– ಪರೋಪಕಾರಿ, ಜನಸ್ನೇಹಿಯಾಗಿದ್ದ ಅಧಿಕಾರಿ ಅಗಲಿಕೆಗೆ ಕಣ್ಣೀರಿಟ್ಟ ಜನತೆ
ರಾನಮನಗರ: ಎಚ್1 ಎನ್1 ಸೋಂಕಿನಿಂದ ಅಕಾಲಿಕ ಮರಣಹೊಂದಿದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ಬೊಂಬೆನಾಡು ಚನ್ನಪಟ್ಟಣದಿಂದ ವೃತ್ತಿ ಆರಂಭಿಸಿದ್ದರು. ಮಧುಕರ್ ಶೆಟ್ಟಿ ಅವರ ಅಗಲಿಕೆಯಿಂದ ಜಿಲ್ಲೆಯ ಜನತೆ ಕಣ್ಣೀರಿಟ್ಟಿದ್ದಾರೆ.
ಚನ್ನಪಟ್ಟಣ ಉಪವಿಭಾಗದಲ್ಲಿ ಎಎಸ್ಪಿಯಾಗಿ 18 ತಿಂಗಳುಗಳ ಕಾಲ 2001ರ ಸೆಪ್ಟೆಂಬರ್ 17ರಿಂದ 20013ರ ಏಪ್ರಿಲ್ 18ರವರೆಗೆ ಕರ್ತವ್ಯ ನಿರ್ವಹಿಸಿದ್ದರು. ಪ್ರೊಬೆಷನರಿ ಅವಧಿಯಲ್ಲಿಯೇ ದಕ್ಷ ಹಾಗೂ ಉತ್ತಮ ಆಡಳಿತ ನೀಡಿ ಸಾರ್ವಜನಿಕವಾಗಿ ಮಧುಕರ್ ಶೆಟ್ಟಿ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದರು. ರಾತ್ರಿ ಪಾಳಿಯನ್ನು ಪೊಲೀಸರಿಗೆ ನೀಡಿ ಅವರಿಗೆ ಸೈಕಲ್ ಕೊಡಿಸಿ ಗಸ್ತು ತಿರುಗುವಂತೆ ಮಾಡಿದ್ದರು. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ
ತಾಲೂಕಿನ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಕೂಡ ಮಾಡಿಸಿಕೊಟ್ಟಿದ್ದರು. ಇದಲ್ಲದೇ ರಾಜ್ಯವೇ ಬೆಚ್ಚಿಬಿದ್ದಿದ್ದ ನೀರಾ ಚಳುವಳಿಯ ವೇಳೆ ಚನ್ನಪಟ್ಟಣ ತಾಲೂಕಿನ ವಿಠ್ಠೇನಹಳ್ಳಿ ಗ್ರಾಮದ ಗೋಲಿಬಾರ್ ನಿಂದ ಪೊಲೀಸರು ಗ್ರಾಮಕ್ಕೆ ಕಾಲಿಡಲು ಹೆದರುತ್ತಿದ್ದರು. ಈ ವೇಳೆ ಸ್ವತಃ ಮುಂದಾಳಾಗಿ ನಿಂತಿದ್ದ ಮಧುಕರ್ ಶೆಟ್ಟಿ ಗ್ರಾಮಸ್ಥರ ಜೊತೆ ಸಭೆ ನಡೆಸಿದ್ದರು. ಈ ಮೂಲಕ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಸೌಹಾರ್ದತೆ ಬೆಳೆಯುವಂತೆ ಮಾಡಿದ್ದರು. ಇದನ್ನೂ ಓದಿ: ಕರುನಾಡ ಸಿಂಗಂ ಸಾವಿನ ಬಗ್ಗೆ ಸಚಿವ ಡಿಕೆಶಿಗೆ ಸಂಶಯ..!
ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದ ಸಮೀಪದ ಕಲ್ಲು ಕ್ವಾರಿಯೊಂದರಲ್ಲಿ ಜೀತದಾಳುಗಳಾಗಿದ್ದ 42 ಜನ ಕಾರ್ಮಿಕರಿಗೆ ಮುಕ್ತಿ ಕೊಡಿಸಿ ಅವರಿಗೆ ಸ್ವಂತ ಹಣದಿಂದ ರೈಲ್ವೇ ಟಿಕೆಟ್, ಖರ್ಚಿಗೂ ಸಹ ಹಣ ನೀಡಿ ಗ್ರಾಮಗಳಿಗೆ ಕಳುಹಿಸಿದ್ದರು. ಠಾಣಾ ಸಿಬ್ಬಂದಿಯನ್ನು ಹುರಿದುಂಬಿಸುವ ನಿಟ್ಟಿನಲ್ಲಿ ತಮ್ಮ ವೇತನದ ಹಣದಿಂದ ಬಹುಮಾನ ನೀಡುತ್ತಿದ್ದರು. ಹೀಗೆ ಅನೇಕ ಪರೋಪಕಾರಿ ಜೀವನದ ಜೊತೆಗೆ ಜನಸ್ನೇಹಿಯಾಗಿದ್ದ ಮಧುಕರ್ ಶೆಟ್ಟಿ ಅವರ ಅಕಾಲಿಕ ಸಾವಿನಿಂದ ಇದೀಗ ಚನ್ನಪಟ್ಟಣದ ಜನತೆ ಹಾಗೂ ಅವರ ಜೊತೆ ಕೆಲಸ ಮಾಡಿದ್ದವರು ಸಹ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv