ಬೆಂಗಳೂರು: ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಮನೆಯ ವಸ್ತುಗಳನ್ನು ಶಿಫ್ಟ್ ಮಾಡಲು ಆಂಬ್ಯುಲೆನ್ಸ್ ಬಳಕೆ ಮಾಡುವ ಮೂಲಕ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಕ್ರೈಂ ಡಿಸಿಪಿ ಕುಲದೀಪ್ ಕುಮಾರ್ ಆರ್ ಜೈನ್ ಕೆಎಸ್ಆರ್ ಪಿ ವಾಹನದ ಜೊತೆಗೆ ಪೊಲೀಸರಿಗೆ ನೀಡಿರುವ ಆಂಬ್ಯುಲೆನ್ಸ್ ಮನೆ ಸಾಮಾಗ್ರಿಗಳನ್ನು ಸ್ಥಳಾಂತರಿಸಲು ಬಳಸಿಕೊಂಡಿದ್ದಾರೆ. ಕುಲದೀಪ್ ಕುಮಾರ್ ಆರ್ ಜೈನ್ ಸಿಸಿಬಿ ಕ್ರೈಂ ಒನ್ ಡಿಸಿಪಿ ಆಗಿ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಶಿವಾಜಿನಗರದ ಮೋತಿ ಮಸೀದಿ ಪಕ್ಕದಲ್ಲಿರುವ ಸರ್ಕಾರಿ ಬಂಗಲೆಗೆ ಶಿಫ್ಟ್ ಆಗಿದ್ದಾರೆ. ಸರ್ಕಾರಿ ಬಂಗಲೆಗೆ ಮನೆ ವಸ್ತುಗಳನ್ನು ಶಿಫ್ಟ್ ಮಾಡಲು ಸರ್ಕಾರಿ ವಾಹನಗಳನ್ನು ಬಳಸಿಕೊಂಡಿರುವ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಜೊತೆಗೆ ಪೊಲೀಸರ ಜೀವ ರಕ್ಷಕ ಆಂಬ್ಯುಲೆನ್ಸ್ ಅನ್ನು ಮನೆ ಶಿಫ್ಟ್ ಮಾಡೊದಕ್ಕೆ ಬಳಸಿಕೊಂಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.