ಅಕೋಲಾ: ಬಿಸಿಲ ಬೇಗೆ ತಾಳಲಾರದೆ ಪೊದೆಯೊಳಗೆ ನಿಲ್ಲಿಸಿದ್ದ ಕಾರನ್ನು ಹತ್ತಿ 12 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಮನಕಲಕುವ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಜಲ್ವಾಡಿ ಗ್ರಾಮದಲ್ಲಿ ನಡೆದಿದೆ.
ಸುಡು ಬಿಸಿಲಿನಿಂದ ರಕ್ಷಣೆ ಪಡೆಯಲು ಜಲ್ವಾಡಿ ಗ್ರಾಮ ತನೇಶ್ ಬಲಾಲ್ ಪೊದೆಯೊಳಗೆ ನಿಲುಗಡೆ ಮಾಡಲಾಗಿದ್ದ ಕಾರಿನಲ್ಲಿ ಕುಳಿತಿದ್ದಾನೆ. ಆ ವೇಳೆ ಕಾರಿನ ಬಾಗಿಲುಗಳು ಆಟೋಮ್ಯಾಟಿಕ್(ಸ್ವಯಂ ಚಾಲಿತ) ಆಗಿ ಮುಚ್ಚಿವೆ. ಇದರಿಂದಾಗಿ ಕಾರಿನೊಳಗೆ ಸಿಲುಕಿದ್ದಾನೆ. ಕಾರಿನೊಳಗೆ ಸ್ವಲ್ಪವೂ ಗಾಳಿ ಬಾರದ ಕಾರಣ ಬಾಲಕನಿಗೆ ಉಸಿರಾಡಲು ಕಷ್ಟವಾಗಿದ್ದು, ಉಸಿರು ಗಟ್ಟಿ ಆತ ಕಾರಿನಲ್ಲೇ ಸಾವನ್ನಪ್ಪಿದ್ದಾನೆ.
ತಾಂತ್ರಿಕ ತೊಂದರೆಗಳ ಕಾರಣ ಕಳೆದ ಎರಡು ವರ್ಷಗಳಿಂದ ಕಾರನ್ನು ಮಾಲೀಕ ಬಳಸುತ್ತಿರಲಿಲ್ಲ. ಹೀಗಾಗಿ ಕಾರನ್ನು ಮಾಲೀಕ ತನ್ನ ಮನೆ ಮುಂದೆ ಇದ್ದ ಪೊದೆಯೊಳಗೆ ನಿಲ್ಲಿಸಿದ್ದರು. ಬಡ ಬಾಲಕ ತನೇಶ್ ತನ್ನ ಅಜ್ಜಿಯ ಜೊತೆ ಪ್ಲಾಸ್ಟಿಕ್ ಕಸವನ್ನು ತೆಗೆದುಕೊಳ್ಳಲು ಬಂದಿದ್ದ. ಆದರೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಸ್ಥಳದಲ್ಲಿದ್ದ ಕಾರನ್ನು ಹತ್ತಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಸಿಲಿಗೆ ಬಾಲಕ ಕಾರಿನಲ್ಲಿ ಕುಳಿತುಕೊಂಡಿದ್ದಾನೆ. ಆ ವೇಳೆ ಕಾರಿನ ಬಾಗಿಲು ಮುಚ್ಚಿರಬಹುದು. ಈ ವಿಷಯ ತಿಳಿಯದೆ ಆತನ ಅಜ್ಜಿ ಅವನಿಗಾಗಿ ದಿನವಿಡಿ ಹುಡುಕಿದ್ದಾರೆ. ಆದರೆ ಬಾಲಕ ಸಿಗಲಿಲ್ಲ. ಕೊನೆಗೆ ಜನರೆಲ್ಲ ಹುಡುಕಾಡಿದಾಗ ಬಾಲಕ ಕಾರಿನ ಒಳಗಡೆ ಮೃತಪಟ್ಟ ವಿಚಾರ ಗೊತ್ತಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.