ಕೊಪ್ಪಳ: ಇಕ್ಬಾಲ್ ಹುಸೇನ್ ಮೊದಲ ಬಾರಿ ಶಾಸಕರಾಗಿದ್ದು, ಅವರಿಗೆ ಸ್ವಲ್ಪ ಮೆಚ್ಯೂರಿಟಿ ಕಡಿಮೆ ಇರುವ ಹಾಗಿದೆ ಎಂದು ಸಿಎಂ ಆಪ್ತ ಶಾಸಕ ಅಶೋಕ್ ಪಟ್ಟಣ (Ashok Pattana) ಹೇಳಿದರು.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರು ಚೆನ್ನಾಗಿದ್ದಾರೆ. ಇಬ್ಬರ ಮಧ್ಯೆ ಜಗಳ ಆಗ್ತಿದೆ ಅಂತ ಸುಮ್ಮನೇ ಸೃಷ್ಟಿ ಮಾಡ್ತಿದ್ದಾರೆ. ಸಿಎಂ ಕೂಡ ಹೈಕಮಾಂಡ್ ಹೇಳಿದ್ರೆ ನಾನು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಹೈಕಮಾಂಡ್ ಹೇಳುತ್ತಿಲ್ಲ, ಹೀಗಾಗಿ ಅವರು ಬಿಡುತ್ತಿಲ್ಲ. ಡಿಕೆ ಶಿವಕುಮಾರ್ ಅವರು ನನಗೂ ಆತ್ಮೀಯರಾಗಿದ್ದು, ಸಿಎಂ ಆದ್ರೆ ನಮಗೂ ಕೂಡ ಸಂತೋಷ. ಆದ್ರೆ ರಾಹುಲ್ ಗಾಂಧಿ ಹಾಗೂ ಎಲ್ಲ ಶಾಸಕರ ಭಾವನೆ ಸಿದ್ದರಾಮಯ್ಯ ಸಿಎಂ ಇರಲಿ ಅನ್ನೋದಿದೆ. ಎರಡೂವರೆ ವರ್ಷ ಒಳ್ಳೆಯ ಆಡಳಿತ ಕೊಟ್ಟಿದಾರೆ, ಹೀಗಾಗಿ ಅವರೇ ಇರಲಿ ಅನ್ನೋ ಭಾವನೆ ಎಲ್ಲರಲ್ಲೂ ಇದೆ. 2028ಕ್ಕೆ ಡಿಕೆ ಶಿವಕುಮಾರ್ ಕ್ಲೈಮ್ ಮಾಡಲಿ, 2028ಕ್ಕೂ ಬಹಳ ಜನ ಇದ್ದಾರೆ, ಯಾರ ಅದೃಷ್ಟ ಇರತ್ತೆ ಅವರಾಗಲಿ ಎಂದು ತಿಳಿಸಿದರು. ಇದನ್ನೂ ಓದಿ: ಫೆ.21ಕ್ಕೆ ಅಸ್ಸಾಂಗೆ ಅಮಿತಾ ಶಾ – ಭಾರತ-ಬಾಂಗ್ಲಾ ಅಂತಾರಾಷ್ಟ್ರೀಯ ಗಡಿಗೆ ಭೇಟಿ
ಕಾಂಗ್ರೆಸ್ನಲ್ಲಿಯೇ ನಾನು ಬಹಳ ಸೀನಿಯರ್, ಆದ್ರೆ ಕೆಲವು ಸಲ ಮಂತ್ರಿ ಸ್ಥಾನ ತಪ್ಪಿದೆ. ಇಬ್ಬರು, ಮೂರು ಜನರನ್ನು ಹೊರತುಪಡಿಸದ್ರೆ ನಾನೂ ಸೀನಿಯರ್ ಆಗಿರುವೆ. ನಾನು ರಾಘವೇಂದ್ರ ಹಿಟ್ನಾಳ್ ವಿದೇಶಕ್ಕೆ ಹೋಗಬೇಕು ಅಂದುಕೊಂಡಿದ್ದೆವು. ನಾವೇನು ವಿದೇಶಕ್ಕೆ ಹೋಗಬಾರದಾ? ಯಾರು ಕರೆದರೂ ಹೋಗುತ್ತಿವೆ. ಬೇರೆ ಯಾರೇ ಸಿಎಂ ಆದರೂ ಈಗಿನ ಪರಿಸ್ಥಿತಿಯಲ್ಲಿ ಸರ್ಕಾರ ನಡೆಸೋದು ಕಷ್ಟವಿದೆ, ಹೀಗಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯಲಿ ಎಂಬುದು ನಮ್ಮ ಆಸೆ ಎಂದರು.

