ಬೆಂಗಳೂರು: ಕಾಂಗ್ರೆಸ್ನಲ್ಲಿ (Congress) ಒಬ್ಬೊಬ್ಬರದ್ದು ಒಂದೊಂದು ಪಟ್ಟು ಶುರುವಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಬಣಗಳ ನಡುವೆ ರಾಜಕೀಯ ಮೇಲಾಟ ಜೋರಾಗಿದೆ. ಏಪ್ರಿಲ್ಗೆ ಕ್ಯಾಬಿನೆಟ್ ರೀ-ಸಫಲ್ ಪಟ್ಟು ಹಿಡಿದು ಪವರ್ ಶೇರ್ಗೆ ಸಿದ್ದು ಟೀಂನಿಂದ ಪೆಟ್ಟು ನೀಡುವ ಪ್ಲ್ಯಾನ್ ಇದ್ರೆ, ಸದ್ಯಕ್ಕೆ ಏನೂ ಬೇಡ, ಪವರ್ ಶೇರ್ ನಿರ್ಧಾರದ ವೇಳೆಯೇ ಡಿಸೆಂಬರ್ನಲ್ಲಿ ಎಲ್ಲ ಬದಲಾಗಲಿ ಎಂದು ವಿರೋಧಿ ಬಣದ ಪಟ್ಟು ಹಿಡಿದಿದೆ ಎಂಬ ವಿಚಾರ ಕೇಳಿಬಂದಿದೆ.
ಮಾರ್ಚ್ನಲ್ಲಿ ಬಜೆಟ್ ಇದೆ. ಬಜೆಟ್ ಅಧಿವೇಶನದ ಬಳಿಕ ಅಸಲಿ ಪಾಲಿಟಿಕ್ಸ್ ಶುರು ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಏಪ್ರಿಲ್ನಲ್ಲೇ ಸಂಪುಟ ಪುನರ್ರಚನೆ ಮಾಡಿ, ಹಾಲಿ ಇರುವ ಸಚಿವರಲ್ಲಿ 10ಕ್ಕೂ ಹೆಚ್ಚು ಜನರನ್ನ ಕಿತ್ತುಹಾಕಿ ಹೊಸಬರಿಗೆ ಅವಕಾಶ ಕೊಡಿ ಎಂಬುದು ಸಿದ್ದರಾಮಯ್ಯ ಟೀಂನ ಅಸ್ತ್ರವಾಗಿದೆ. ಅಲ್ಲದೇ ಏಪ್ರಿಲ್ನಲ್ಲಿ ಸಂಪುಟ ಪುನರ್ರಚನೆ ಆದರೆ 2026ರ ಮೇ ತನಕ ನೋ ಪವರ್ ಶೇರ್ ಎಂಬ ಗೇಮ್ ಜೊತೆಗೆ ಬೀಸುವ ದೊಣ್ಣೆಯಿಂದ ಪಾರಾಗುವ ಜಾಣತನವನ್ನು ಸಿಎಂ ಟೀಂ ತೋರಿಸುತ್ತಿದೆ.
ಸದ್ಯಕ್ಕೆ ಸಂಪುಟ ಸರ್ಜರಿ ಬೇಡ ಎಂದು ಡಿಕೆಶಿ ಬಣದ ವಾದವಿದೆ. ಈಗ ಕೆಪಿಸಿಸಿ ಅಧ್ಯಕ್ಷ್ಯ ಸ್ಥಾನ ಬದಲಾವಣೆಯೂ ಬೇಡ, ಸಂಪುಟ ಪುನರ್ರಚನೆಯೂ ಬೇಡ ಎಂಬ ಮೇಲಾಟ ನಡೆಯುತ್ತಿದೆ. ಪವರ್ ಶೇರ್ ವಿಚಾರ ಕ್ಲಿಯರ್ ಆಗುವುದಾದರೆ ಡಿಸೆಂಬರ್ನಲ್ಲೇ ಎಲ್ಲಾ ಬದಲಾಗಲಿ ಎಂಬ ಪಟ್ಟು ಹಿಡಿಯುತ್ತಿದ್ದಾರೆ ಎನ್ನಲಾಗಿದೆ. ಎರಡು ಬಣಗಳ ಪಟ್ಟಿಗೆ ಹೈಕಮಾಂಡ್ ನಡೆ ಏನು? ಯಾರಿಗೆ ಯಾವ ಸೂತ್ರ ಎಂಬ ಕುತೂಹಲವಿದ್ದು, ಧರ್ಮಸಂಕಟದ ಫಲಿತಾಂಶ ರೋಚಕವಾಗಿದೆ.