ಇಂದೋರ್: ಇಂದೋರ್ ಅಥವಾ ಯಾವುದೇ ಮೈದಾನದಲ್ಲಿ ಇಳಿದ್ರೆ ಮಾತ್ರ ಗೆಲುವು ಸಿಗಲ್ಲ. ಅದಕ್ಕಾಗಿ ಶ್ರಮದಿಂದ ಆಡಿದರೆ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಟೆಸ್ಟ್ ಸರಣಿಗೂ ಮುನ್ನ ಇಂದೋರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಇಂದೋರ್ ಮೈದಾನದಲ್ಲಿ ಟೀಂ ಇಂಡಿಯಾ ಸೋಲು ಕಂಡಿಲ್ಲ. ಆದ್ರೆ ಚೆನ್ನಾಗಿ ಆಡಿದ್ರೆ ಮಾತ್ರ ಗೆಲುವು ಸಿಗಲಿದೆ. ಯಾವುದೇ ತಂಡಗಳನ್ನು ನಾವು ಸರಳವಾಗಿ ತೆಗೆದುಕೊಳ್ಳಬಾರದು. ಪಂದ್ಯದ ಯಾವುದೇ ಸಮಯದಲ್ಲಿ ತಂಡಗಳು ಪ್ರಬಲವಾಗಿ ಪೈಪೋಟಿ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಟಿ20 ಸರಣಿಯಲ್ಲಿ ಗೆಲುವು ನಮ್ಮದಾಗಿದೆ. ಆದರೆ ಬಾಂಗ್ಲಾದೇಶದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಯಾವ ಆಟಗಾರರನ್ನು ಹೀಗೆ ಎಂದು ಅಂದಾಜಿಸಬಾರದು ಎಂದು ಹೇಳಿದರು.
ನಮ್ಮ ಮೇಲಿರುವ ನಂಬಿಕೆ ಮತ್ತು ವಿಶ್ವಾಸ ತಂಡದ ಮೇಲಿರಬೇಕು. ಆ ವಿಶ್ವಾಸ, ಶ್ರದ್ಧೆ ಮತ್ತು ನಂಬಿಕೆ ಟೀಂ ಇಂಡಿಯಾದಲ್ಲಿದ್ದ ಕಾರಣವೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ. ನಮ್ಮ ಆಟಗಾರ ಮೈದಾನಕ್ಕಿಳಿದಾಗ ತನ್ನ ಆಟದಿಂದ ತಂಡಕ್ಕೆ ಒಳ್ಳೆಯದಾಗುತ್ತೆ ಎಂಬ ಬಲವಾದ ನಂಬಿಕೆಯಿಂದ ಆಡುತ್ತಾನೆ ಎಂದು ತಂಡದ ಪ್ರತಿಯೊಬ್ಬರ ಬಗ್ಗೆ ಕೊಹ್ಲಿ ಮೆಚ್ಚುಗೆ ಸೂಚಿಸಿದರು.
ಕಳೆದ ಕೆಲವು ಪಂದ್ಯಗಳಿಂದ ಉಮೇಶ್ ಮತ್ತು ಮೊಹಮದ್ ಶಮಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಶಾಂತ್ ಸಹ ಎರಡು ವರ್ಷಗಳಿಂದ ಚೆನ್ನಾಗಿ ಆಡುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಫಿಟ್ ಆಗಿಲ್ಲ. ಟೆಸ್ಟ್ ನಲ್ಲಿ ಟೀಂ ಇಂಡಿಯಾ ಗೆಲುವು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದೋರ್ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಣೆಗೆ ಹೆಚ್ಚು ಜನರು ಆಗಮಿಸುತ್ತಾರೆ. ಬೇರೆ ಸ್ಟೇಡಿಯಂಗಳಲ್ಲಿ ಟೆಸ್ಟ್ ಮ್ಯಾಚ್ ನಡೆದಾಗ ಬರುವ ಜನರ ಸಂಖ್ಯೆ ಕಡಿಮೆ. ಟೆಸ್ಟ್ ಪಂದ್ಯಗಳತ್ತ ಜನರನ್ನು ಆಕರ್ಷಿಸುವ ಉದ್ದೇಶದಿಂದ ದೇಶದಲ್ಲಿ ಐದು ಟೆಸ್ಟ್ ಸೆಂಟರ್ ಮಾಡಬೇಕು ಎಂದು ಕೊಹ್ಲಿ ಹೇಳಿದರು.