಯುದ್ಧದ ಭೀತಿ ಹೆಚ್ಚಿದಂತೆ, ತೈಲ ಬೆಲೆಗಳು ವಾರದಲ್ಲಿ ಪ್ರತಿ ಬ್ಯಾರೆಲ್ಗೆ 72 ಡಾಲರ್ಗಿಂತ ಹೆಚ್ಚು ಏರಿಕೆಯಾಗಿದೆ. ಜಾಗತಿಕ ಆರ್ಥಿಕತೆಗೆ ಭಾರಿ ಪರಿಣಾಮ ಉಂಟಾಗುತ್ತದೆ.
ಹಾರ್ಮುಜ್ ಜಲಸಂಧಿ:
ವಿಶ್ವದ ಕಚ್ಚಾ ತೈಲ ಸಾಗಣೆಯ ಸುಮಾರು 20 ರಷ್ಟು ಇರಾನ್ ನಿಯಂತ್ರಿತ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಭಾರತದ ತೈಲ ಪೂರೈಕೆಯ ಶೇ. 50 ರಷ್ಟು ಈ ಮಾರ್ಗದ ಮೂಲಕವೇ ಬರುತ್ತದೆ. ಪ್ರಸ್ತುತ ಯುದ್ಧದ ನಂತರ ಇರಾನ್ ಈ ಜಲಸಂಧಿಯನ್ನು ಮುಚ್ಚಿದೆ. ಇದು ಭಾರತಕ್ಕೆ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು. ಭಾರತವು ಪ್ರಸ್ತುತ ಸುಮಾರು 9.5 ದಿನಗಳವರೆಗೆ (ವಿಶಾಖಪಟ್ಟಣಂ, ಮಂಗಳೂರು ಮತ್ತು ಪಾದೂರಿನಲ್ಲಿ) ತುರ್ತು ತೈಲ ನಿಕ್ಷೇಪಗಳನ್ನು ಹೊಂದಿದೆ. ತೈಲ ಕಂಪನಿಗಳು ಹೊಂದಿರುವ ನಿಕ್ಷೇಪಗಳನ್ನು ಒಳಗೊಂಡಂತೆ ಭಾರತವು ಸುಮಾರು 25 ದಿನಗಳವರೆಗೆ ತೈಲ ನಿಕ್ಷೇಪಗಳನ್ನು ಹೊಂದಿದೆ ಎಂದು ಅಧಿಕೃತ ಮೂಲಗಳು ಹೇಳುತ್ತವೆ.
ಅಗತ್ಯ ಪದಾರ್ಥಗಳು ದುಬಾರಿ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾದರೆ, ದೇಶದಲ್ಲಿ ಸಹಜವಾಗಿಯೇ ಸಾರಿಗೆ ವೆಚ್ಚಗಳು ಹೆಚ್ಚಾಗುತ್ತವೆ. ಇದರಿಂದ ಬೇಳೆಕಾಳುಗಳು, ತರಕಾರಿಗಳು, ಎಣ್ಣೆಗಳು ಮತ್ತು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಬೆಲೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು.
ಅನಿಲ ಬೆಲೆ ದುಬಾರಿ:
ಭಾರತವು ತನ್ನ ಎಲ್ಪಿಜಿ ಅಗತ್ಯಗಳಲ್ಲಿ 80 ಪ್ರತಿಶತಕ್ಕಿಂತ ಹೆಚ್ಚು ಗಲ್ಫ್ ರಾಷ್ಟ್ರಗಳನ್ನು ಅವಲಂಬಿಸಿದೆ. ಹೀಗಾಗಿ, ಪ್ರಸ್ತುತ ನಡೆಯುತ್ತಿರುವ ಯುದ್ಧವು ಅಡುಗೆ ಅನಿಲ ಪೂರೈಕೆಯನ್ನು ಅಡ್ಡಿಪಡಿಸಬಹುದು, ಇದರಿಂದಾಗಿ ಬೆಲೆಗಳು ತೀವ್ರವಾಗಿ ಏರಿಕೆಯಾಗಬಹುದು. ಇದರಿಂದಾಗಿ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿನ ಆಹಾರ ಪದಾರ್ಥಗಳ ಬೆಲೆಗಳು ಸಹ ಹೆಚ್ಚಾಗುವ ಸಾಧ್ಯತೆಯಿದೆ.

