ಕೊಪ್ಪಳ: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಗಂಗಾವತಿಯ ನೂತನ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ವ್ಯಂಗ್ಯವಾಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಇಕ್ಬಾಲ್ ಅನ್ಸಾರಿ ಹತಾಶರಾಗಿದ್ದಾರೆ. ಈ ಕಾರಣಕ್ಕೆ ಅವರ ಬೆಂಬಲಿಗರಿಗೆ ಕುಮ್ಮಕ್ಕು ನೀಡಿ ಕೋಮು ಗಲಭೆ ಮಾಡಿಸ್ತಿದ್ದಾರೆ. ಚುನಾವಣೆಯಲ್ಲಿ ಸೋತಿದ್ದರೂ, ನಮ್ಮ ಸರ್ಕಾರ ಇದೆ ಅಭಿವೃದ್ಧಿ ಮಾಡ್ತಿನಿ ಅಂತಿದ್ದಾರೆ. ಅನ್ಸಾರಿ ಹತಾಶರಾಗಿದ್ದು, ತಮ್ಮ ಬೆಂಬಲಿಗರ ಮೂಲಕ ಅಮಾಯಕರ ಮನೆ ಮುಂದೆ ಪಟಾಕಿ ಹೊಡೆದು ಗಲಭೆ ಮಾಡಿಸ್ತಿದ್ದಾರೆ ಎಂದು ಪರಣ್ಣ ಆರೋಪಿಸುತ್ತಿದ್ದಾರೆ.
ನಾವು ಗೆದ್ದ ಮೇಲೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಂಭ್ರಮಾಚಾರಣೆಯನ್ನು ಮಾಡಿಲ್ಲ. ಗಂಗಾವತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಹಿಂದೂ ಧರ್ಮಕ್ಕೆ ದಕ್ಕೆ ಉಂಟುಮಾಡುವ ಯಾರನ್ನೇ ಆಗಲಿ ನಾವು ಬಿಡುವುದಿಲ್ಲಾ. ಅಂತವರ ವಿರುದ್ಧ ಕಾನೂನು ಹೋರಾಟ, ಪ್ರತಿಭಟನೆ ಮಾಡುತ್ತೇವೆ ಎಂದು ನೂತನ ಶಾಸಕರು ಎಚ್ಚರಿಕೆ ನೀಡಿದ್ರು.
ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆ, ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ ಎಂದು ಮಾಜಿ ಶಾಸಕ ಅನ್ಸಾರಿ ಬೆಂಬಲಿಗರು ವಿಜಯೋತ್ಸವದ ಆಚರಿಸಿದ್ದರು. ವಿಜಯೋತ್ಸವದ ವೇಳೆ ಅತಿರೇಕದಿಂದ ವರ್ತಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತತು ಆರೋಪಿಸುತ್ತಿದ್ದಾರೆ. ಒಟ್ಟಾರೆಯಾಗಿ ಗಂಗಾವತಿಯಲ್ಲಿ ವಿಜಯೋತ್ಸವದ ವೇಳೆ ಶನಿವಾರ ನಡೆದ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿದ್ದು, 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.