ರಿಯಲ್ ಲೈಫ್ ಚಿತ್ರಗಳು ಹೆಚ್ಚು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ‘ನೋಡದ ಪುಟಗಳು’ (Nodadha Putagalu) ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗಿದೆ. ‘ಜೀವನಪೂರ್ತಿ ತಿರುವುಗಳು ಬರುತ್ತದೆ. ನಿನ್ನ ತಿರುವು ಬರುವ ತನಕ ಕಾಯಬೇಕು’ ಎಂದು ಇಂಗ್ಲಿಷ್ದಲ್ಲಿ ಅಡಿಬರಹವಿದೆ. ಸುದ್ದಿ ಮಾಡುವ ಸಲುವಾಗಿ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ಬಣಕಾರ್ ಮತ್ತು ಹಿರಿಯ ನಟ ಡಿಂಗ್ರಿನಾಗರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ನವ ಪ್ರತಿಭೆ ಎಸ್.ವಸಂತ್ಕುಮಾರ್ (Vasanth Kumar) ಸಿನಿಮಾಕ್ಕೆ ರಚನೆ, ನಿರ್ದೇಶನ ಹಾಗೂ ಸ್ವೀಟ್ ಅಂಡ್ ಸಾಲ್ಟ್ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ. ಮೂಲತಃ ಟೆಕ್ಕಿಯಾಗಿರುವ ಇವರು ಬಣ್ಣದ ಲೋಕದ ಆಸೆಯಿಂದ ನಿರ್ದೇಶನದ ಕೋರ್ಸ್ನ್ನು ಕಲಿತುಕೊಂಡು, ಕೂಡ್ಲು ರಾಮಕೃಷ್ಣ, ಯೋಗಿ ಅಭಿನಯದ ‘ಯಕ್ಷ’ ಚಿತ್ರಕ್ಕೆ ಸಹಾಯಕನಾಗಿ ಅನುಭವ ಪಡೆದುಕೊಂಡಿದ್ದಾರೆ. ನಂತರ ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ಓದಿ:ಯಾರನ್ನಾದರೂ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು?
ವರ್ಷ ವರ್ಷ ನಿರ್ದಿಷ್ಟ ಅವಧಿಯಲ್ಲಿ ಒಂದಷ್ಟು ಘಟನೆಗಳು ಜರುಗುತ್ತವೆ. ಮುಂದೆ ಇದರ ಆಧಾರದ ಮೇಲೆ ಸಣ್ಣ ಏಳೆಯನ್ನು ಬರೆದುಕೊಂಡು ಗೆಳೆಯನಿಗೆ ಹೇಳಿದ್ದಾರೆ. ಚೆನ್ನಾಗಿದೆ ಏಕೆ ಸಿನಿಮಾ ಮಾಡಬಾರದೆಂದು ಸಲಹೆ ನೀಡಿದ್ದಾರೆ. ಆತನ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದೇ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಕಲಾವಿದರಿಗೆ ಕಥೆ ಹೇಳದೆ ಕುತೂಹಲ ಕಾಯ್ದಿರಿಸಿದ್ದಾರೆ. ನಾಲ್ಕು ವಯೋಮಾನದವರ ಸನ್ನಿವೇಶಗಳು ಬಂದು ಹೋಗುತ್ತದೆ. ಎಲ್ಲವು ಸೇರಿದರೆ ಕ್ಲೈಮಾಕ್ಸ್ ಆಗುತ್ತದೆ. ಆದರೆ ಒಬ್ಬರಿಗೊಬ್ಬರು ಭೇಟಿ ಆಗುವುದಿಲ್ಲ. ಎಲ್ಲರ ಬದುಕಿನಲ್ಲಿ ಕೆಟ್ಟ ಸಮಯ ಬಂದೇ ಬರುತ್ತೆ. ಅದು ನಮ್ಮನ್ನು ಹತೋಟಿಯಲ್ಲಿಡುತ್ತದೆ. ಇಲ್ಲದೆ ಹೋದಲ್ಲಿ ನಾವು ಹತೋಟಿಯಲ್ಲಿಟ್ಟು ಕೊಳ್ಳಬೇಕು. ಇದನ್ನೆ ಚಿತ್ರದಲ್ಲಿ ಹೇಳಲಿಕ್ಕೆ ಹೊರಟಿದ್ದೇನೆಂದು ನಿರ್ದೇಶಕರು ಸಣ್ಣ ಸುಳಿವನ್ನು ಬಿಟ್ಟುಕೊಟ್ಟರು.
ನಾಯಕ ಪ್ರೀತಂ ಮಕ್ಕಿಹಳ್ಳಿ (Pritam Makkihalli), ನಾಯಕಿ ಕಾವ್ಯ ರಮೇಶ್ (Kavya Ramesh) ಇಬ್ಬರಿಗೂ ಎರಡನೇ ಅವಕಾಶ. ಉಳಿದಂತೆ ವಾಸು, ವಿಲಾಸ್ ಕುಲಕರ್ಣಿ, ಗೌತಂ.ಜಿ, ಅಶೋಕ್ ರಾವ್, ಪಿ.ಬಿ.ರಾಜುನಾಯಕ, ಶಾಂತಿ.ಎಸ್.ಗೌಡ, ಮೋಹನ್ಕುಮಾರ್, ರಘುಶ್ರೀವತ್ಸ, ಅಮೃತೇಶ್, ರೇಣುಕಗೌಡ ಮುಂತಾದವರು ನಟಿಸಿದ್ದಾರೆ. ಪ್ರಶಾಂತ್ ಗೊಣಕಿ ಸಿ.ರಘುನಾಥ್ ಸಾಹಿತ್ಯದ ಹಾಡುಗಳಿಗೆ ವಿಘ್ನೇಶ್ ಮೆನನ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕುಮಾರ್.ಎನ್, ಸಂಕಲನ ರಘುನಾಥ್.ಎಂ ಅವರದಾಗಿದೆ. ಹೆಸರಘಟ್ಟ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.