ಭಾರತದಲ್ಲಿ ತೈಲ ತೆಗೆಯುವ ತಂತ್ರಜ್ಞಾನ:
ಭಾರತವು ತೈಲವನ್ನು ಹೊರತೆಗೆಯಲು ತಂತ್ರಜ್ಞಾನ ಮತ್ತು ಕಂಪನಿಗಳನ್ನು (ONGC, ಆಯಿಲ್ ಇಂಡಿಯಾ) ಹೊಂದಿದೆ. ಆದರೆ, ಕೆಲವು ಭೌಗೋಳಿಕ ಮತ್ತು ನೈಸರ್ಗಿಕ ನಿರ್ಬಂಧಗಳು ಇದಕ್ಕೆ ಅಡಚಣೆಯಾಗಿವೆ. ಭಾರತದಲ್ಲಿನ ಕಚ್ಚಾ ತೈಲದ ನಿಕ್ಷೇಪಗಳು, ಕಡಲಾಚೆ ಸೇರಿದಂತೆ, ನಮ್ಮ ಅಗತ್ಯಗಳಿಗೆ ಸಾಕಾಗುವುದಿಲ್ಲ. ಪ್ರಸ್ತುತ, ಭಾರತವು ತನ್ನ ತೈಲ ಅಗತ್ಯಗಳಲ್ಲಿ ಕೇವಲ 11 ರಿಂದ 12 ಪ್ರತಿಶತವನ್ನು ಮಾತ್ರ ಉತ್ಪಾದಿಸಲು ಸಮರ್ಥವಾಗಿದೆ. ಹೆಚ್ಚುತ್ತಿರುವ ಬೇಡಿಕೆಯ ದೃಷ್ಟಿಯಿಂದ, ಶೇ. 88 ಕ್ಕಿಂತ ಹೆಚ್ಚು ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದೆ. ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಭಾರತವು ಪ್ರಸ್ತುತ ಎಥೆನಾಲ್ ಮಿಶ್ರಣ, ಹಸಿರು ಹೈಡ್ರೋಜನ್ ಮತ್ತು ಸೌರಶಕ್ತಿಯಂತಹ ವಲಯಗಳಲ್ಲಿ ವೇಗವಾಗಿ ಹೂಡಿಕೆ ಮಾಡುತ್ತಿದೆ. ಆದರೆ, ಪ್ರಸ್ತುತ ಸಮಯದಲ್ಲಿ ಇವುಗಳಿಂದ ಲಾಭ ಗಳಿಸುವುದು ಕಷ್ಟವಾಗಿದೆ.
ಜೊತೆಗೆ, ಭಾರತೀಯ ಬಾಸ್ಮತಿ ಅಕ್ಕಿಗೆ ಅತಿದೊಡ್ಡ ಮಾರುಕಟ್ಟೆಯಾಗಿರುವ ಇರಾನ್ನಲ್ಲಿ ಅಂತಾರಾಷ್ಟ್ರೀಯ ವಹಿವಾಟುಗಳು ಸ್ಥಗಿತಗೊಳ್ಳುತ್ತಿರುವ ಹಿನ್ನೆಲೆ, ಭಾರತದ ಅಕ್ಕಿ ರಫ್ತಿನ ಮೇಲೂ ನೇರ ಪರಿಣಾಮ ಬೀಳುತ್ತಿದೆ. ಭಾರತದ ಒಟ್ಟು ಬಾಸ್ಮತಿ ಅಕ್ಕಿ ರಫ್ತಿನಲ್ಲಿ ನಾಲ್ಕನೇ ಒಂದು ಭಾಗ ಅಂದರೆ 25% ಇರಾನ್ಗೆ ಹೋಗುತ್ತದೆ. 20% ಅಕ್ಕಿ ಇರಾಕ್ಗೆ ರಫ್ತಾಗಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಹೇಳುತ್ತದೆ.
