– ರೈತ ಹೋರಾಟ ಗಂಭೀರತೆ ಬಗ್ಗೆ ಗುಪ್ತಚರ ಇಲಾಖೆ ವರದಿ
ನವದೆಹಲಿ: ಬೆಂಬಲ ಬೆಲೆ ಖಾತ್ರಿ ಪಡಿಸುವ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟ (Farmers Protest) ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.
ಸಣ್ಣ ಸಣ್ಣ ಗುಂಪುಗಳಲ್ಲಿ ದೆಹಲಿಗೆ ಆಗಮಿಸುತ್ತಿರುವ ರೈತರು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಮೈದಾನವನ್ನು ಜೈಲಾಗಿಸಲು ಅನುಮತಿ ನೀಡಲ್ಲ – ರೈತರ ಹೋರಾಟಕ್ಕೆ ದೆಹಲಿ ಸರ್ಕಾರದ ಬೆಂಬಲ
ಕೇಂದ್ರ ಸಚಿವರ ಜೊತೆಗಿನ ಮಾತುಕತೆ ವಿಫಲವಾದ ಬಳಿಕ ರೈತರು ದೆಹಲಿ ಚಲೋ ಹೋರಾಟ ಆರಂಭಿಸಿದ್ದಾರೆ. ಈ ಸಂಬಂಧ ಗುಪ್ತಚರ ಇಲಾಖೆ ವರದಿ (Intelligence Report) ಬಿಡುಗಡೆ ಮಾಡಿದೆ. ವರದಿ ಪ್ರಕಾರ ಪಂಜಾಬ್ ಒಂದರಿಂದಲೇ 1500 ಟ್ರ್ಯಾಕ್ಟರ್, 509 ವಿವಿಧ ವಾಹನಗಳ ಮೂಲಕ ರೈತರು ದೆಹಲಿಯತ್ತ ಹೊರಟಿದ್ದಾರೆ. ಹರಿಯಾಣದಿಂದ ಬರುವ ರೈತರ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.
ಪ್ರತಿಭಟನಾಕಾರರು ಸುಮಾರು ಆರು ತಿಂಗಳಿಗೆ ಬೇಕಾಗುವ ಆಹಾರ ಧಾನ್ಯಗಳನ್ನು ಟ್ರ್ಯಾಕ್ಟರ್ನಲ್ಲಿ ಸಂಗ್ರಹ ಮಾಡಿಕೊಂಡಿದ್ದಾರೆ. ಟ್ರ್ಯಾಕ್ಟರ್ಗಳನ್ನೇ ಶೆಲ್ಟರ್ ಮಾಡಿಕೊಂಡಿದ್ದಾರೆ. ಹೀಗಾಗಿ ಕಳೆದ ಬಾರಿಯಂತೆ ದೆಹಲಿಯ ಗಡಿಯಲ್ಲಿ ಸುದೀರ್ಘ ಧರಣಿ ನಡೆಯಬಹುದು. ಅಲ್ಲದೇ ಈ ಹೋರಾಟಕ್ಕೆ ದಕ್ಷಿಣ ರಾಜ್ಯಗಳ ನೆರವನ್ನು ಕೋರಲಾಗಿದೆ ಎಂದು ಇಲಾಖೆ ಎಚ್ಚರಿಸಿದೆ.
ಮುಂದುವರಿದು ರೈತರು ಸಣ್ಣ ಗುಂಪುಗಳಲ್ಲಿ ಬಂದು ದೆಹಲಿಯ ಸುತ್ತಮುತ್ತಲಿನ ಗುರುದ್ವಾರಗಳು, ಧರ್ಮಶಾಲಾಗಳು, ಆಶ್ರಮಗಳು, ಅತಿಥಿ ಗೃಹಗಳಲ್ಲಿ ಅಡಗಿಕೊಂಡಿದ್ದು, ಕ್ಷಿಪ್ರ ಪ್ರತಿಭಟನೆಗಳನ್ನು ನಡೆಸಲು ಯೋಜಿಸಿದ್ದಾರೆ. ಅವರು ಪ್ರಧಾನ ಮಂತ್ರಿ ಭವನ, ಗೃಹ ಸಚಿವರ ಭವನದಂತಹ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಬಹುದೆಂದು ಎಚ್ಚರಿಸಲಾಗಿದೆ. ಇದನ್ನೂ ಓದಿ: ಡಿಕೆಶಿ ಮೇಲೆ ಲೋಕಾಯುಕ್ತದಿಂದ ಎಫ್ಐಆರ್ ದಾಖಲು