– ಪತ್ನಿಯ ಮನೆ ಮುಂದೆ ಐಪಿಎಸ್ ಅಧಿಕಾರಿ ಪ್ರತಿಭಟನೆ, ಕಣ್ಣೀರು
– ಪ್ರೀತಿಸಿ ಮದುವೆಯಾಗಿದ್ದ ದಂಪತಿ
ಬೆಂಗಳೂರು: ಮಕ್ಕಳನ್ನು ನೋಡಲು ಬಿಡದ ಪತ್ನಿ, ಐಪಿಎಸ್ ಅಧಿಕಾರಿ ಮನೆಯ ಮುಂದೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಲಬುರಗಿ ಐಎಸ್ಡಿಯಲ್ಲಿ ಎಸ್ಪಿ ಆಗಿರುವ ಅರುಣ್ ರಂಗರಾಜನ್ ಅವರು ತಮ್ಮ ಪತ್ನಿ ಇಲಕಿಯಾ ಕರುಣಾಕರನ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳನ್ನು ನೋಡಲು ಪತ್ನಿ ಅವಕಾಶ ಕೊಡುತ್ತಿಲ್ಲ ಎಂದು ಅರುಣ್ ರಂಗರಾಜನ್ ಗಂಭೀರ ಆರೋಪ ಮಾಡಿದ್ದಾರೆ.
ಐಪಿಎಸ್ ಅಧಿಕಾರಿ ಇಲಕಿಯಾ ವಿವಿಐಪಿ ಭದ್ರತಾ ಡಿಸಿಪಿಯಾಗಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಹೀಗಾಗಿ ಕೋರ್ಟ್ ಮೆಟ್ಟಿಲೇರಿ ಡೈವೋರ್ಸ್ ಪಡೆದುಕೊಂಡಿದ್ದರು. ಡೈವೋರ್ಸ್ ಆಗಿದ್ದರಿಂದ ಇಬ್ಬರೂ ದೂರವೇ ಉಳಿದಿದ್ದರು. ಈ ನಡುವೆ ಇಬ್ಬರು ಒಂದಾಗಿ ಮಗು ಮಾಡಿಕೊಂಡಿದ್ದರು. ಈಗ ಮಗುವನ್ನು ಹೆಂಡತಿ ನೋಡುವುದಕ್ಕೆ ಬಿಡುತ್ತಿಲ್ಲ ಎಂದು ಅರುಣ್ ರಂಗರಾಜನ್ ದೂರಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅರುಣ್ ರಂಗರಾಜನ್, ನಾನು ಹಾಗೂ ಇಲಕಿಯಾ ಪ್ರೀತಿಸಿ ಮದುವೆ ಆಗಿದ್ದೇವು. ಆಗ ನಾವು ಚತ್ತೀಸ್ಗಢದಲ್ಲಿ ಕೆಲಸ ಮಾಡುತ್ತಿದ್ದೇವು. ಆದರೆ ಅಲ್ಲಿ ಸೇವೆ ಸಲ್ಲಿಸಲು ಒಪ್ಪದ ಇಲಕಿಯಾ, ಚತ್ತೀಸ್ಗಢ ಹೆಣ್ಣು ಮಕ್ಕಳಿಗೆ ಸೂಕ್ತ ಪ್ರದೇಶವಲ್ಲ. ಹೀಗಾಗಿ ನಾವು ಕರ್ನಾಟಕ್ಕೆ ವರ್ಗಾವಣೆ ತೆಗೆದುಕೊಳ್ಳೋಣ ಎಂದು ಒತ್ತಾಯಿಸಿದ್ದರು. ಆದರೆ ನನಗೆ ಇಷ್ಟವಿರಲಿಲ್ಲ. ಇದಕ್ಕೆ ಒಪ್ಪದ ಇಲಕಿಯಾ ನನ್ನ ಹೆಸರಿನಲ್ಲಿ ಪತ್ರ ಬರೆದು ಅದಕ್ಕೆ ತಾನೇ ಸಹಿ ಮಾಡಿ ಚತ್ತೀಸ್ಗಢ ಸರ್ಕಾರಕ್ಕೆ ಕಳುಹಿಸಿದ್ದಳು. ಆದರೆ ಸರ್ಕಾರವು ವರ್ಗಾವಣೆ ಸಾಧ್ಯವಿಲ್ಲ ಅಂತಾ ತಿಳಿಸಿದ್ದರು ಎಂದು ಹೇಳಿದರು.
ವರ್ಗಾವಣೆ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿತ್ತು. ಆದರೆ ಪತ್ನಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ನನ್ನನ್ನು ಒಪ್ಪಿಸಿದ್ದಳು. ಅಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳ ಸಂಪರ್ಕಿಸಿ ಇಬ್ಬರಿಗೂ ವರ್ಗಾವಣೆಯಾಗುವಂತೆ ಮಾಡಿದ್ದಳು. ಕರ್ನಾಟಕ್ಕೆ ಬಂದ ಬಳಿಕ ಇಬ್ಬರಿಗೂ ಡಿವೋರ್ಸ್ ಆಗಿತ್ತು ಎಂದು ಅರುಣ್ ರಂಗರಾಜನ್ ತಿಳಿಸಿದರು.
ನಮ್ಮಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ದೂರವಾಗಿದ್ದಾಗ ನನ್ನ ಒಪ್ಪಿಗೆ ಇಲ್ಲದೆ ಪತ್ನಿ ಅಬಾರ್ಶನ್ ಮಾಡಿಸಿಕೊಂಡಿದ್ದಳು. ಅದಾದ ಬಳಿಕ ಇಬ್ಬರು ಸೇರಿ ಮಗುವನ್ನು ಮಾಡಿಕೊಂಡಿದ್ದೇವು. ಈಗ ನೋಡಿದರೆ ಮಕ್ಕಳನ್ನು ನೋಡಲು ಬಿಡುತ್ತಿಲ್ಲ ಎಂದು ಅರುಣ್ ಗಂಭೀರ ಆರೋಪ ಮಾಡಿದರು.