ಬೆಂಗಳೂರು: ಪೊಲೀಸ್ ಅಧಿಕಾರಿಗಳು (Police Officers) ಇನ್ನು ಮುಂದೆ ಶಿಸ್ತು ಮೀರಿದರೆ (Indiscipline) ದಂಡದೊಂದಿಗೆ (Fine) ಕೆಲಸದಿಂದಲೂ ವಜಾ ಮಾಡುವಂತಹ ನಿಯಮವನ್ನು ರಾಜ್ಯ ಸರ್ಕಾರ (Karnataka Govt) ಜಾರಿಗೊಳಿಸಿದೆ. ಕರ್ನಾಟಕ ರಾಜ್ಯ ಪೊಲೀಸ್ ಶಿಸ್ತು ನಡವಳಿ ತಿದ್ದುಪಡಿ ನಿಯಮ-2022ಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಹೊಸ ನಿಯಮದ ಪ್ರಕಾರ ಅಧಿಕಾರಿಗಳು ಕ್ರೂರತನದಿಂದ ವರ್ತಿಸಿದರೆ, ವಿಕೃತ ಸ್ವಭಾವದವರಾಗಿದ್ದರೆ, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಇನ್ನು ಮುಂದೆ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳಿಂದ ಶಿಸ್ತಿನ ಉಲ್ಲಂಘನೆಯಾದರೆ ಅವರಿಗೆ ದಂಡನೆ ವಿಧಿಸಬಹುದಾಗಿದೆ.
ಶಿಸ್ತು ಉಲ್ಲಂಘನೆಗೆ ಶಿಕ್ಷೆ ಏನು?
ಅಧಿಕಾರಿಗಳು ಶಿಸ್ತು ಉಲ್ಲಂಘನೆ ಮಾಡಿದ್ದಲ್ಲಿ ಅವರಿಗೆ ವಿವಿಧ ರೀತಿಯಲ್ಲಿ ದಂಡನೆ ವಿಧಿಸಲಾಗುತ್ತದೆ. ಅದರಲ್ಲಿ ವಾಗ್ದಂಡನೆ, ವೇತನ ತಡೆ ಹಿಡಿಯುವುದು, ಮುಂಬಡ್ತಿ ತಡೆ ಹಿಡಿಯುವುದು, ಕಾಲಿಕ ವೇತನ ಶ್ರೇಣಿಯಲ್ಲಿ ಕೆಳ ಹಂತಕ್ಕೆ ಇಳಿಸುವುದು. ಕಡ್ಡಾಯ ನಿವೃತ್ತಿಗೊಳಿಸುವುದು ಸೇರಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಈ ವರ್ಷ ಶತಮಾನದ ಮಳೆ – ಇನ್ನೂ ನಾಲ್ಕು ದಿನ ವರುಣನ ಆರ್ಭಟ
ಭವಿಷ್ಯದ ಉದ್ಯೋಗಕ್ಕೆ ಅನರ್ಹವಾಗುವಂತೆ ಸೇವೆಯಿಂದ ತೆಗೆದು ಹಾಕುವುದು, ಸೇವೆಯಿಂದ ವಜಾ ಮಾಡುವುದು, ದಂಡನಾ ಕವಾಯತು ಶಿಕ್ಷೆ ವಿಧಿಸುವುದು, ಹೆಚ್ಚುವರಿ ಪಹರೆ, ದಣಿವಿನ ಅಥವಾ ಇತರೆ ಕೆಲಸ ವಿಧಿಸುವುದು, ಜುಲ್ಮಾನೆ ವಿಧಿಸುವುದು ಕೂಡಾ ದಂಡನೆಯ ಪ್ರಕಾರಗಳಲ್ಲಿ ಸೇರುತ್ತವೆ.
ಈ ದಂಡನೆಗಳನ್ನು ಸಬ್ ಇನ್ಸ್ಪೆಕ್ಟರ್ ಅಥವಾ ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳ ಮೇಲೆ ವಿಧಿಸುವ ಹಾಗೆ ಇಲ್ಲ. ದಂಡ ವಿಧಿಸುವ ಮುನ್ನ ಮೇಲ್ಮನವಿ ಪ್ರಾಧಿಕಾರಕ್ಕೂ ಅವಕಾಶ ನೀಡಲಾಗುತ್ತದೆ.
ಸರ್ಕಾರ ಅಪೀಲು ಮತ್ತು ಮರುಪರಿಶೀಲನೆಗಳಂತಹ ಕೆಲವು ನಿಯಮಗಳನ್ನೂ ಜಾರಿಗೊಳಿಸಿದೆ. ಪ್ರಕರಣದಲ್ಲಿ ಪ್ರಾಧಿಕಾರದ ಲೋಪ ಆಗಿದ್ದರೆ, ಪ್ರಕರಣ ರದ್ದು ಮಾಡುವ ಅವಕಾಶ ಕೂಡಾ ಅಧಿಸೂಚನೆಯಲ್ಲಿ ಸೇರ್ಪಡೆಯಾಗಿದೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