ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಯವರ ಜಾಮೀನು ಅರ್ಜಿ ವಿಚಾರಣೆ 65ನೇ ಸೆಷನ್ಸ್ ಕೋರ್ಟ್ ನಲ್ಲಿ ನಡೆಯಿತು.
ಡಿಸೆಂಬರ್ 16 ರ ವರೆಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಇಂದಿಗೆ ಮಧ್ಯಂತರ ಜಾಮೀನು ಅರ್ಜಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಮಧ್ಯಂತರ ಜಾಮೀನು ವಿಸ್ತರಿಸದಂತೆ ಸಿಸಿಬಿ ವಕೀಲರು ಮನವಿ ಮಾಡಿದ್ದರು.
ಇನ್ನು ತಮ್ಮ ವಕೀಲರ ಜೊತೆ ಕೋರ್ಟ್ ಗೆ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೂಡ ಹಾಜರಾಗಿದ್ದರು. ಇನ್ನು ಸರ್ಕಾರಿ ವಕೀಲರು ಮುಖ್ಯ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಸಮಯಾವಕಾಶ ಕೇಳಿದ್ದಾರೆ.
ರವಿ ಬೆಳಗೆರೆಗೆ ಆರೋಗ್ಯ ಚೆನ್ನಾಗಿದೆ. ಹಾಗಾಗಿ ಅವರಿಗೆ ಮಧ್ಯಂತರ ಜಾಮಿನು ವಿಸ್ತರಿಸಬೇಡಿ ಅಂತ ಕೋರ್ಟ್ ನಲ್ಲಿ ಸಿಸಿಬಿ ವಕೀಲರು ವಾದ ಮಂಡಿಸಿದ್ರು. ರವಿಬೆಳಗೆರೆ ಅವರ ಆರೊಗ್ಯದ ಬಗ್ಗೆ ರಿಪೋರ್ಟ್ ಗಳು ಇದ್ದಾವೆ ಹೊರತು, ಆರೋಗ್ಯ ಸರಿಯಿಲ್ಲ ಅಂತ ಇತ್ತೀಚಿನ ಯಾವುದೇ ರಿಪೋರ್ಟ್ ಅವರ ಬಳಿ ಇಲ್ಲ. ಮಧ್ಯಂತರ ಜಾಮೀನಿಗಾಗಿ ಸುಳ್ಳು ಅನಾರೋಗ್ಯದ ಸರ್ಟಿಫಿಕೇಟ್ ಗಳನ್ನು ನೀಡುತ್ತಿದ್ದಾರೆ ಅಂತ ವಕೀಲರು ವಾದಿಸಿದ್ರು.
ರವಿಬೆಳಗೆರೆ ಮಧ್ಯಂತರ ಜಾಮೀನು ಅವಧಿಯನ್ನು ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ಮಧುಸೂದನ್ ಅವರು ಡಿ. 18ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.