ಬೆಂಗಳೂರು: ನವೆಂಬರಿನಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಕೈಗಾರಿಕ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನವೆಂಬರಿನಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶವನ್ನು ನಡೆಸಲು ನಿರ್ಧಾರಿಸಲಾಗಿದೆ. ಮುಖ್ಯಮಂತ್ರಿಗಳ ಚರ್ಚಿಸಿ ಒಂದು ವಾರದಲ್ಲಿ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್ ಜೊತೆ ಹೊಂದಾಣಿಕೆ ಸಾಹಸಕ್ಕೆ ಕೈಹಾಕಿ, ನಿಮ್ಮ ಕುರ್ಚಿಗೆ ಕುತ್ತು ತಂದ್ಕೋಬೇಡಿ- ಸಿಎಂಗೆ ರೇವಣ್ಣ ಸಲಹೆ
ನಾಲ್ಕು ಕಂದಾಯ ವಿಭಾಗವಾರು ಕೈಗಾರಿಕಾ ಅದಾಲತ್ ನಡೆಸಲಾಗುವುದು. ಕರ್ನಾಟಕ ಉದ್ಯೋಗ ಮಿತ್ರ ದೇಶದ ಅಗ್ರಮಾನ್ಯವಾಗಿ ಹೂಡಿಕೆ ಪ್ರಚಾರ ಏಜೆನ್ಸಿಯಾಗಿ ಹೊರ ಹೊಮ್ಮಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 62,085 ಕೋಟಿ ರೂ. ಎಫ್ಡಿಐ ಇಡಲು ಆಕರ್ಷಿಸಲಾಗಿದೆ. ಶೀಘ್ರವೇ ದುಬೈನಲ್ಲಿ ಕೈಗಾರಿಕ ಮೇಳ ನಡೆಯಲಿದ್ದು, ರಾಜ್ಯದ ಕೈಗಾರಿಕಾ ಇಲಾಖೆಯ ಸ್ಟಾಲ್ಗಳನ್ನು ಎಂಟು ದಿನಗಳ ಕಾಲ ಹಾಕಲಾಗುವುದು. ದುಬೈ ಮೇಳದ ನಂತರ ಬೇರೆ ಬೇರೆ ದೇಶಗಳಲ್ಲಿ ರೋಡ್ ಶೋ ನಡೆಸಲಾಗುವುದು ಎಂದರು.
ಈ ಹಿಂದೆ ಕೈಗಾರಿಕೆಗಾಗಿ ನೀಡಲಾಗಿದ್ದ ಜಮೀನು ಬಳಕೆ ಮಾಡದಿರುವುದು ಕಂಡು ಬಂದಿದೆ. ಅದನ್ನು ಗುರುತಿಸಿ ಆ ಜಮೀನನ್ನ ವಾಪಸ್ ಪಡೆಯಲು ಚಿಂತನೆ ನಡೆಸಿದ್ದೇವೆ. ಜಮೀನಿಗಾಗಿ ಹಣ ಕೊಟ್ಟಿರುವವರಿಗೆ ಅವಕಾಶ ನೀಡುತ್ತೇವೆ. ಯಾರು ಹಣ ಕೊಟ್ಟಿಲ್ಲ ಅವರಿಗೆ ನೋಟಿಸ್ ನೀಡುವ ಕೆಲಸ ಪ್ರಾರಂಭ ಮಾಡುತ್ತೇವೆ. ಕೈಗಾರಿಕಾ ಸಚಿವರ ಹಂತದಲ್ಲಿ ತೀರ್ಮಾನವಾಗುವ ಕೆಲಸ ನಾವು ಮಾಡ್ತೀವಿ. ಚೀಫ್ ಸೆಕ್ರೆಟರಿ ಹಂತದಲ್ಲಿರೋದನ್ನ ಅವರ ಕಡೆಯಿಂದ ಮಾಡಿಸುತ್ತೇವೆ. ಯಾರಿಗೂ ಕಿರುಕುಳ ನೀಡುವ ಕೆಲಸ ಆಗಬಾರದು. ಎಲ್ಲವನ್ನೂ ನೋಡಿಕೊಂಡು 30 ದಿನಗಳ ಅವಕಾಶ ನೀಡಿ ನಂತರ ಕ್ರಮ ಈ ಬಗ್ಗೆ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಶಿರಾಡಿ ಘಾಟ್ ನಾಲ್ಕು ಪಥದ ರಸ್ತೆ ಸಂಪೂರ್ಣಗೊಳಿಸಿ – ಗಡ್ಕರಿ ಬಳಿ ಸಿಎಂ ಮನವಿ
ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ವೇತನ ಪಾವತಿ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ನಿರಾಣಿ, ವೇತನ ಕೊಟ್ಟಿಲ್ಲ ಎಂಬುದು ಸುಳ್ಳು. ಅಲ್ಲಿ ಯಾವುದೇ ಸಮಸ್ಯೆಯಿಲ್ಲ. ಪ್ರತಿಭಟನೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ನನಗೂ ಕಾರ್ಖಾನೆಗೂ ಯಾವುದೇ ಸಂಬಂಧವಿಲ್ಲ ನಾನು ಅದರಲ್ಲಿ ಯಾವ ಭಾಗವೂ ಅಲ್ಲ. ನಾನು 2008ರಲ್ಲೇ ನಿರಾಣಿ ಗ್ರೂಪ್ಗೆ ರಿಸೈನ್ ಮಾಡಿದ್ದೇನೆ. ಅಲ್ಲಿ ನಾನು ಡೈರೆಕ್ಟರ್ ಕೂಡಾ ಅಲ್ಲ ಅಲ್ಲಿಗೂ ನನಗೂ ಯಾವುದೇ ಸಂಬಂಧವಿಲ್ಲ. ಪಾಂಡವಪುರ ಕಾರ್ಖಾನೆ ಕುರಿತು ಸಂಬಂಧಿಸಿದವರು ಉತ್ತರ ಕೊಡ್ತಾರೆ ಎಂದು ಹೇಳಿದರು.
ಜಾತಿ ಜನಗಣತಿ ವರದಿ ಬಿಡುಗಡೆ ವಿಚಾರಕ್ಕೆ ಅಪಸ್ವರ ವಿಚಾರಕ್ಕೆ ಉತ್ತರಿಸಿದ ನಿರಾಣಿ, ವೀರಶೈವ ಲಿಂಗಾಯತ ಸಮಾಜಕ್ಕೆ ನಾಯಕರಾಗಿ ಶಾಮನೂರು ಶಿವಶಂಕರಪ್ಪ ಇದ್ದಾರೆ. ಅವರು ಮತ್ತು ಹಿರಿಯರು ಸೇರಿ ಈ ವಿಚಾರವಾಗಿ ನಿರ್ಧಾರ ಮಾಡ್ತಾರೆ ಎಂದರು.