ಈ ರಫ್ತುಗಳು 20 ಲಕ್ಷ ಟನ್ಗಳಿಗಿಂತ ಹೆಚ್ಚು ಬಾಸ್ಮತಿ ಅಕ್ಕಿಯನ್ನು ಹೊಂದಿವೆ. ಇದರ ಒಟ್ಟು ಮೌಲ್ಯವು 1.09 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿದೆ. ಇರಾನ್ನಲ್ಲಿನ ಸಂಘರ್ಷವು ಇರಾಕ್ಗೆ ಹೋಗಬೇಕಾದ ಅಕ್ಕಿ ರಫ್ತಿನ ಮೇಲೂ ಪರಿಣಾಮ ಬೀರಲಿದೆ. ಈಗ, ಈ 1.09 ಲಕ್ಷ ಕೋಟಿ ರೂ. ಮೌಲ್ಯದ ವಹಿವಾಟು ಆತಂಕಕ್ಕೆ ಸಿಲುಕಿದೆ. ಈಗ ಯುದ್ಧ ಪ್ರಾರಂಭವಾದ ಹಿನ್ನೆಲೆ, ಭಾರತೀಯ ಬಾಸ್ಮತಿ ಅಕ್ಕಿ ರಫ್ತುಗಳು ವಾಸ್ತವಿಕವಾಗಿ ಸ್ಥಗಿತಗೊಂಡಿವೆ. ಭಾರತದ ಅಕ್ಕಿ ರಫ್ತಾಗದೆ, ಭಾರತೀಯ ಮಾರುಕಟ್ಟೆಯಲ್ಲಿ ಅಕ್ಕಿ ದಾಸ್ತಾನು ಹೆಚ್ಚುವ ಮತ್ತು ಬೆಲೆ ಕುಸಿಯುವ ಆತಂಕವೂ ಇದೆ. ಇದು, ಮಾರುಕಟ್ಟೆಯಲ್ಲಿ ಅನಿಶ್ಚಿತತೆಯನ್ನು ಹುಟ್ಟುಹಾಕಿದೆ.
ಇನ್ನು ಈ ಇರಾನ್ ಸಂಘರ್ಷದ ಪ್ರಭಾವ ಭಾರತದ ಮೇಲೆ ಕೇವಲ ಅಕ್ಕಿ ರಫ್ತಿನಲ್ಲಿ ಮಾತ್ರವಲ್ಲ, ಚಹಾ ರಫ್ತಿನ ಮೇಲೂ ಬೀರಲಿದೆ. 2024-25ರಲ್ಲಿ, ಭಾರತದಿಂದ ಇರಾನ್ಗೆ ಸುಮಾರು 7,000 ಕೋಟಿ ರೂ. ಮೌಲ್ಯದ ಚಹಾವನ್ನು ರಫ್ತು ಮಾಡಿತ್ತು.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಕಾಳಗದಿಂದ ಇರಾಕ್, ಜೋರ್ಡಾನ್, ಲೆಬನಾನ್, ಸಿರಿಯಾ, ಯೆಮೆನ್ ಸೇರಿ ಹಲವು ರಾಷ್ಟ್ರಗಳಿಗೆ ಸರಕುಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಹತ್ತಾರು ದೇಶಗಳಿಗೆ ಉತ್ಪನ್ನಗಳ ಸಾಗಣೆಗೆ ಈಗಾಗಲೇ ತಡೆಹಿಡಿಯಲಾಗಿದೆ. ಇದು ಭಾರತಕ್ಕೆ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ. ಈಗ, ಇಂಧನ ಬೆಲೆ ಹೆಚ್ಚಾದರೆ ಸಾರಿಗೆ ವೆಚ್ಚ ಹೆಚ್ಚುತ್ತದೆ. ಇದರಿಂದ, ಆಹಾರ ಸೇರಿದಂತೆ ದೈನಂದಿನ ವಸ್ತುಗಳ ಬೆಲೆಯೂ ಏರಬಹುದು.

