ವಿವಾದಾತ್ಮಕ ಹೇಳಿಕೆಯ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿರುವ ನಟ ಚೇತನ್ (Chetan) ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ನಟ ಚೇತನ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ನಾಡಪ್ರಭು ಕೆಂಪೇಗೌಡರ (Kempegowda) ವಿರುದ್ಧ ಅವಮಾನ ಮಾಡುವಂತಹ ಪೋಸ್ಟ್ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ವಕೀಲ ಆರ್.ಎಲ್.ಎನ್ ಮೂರ್ತಿ ಎನ್ನುವವರು ಶೇಷಾದ್ರಿ ಪುರಂ (Seshadripuram) ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು (complaint) ನೀಡಿದ್ದಾರೆ.
ಕೆಂಪೇಗೌಡ ಉಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದ ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. ಟಿಪ್ಪು ಸುಲ್ತಾನ್ ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ. ಅವರ ಜನ್ಮವು ಮುಸ್ಲಿಮರಾಗಿ ಅವರ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರಾದೃಷ್ಟವಶಾತ್ ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಚೇತನ್ ಬರೆದಿದ್ದರು.
ಈ ಟ್ವೀಟ್ ಅನ್ನು ಆಧರಿಸಿ ಮೂರ್ತಿ ಎನ್ನುವವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ದಾಖಲಿಸಿದ್ದಾರೆ. ಚೇತನ್ ನೇರ ನಿಷ್ಠುರದ ಕಾರಣದಿಂದಾಗಿ ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಇಂತಹ ವಿಚಾರಗಳಿಗಾಗಿ ಹಲವಾರು ಬಾರಿ ಇವರ ಮೇಲೆ ದೂರುಗಳು ದಾಖಲಾಗಿವೆ.