ನವದೆಹಲಿ: ಸುಪ್ರಿಂ ಕೋರ್ಟ್ ಬುಧವಾರ ಐಎನ್ಎಕ್ಸ್ ಕಂಪನಿ ಮಾಲಕಿ ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು ಮಾಡಿದ್ದು, ಶುಕ್ರವಾರ ಜೈಲಿನಿಂದ ಹೊರಬಂದಿದ್ದಾರೆ.
ಇಂದ್ರಾಣಿ ಮುಖರ್ಜಿ ತನ್ನ ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ, 2015ರಲ್ಲಿ ಜೈಲು ಸೇರಿದ್ದರು. ಇದೀಗ 6 ವರ್ಷಗಳ ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.
ಜೈಲಿನಿಂದ ಹೊರಬರುತ್ತಲೇ ಮಾಧ್ಯಮದೊಂದಿಗೆ ಮಾತನಾಡಿದ ಇಂದ್ರಾಣಿ ಮುಖರ್ಜಿ, ತೆರೆದ ಆಕಾಶವನ್ನು ನೋಡುತ್ತಾ ಬಹಳ ಸಂತೋಷವಾಗುತ್ತಿದೆ. ನಾನು ಜೈಲಿನಲ್ಲಿ ಬಹಳಷ್ಟು ಕಲಿತಿದ್ದೇನೆ. ಮುಂದಿನ ಸಂದರ್ಶನದಲ್ಲಿ ಅದರ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
ಬುಧವಾರ ಸುಪ್ರೀಂ ಕೋರ್ಟ್ ಇಂದ್ರಾಣಿ ಮುಖರ್ಜಿಗೆ 2 ಲಕ್ಷ ರೂ. ಶ್ಯೂರಿಟಿ ಮತ್ತು ತನಿಖಾಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಪಿಎಸ್ಐ ಅಕ್ರಮ – ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ಜಾಮೀನು ನಿರಾಕರಿಸಿದ ಕೋರ್ಟ್
ಆರೋಪ ಏನು?
2012 ಏಪ್ರಿಲ್ 24 ರಂದು ಇಂದ್ರಾಣಿ ಮುಖರ್ಜಿ, ಕಾರು ಚಾಲಕ ಶ್ಯಾಮ್ವರ್ ರೈ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಸೇರಿ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದರು. ಪುತ್ರಿಯ ಶವವನ್ನು ರಾಯಗಢ ಜಿಲ್ಲೆಯ ಕಾಡಿನಲ್ಲಿ ಎಸೆದು ಸುಟ್ಟು ಹಾಕಲಾಗಿದೆ ಎಂಬ ಆರೋಪ ಇಂದ್ರಾಣಿ ಮುಖರ್ಜಿ ಮೇಲಿದೆ. ಇದನ್ನೂ ಓದಿ: ಕೇಂದ್ರ ಕಾರಾಗೃಹದಲ್ಲಿ ವೀರ ಸಾವರ್ಕರ್ ಪುಸ್ತಕ ಇಡಲು ಹೈಕೋರ್ಟ್ ನ್ಯಾಯಮೂರ್ತಿ ಸೂಚನೆ
ಈ ಸಂಬಂಧ 2015ರಲ್ಲಿ ಮುಂಬೈ ಪೊಲೀಸರು ಇಂದ್ರಾಣಿ ಮುಖರ್ಜಿಯನ್ನು ಬಂಧಿಸಿದ್ದರು. ಹೈ ಪ್ರೊಫೈಲ್ ಪ್ರಕರಣದ ಹಿನ್ನೆಲೆ ಇದರ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.