ಕಾರವಾರ: ಪಶ್ಚಿಮ ಕರಾವಳಿಯ ಮುಂಬೈನಲ್ಲಿ ಸಮುದ್ರ ಮೂಲಕ ಉಗ್ರಗಾಮಿಗಳು ತಾಜ್ ಹೋಟಲ್ ಮೇಲೆ ಆಕ್ರಮಣ ಮಾಡಿದ ನಂತರ ನೌಕಾದಳದವರು ಎಚ್ಚೆತ್ತುಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೆ ಕೇಂದ್ರ ಗುಪ್ತದಳ ಕಾರವಾರ ಕದಂಬ ನೌಕಾ ನೆಲೆಗೆ ಉಗ್ರಗಾಮಿಗಳು ಟಾರ್ಗೆಟ್ ಮಾಡಿರುವ ಕುರಿತು ವರದಿ ನೀಡಿದ ನಂತರ ಕ್ಷಿಪ್ರ ಕಾರ್ಯಾಚರಣೆಗೆ ಸಜ್ಜಾಗಿದ್ದು ಇಂದು ಹೊಸ ಕ್ಷಿಪ್ರ ಕಾರ್ಯಾಚರಣೆಗಾಗಿ ನೌಕೆಯೊಂದು ಸೇರ್ಪಡೆಯಾಗಿದೆ.
ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಕರ್ನಾಟಕದ ನೌಕಾದಳದ ವೈಸ್ ಅಡ್ಮಿರಲ್ ಗಿರೀಶ್ ಲೂಥ್ರಾ ಅವರು ಹೊಸ ಕ್ಷಿಪ್ರ ರಕ್ಷಣಾ ನೌಕೆ `ಐಎನ್ಎಸ್ ತಿಲ್ಲಾಂಚಾಂಗ್’ ಸಮರ್ಪಣೆ ಮಾಡಿದರು.
ಏನಿದರ ವಿಶೇಷತೆ?:
ಅರಬ್ಬಿ ಸಮುದ್ರದ ಕರಾವಳಿಯ ಭಾಗದಲ್ಲಿ ಶತ್ರುಗಳನ್ನ ಹಿಮ್ಮೆಟಿಸಲು ಸಜ್ಜಾಗಿರುವ ಐಎನ್ಎಸ್ ತಿಲ್ಲಾಂಚಾಂಗ್ ಕೋಲ್ಕತ್ತಾದ ಗಾರ್ಡನ್ ರೀಚ್ ಹಡಗು ನಿರ್ಮಾಣ ಕೇಂದ್ರದಲ್ಲಿ ನಿರ್ಮಾಣವಾಗಿದೆ. 48.9 ಮೀಟರ್ ಉದ್ದವಿರುವ ಈ ನೌಕೆ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತೆ. ಅಂಡಮಾನ್ ನಿಕೋಬಾರ ಬಳಿ ಇರುವ ತಿಲ್ಲಾಂಚಾಂಗ್ ಎಂಬ ದ್ವೀಪದ ಹೆಸರನ್ನ ಈ ನೌಕೆಗೆ ಇಡಲಾಗಿದೆ.
ನೌಕೆ ಚಿಕ್ಕದಾಗಿದ್ರೂ 50 ಜನ ಸಿಬ್ಬಂದಿಗಳು ಅರಾಮವಾಗಿ ಕಾರ್ಯನಿರ್ವಹಿಸಬಹುದಾಗಿದೆ. ಒಂದು ಬಾರಿ ಸಮುದ್ರದಲ್ಲಿ ಸಂಚರಿಸಲು ಪ್ರಾರಂಭಿಸಿದ್ರೆ ಒಂದು ವಾರದಷ್ಟು ಕಾಲ ಅಲ್ಲಿಯೇ ಇರುವಷ್ಟು ಸಾಮರ್ಥ್ಯ ಇದಕ್ಕಿದ್ದು ಸುಸಜ್ಜಿತ ಅಡುಗೆ ಮನೆ, ಡೈನಿಂಗ್ ಹಾಲ್, ರೆಸ್ಟ್ ರೂಮ್ ಸೇರಿದಂತೆ ಎರಡು ರಬ್ಬರ್ ಬೋಟ್ ಗಳು ಇದರಲ್ಲಿವೆ.
ಇನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಲು ಒಳ ಭಾಗದಿಂದ ವೀಕ್ಷಣೆಗಾಗಿ ಸಿ.ಸಿ ಟಿ.ವಿ ಜೊತೆಯಲ್ಲಿ 30 ಎಂ.ಎಂ. ಮೈನ್ ಗನ್, ಸಣ್ಣ ಹಾಗೂ ದೊಡ್ಡ ಮಿಷನ್ ಗನ್ಗಳು ಇದರಲ್ಲಿದ್ದು ಕರಾವಳಿ ಭದ್ರತೆಗಳಿಗಲ್ಲದೇ, ಪ್ರಕೃತಿ ವಿಕೋಪ ಮುಂತಾದ ಕಾರ್ಯಗಳಿಗೂ ಈ ನೌಕೆಯನ್ನು ಬಳಸಿಕೊಳ್ಳಬಹುದು. ಈ ಹೊಸ ನೌಕೆಯನ್ನು ಕರ್ನಾಟಕ ನೇವೆಲ್ ಪ್ಲಾಗ್ ಆಫೀಸರ್ ಕಮಾಂಡೆಂಡ್ ನೋಡಿಕೊಳ್ಳಲಿದ್ದು ಇದರ ನೇತೃತ್ವವನ್ನು ಸಿ.ಡಿ.ಆರ್. ಅದಿತ್ ಪಾಟ್ನಾಯಕ್ ವಹಿಸಿದ್ದಾರೆ. ಕಾರವಾರದ ಕದಂಬ ನೌಕಾ ನೆಲೆಯಿಂದಲೇ ಈ ಸ್ಪೀಡ್ ವಾಟರ್ ಜಟ್ ನೌಕೆ ಕಾರ್ಯ ನಿರ್ವಹಿಸಲಿದೆ.