ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೆರಿಬಿಯನ್ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ರನ್ನು ಖರೀದಿಸಲು ಅವರ ಬಳಿ ಹಣದ ಕೊರತೆ ಎದುರಾಗಿದ್ದ ಸಂಗತಿಯನ್ನು ತಂಡದ ಸಹ ಮಾಲೀಕರಾಗಿರುವ ನೆಸ್ ವಾಡಿಯಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಪಂಜಾಬ್ ತಂಡ ಕ್ರಿಸ್ ಗೇಲ್ ರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿದ ಸಂಗತಿ ಎಲ್ಲರಿಗೂ ತಿಳಿದ ಸಂಗತಿ. ಆದರೆ ಪಂಜಾಬ್ ತಂಡ ಗೇಲ್ ರನ್ನು ಖರೀದಿಸುವ ಮುನ್ನ ಅವರನ್ನು ಎರಡು ಬಾರಿ ಯಾವ ತಂಡವೂ ಖರೀದಿಸಲಿಲ್ಲ. ಮೂರನೇ ಬಾರಿ ಅವರ ಹೆಸರನ್ನು ಕರೆದ ವೇಳೆ ನಾವು ಖರೀದಿಸಿದ್ದಾಗಿ ಹೇಳಿದ್ದಾರೆ.
ಇದಕ್ಕೂ ಮುನ್ನವೇ ಬೇರೆ ಯಾವುದೇ ತಂಡ ಅವರನ್ನು ಖರೀದಿಸಿದ್ದರೆ ನಮ್ಮ ತಂಡ ಸೇರುವ ಅವಕಾಶ ಕೈ ತಪ್ಪುತ್ತಿತ್ತು. ಗೇಲ್ ರ ಮೂಲ ಬೆಲೆಗೆ ಅವರನ್ನು ಖರೀದಿಸಿದ ವೇಳೆ ನಮ್ಮ ಬಳಿ ಕೇವಲ 2.1 ಕೋಟಿ ರೂ ಮಾತ್ರ ಉಳಿದಿತ್ತು ಎಂಬ ಸತ್ಯವನ್ನು ತಿಳಿಸಿದ್ದಾರೆ. ಅಂದ ಹಾಗೇ ಪಂಜಾಬ್ ತಂಡ ಈ ಬಾರಿ ನಿಗದಿಪಡಿಸಿದ್ದ ಒಟ್ಟು ಮೊತ್ತ 67.5 ಕೋಟಿ ರೂ. ಪೈಕಿ ಕೇವಲ 10 ಲಕ್ಷವನ್ನು ಮಾತ್ರ ಹಾಗೇ ಉಳಿಸಿಕೊಂಡಿದೆ.
ಪಂಜಾಬ್ ತಂಡ ತಮ್ಮನ್ನು ಆಯ್ಕೆ ಮಾಡಿರುವುದು ಸರಿ ಎಂದು ತೋರಿಸಿಕೊಟ್ಟಿರುವ ಗೇಲ್ ಈ ಟೂರ್ನಿಯಲ್ಲಿ ಈಗಾಗಲೇ ಒಂದು ಶತಕ ಹಾಗೂ ಎರಡು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಈ ಮೂಲಕ ತಮ್ಮನ್ನು ಖರೀದಿಸಲು ಹಿಂದೇಟು ಹಾಕಿದ್ದ ಫ್ರಾಂಚೈಸಿಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಪಂಜಾಬ್ ತಂಡಕ್ಕೆ ಆಯ್ಕೆಯಾಗಲು ಕಾರಣವಾಗಿದ್ದ ಸೆಹ್ವಾಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ತಂಡದ ಮೊತ್ತೊಬ್ಬ ಆಟಗಾರ ಯುವರಾಜ್ ಸಿಂಗ್ ಕುರಿತು ಪ್ರತಿಕ್ರಿಯೆ ನೀಡಿರುವ ವಾಡಿಯಾ, ಇದೂವರೆಗಿನ ಪಂದ್ಯಗಳಲ್ಲಿ ಯುವಿ ಉತ್ತಮ ಪ್ರದರ್ಶನ ನೀಡದೆ ಇದ್ದರೂ, ಮುಂದಿನ ಪಂದ್ಯಗಳಲ್ಲಿ ಮಿಂಚುವ ವಿಶ್ವಾಸವಿದೆ ಎಂದು ತಿಳಿಸಿದರು. ಅಲ್ಲದೇ ತಂಡಕ್ಕೆ ಭಾರತೀಯ ಆಟಗಾರ ನಾಯಕರಾಗುವ ಇಚ್ಛೆ ಇತ್ತು, ಅಶ್ವಿನ್ ಮೂಲಕ ಇದು ಸಾಧ್ಯವಾಗಿದೆ ಎಂದರು.