ಇನ್ನು, ‘ಇಂಡಿಯಾ ಮಿಡಲ್ ಈಸ್ಟ್ ಯೂರೋಪ್ ಎಕನಾಮಿಕ್ ಕಾರಿಡಾರ್’ ಯೋಜನೆಗೆ ಈಗಾಗಲೇ ಅಡ್ಡಿಯುಂಟಾಗಿದೆ. ಏಕೆಂದರೆ, ಈ ಕಾರಿಡಾರ್ಗೆ ಅರಬ್ ರಾಷ್ಟ್ರಗಳು ಮತ್ತು ಇಸ್ರೇಲ್ನ ಹೈಫಾ ಬಂದರಿನ ಮೂಲಕ ಸಂಪರ್ಕ ಬೇಕಾಗಿದೆ. ಪ್ರಸ್ತುತ ಸಂಘರ್ಷವು ಛಾಬಹಾರ್ ಬಂದರು ಯೋಜನೆ, ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಯುರೇಷಿಯಾದ ವ್ಯಾಪಾರ ಸಂಪರ್ಕದ ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ಮೇಲಿನ ಭಾರತದ ಹೂಡಿಕೆಯ ಮೇಲೆ ಪರಿಣಾಮ ಬೀರಲಿದೆ.
ಉದ್ಯೋಗದ ಮೇಲೆ ಪರಿಣಾಮ:
ಇನ್ನು ಇರಾನ್ನಲ್ಲಿ ಸುಮಾರು 10,000 ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಹಾಗೂ ಇಸ್ರೇಲ್ನಲ್ಲಿ ಸುಮಾರು 25,000 ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಇದ್ದಾರೆ. ಬೃಹತ್ ಸಂಖ್ಯೆಯ ಭಾರತೀಯರು ಉಭಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಸಿಲುಕಿದ್ದಾರೆ. ಯುದ್ಧ ವಿಸ್ತಾರವಾದರೆ ಮಧ್ಯಪ್ರಾಚ್ಯ ದೇಶಗಳಲ್ಲಿ ಲಕ್ಷಾಂತರ ಭಾರತೀಯರ ಉದ್ಯೋಗದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ವಿಮಾನಯಾನ ವ್ಯತ್ಯಯ:
ಯುದ್ಧದ ಕಾರಣದಿಂದಾಗಿ ಮಧ್ಯಪ್ರಾಚ್ಯದ ವಾಯುಮಾರ್ಗಗಳು ಅಸುರಕ್ಷಿತವಾಗಿವೆ. ಏರ್ ಇಂಡಿಯಾ, ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳನ್ನು ರದ್ದುಗೊಳಿಸಿವೆ ಅಥವಾ ಮಾರ್ಗ ಬದಲಿಸಿವೆ.
ದುಬೈ ಸೇರಿದಂತೆ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.
ಅಮೆರಿಕ ಮತ್ತು ಯುರೋಪ್ಗೆ ತೆರಳುವ ವಿಮಾನಗಳು ಸುತ್ತುಬಳಸಿ ಹೋಗಬೇಕಿರುವುದರಿಂದ ಪ್ರಯಾಣದ ಅವಧಿ ಮತ್ತು ಟಿಕೆಟ್ ದರ ಹೆಚ್ಚಾಗುವ ಸಾಧ್ಯತೆಯಿದೆ.
ಪರ್ಯಾಯ ದಾರಿ:
ಭಾರತದಲ್ಲಿ ಕಡಿಮೆ ತೈಲ ನಿಕ್ಷೇಪಗಳು ಇರುವ ಹಿನ್ನೆಲೆಯಲ್ಲಿ ತನ್ನ ಆಮದುಗಳಿಗೆ ಗಲ್ಫ್ ದೇಶಗಳ ಬದಲಿಗೆ ಪರ್ಯಾಯ ಮಾರ್ಗಗಳನ್ನು ಭಾರತ ಕಂಡುಕೊಳ್ಳಬೇಕು. ಕೆಲವು ದಿನಗಳವರೆಗೆ ರಷ್ಯಾ, ಅಮೆರಿಕ, ಪಶ್ಚಿಮ ಆಫ್ರಿಕಾದ ದೇಶಗಳು ಮತ್ತು ಲ್ಯಾಟಿನ್ ಅಮೆರಿಕದಿಂದ ತೈಲವನ್ನು ಆಮದು ಮಾಡಿಕೊಳ್ಳುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ರಷ್ಯಾ, ಈಗಾಗಲೇ ಭಾರತಕ್ಕೆ ತೈಲದ ಬಗ್ಗೆ ಭರವಸೆ ನೀಡಿದೆ. ಭಾರತದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಕಚ್ಚಾ ತೈಲವನ್ನು ಪೂರೈಸಲು ಸಿದ್ಧವಾಗಿದೆ ಎಂದು ರಷ್ಯಾ ಘೋಷಿಸಿದೆ.
ಸದ್ಯ ಲಕ್ಷಾಂತರ ಭಾರತೀಯ ಕುಟುಂಬಗಳಿಗೆ ಸಾಕಷ್ಟು ಅಡುಗೆ ಅನಿಲ ದೊರೆಯುವಂತೆ ಮಾಡಲು ಸರ್ಕಾರವು ಅಗತ್ಯ ಸರಕುಗಳ ಕಾಯ್ದೆ ಎಂಬ ವಿಶೇಷ ʼತುರ್ತು ಕಾನೂನುʼ ಬಳಸಿದೆ. ಈ ಕಾನೂನಿನಡಿಯಲ್ಲಿ ತೈಲ ಕಂಪೆನಿಗಳಿಗೆ ಸಾಧ್ಯವಾದಷ್ಟು LPG ಉತ್ಪಾದಿಸಲು ಸರ್ಕಾರ ಆದೇಶಿಸಿದೆ. ಈ ಅನಿಲವು ಮನೆಗಳಲ್ಲಿ ಅಡುಗೆಗಾಗಿ ಮಾತ್ರ ಬಳಸಬೇಕು; ರಾಸಾಯನಿಕಗಳು ಅಥವಾ ಇತರ ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸಲು ಬಳಸಬಾರದು ಎಂದು ಸರ್ಕಾರ ಹೇಳಿದೆ. ಭಾರತದ LPG ಆಮದುಗಳಲ್ಲಿ 80% ಕ್ಕಿಂತ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತವೆ.
ಭಾರತದ ಎಲ್ಎನ್ಜಿ ಅರ್ಧಕ್ಕಿಂತ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತಿರುವುದರಿಂದ ಸರ್ಕಾರವು ಈಗಾಗಲೇ ಕೆಲವು ಕೈಗಾರಿಕೆಗಳಿಗೆ ಅನಿಲ ಸರಬರಾಜನ್ನು ಕಡಿತಗೊಳಿಸಲು ಪ್ರಾರಂಭಿಸಿದೆ. ಸಂಭವನೀಯ ಕೊರತೆಗೆ ಸಿದ್ಧರಾಗಲು ಇದು ಒಂದು ಕ್ರಮವಾಗಿದೆ. ಯುದ್ಧವು ಉಲ್ಬಣಗೊಂಡರೆ ಅನಿಲವನ್ನು ಪಡೆಯುವವರಿಗೆ ʼಆದ್ಯತೆಯ ಪಟ್ಟಿಯನ್ನʼ ಅನ್ವಯಿಸಲಾಗುತ್ತದೆ ಎಂದು ಸರ್ಕಾರಿ ಮೂಲಗಳು ಹೇಳಿವೆ. ಇದರಿಂದ ಅಗತ್ಯ ವಲಯಗಳಲ್ಲಿ ಇಂಧನದ ಕೊರತೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ.

