ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್ ಮೆನು ಕೊಂಚ ಬದಲಾಗಿದೆ. ರುಚಿಕರ ಊಟ ಕೊಡುವ ಮೂಲಕ ಮತದಾರ ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬೆಳಗ್ಗೆ ನೀಡಲಾಗುತ್ತಿದ್ದ ತಿಂಡಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬೇಸಿಗೆಯಲ್ಲಿ ಚಟ್ನಿ ಉಳಿಯಲ್ಲ ಎಂದು ಈಗ ಚಟ್ನಿಗೆ ಕೊಕ್ ನೀಡುತ್ತಿದ್ದಾರೆ. ಚಟ್ನಿ ಬದಲಾಗಿ ಇಡ್ಲಿ ಜತೆ ಇನ್ನು ಗಟ್ಟಿ ಸಾಂಬರ್ ಸಿಗಲಿದೆ. ವಾರಕ್ಕೆ ಎರಡು ದಿನ ಖಾರಬಾತ್ ಸಿಗಲಿದೆ. ಈ ಹಿಂದೆ ಒಂದೇ ದಿನ ಮಾತ್ರ ಖಾರಬಾತ್ ನೀಡಲಾಗುತ್ತಿತ್ತು. ಇತ್ತ ಬಿಸಿಬೇಳೆ ಬಾತ್ ಗೆ ಖಾರಬೂಂದಿ ಸಹ ಕೊಡಲು ತೀರ್ಮಾನಿಸಲಾಗಿದೆ.
ಊಟದ ಸಾಂಬರ್ ನಲ್ಲಿಯೂ ಸಾಕಷ್ಟು ಬದಲಾವಣೆಯಾಗಿದು, ಈ ಹಿಂದೆ ತರಕಾರಿ ಅಡುಗೆ ಸಾಂಬಾರ್ ಮಾತ್ರ ಇತ್ತು. ಈಗ ಎಲೆಕ್ಷನ್ ಗಿಮಿಕ್ ಎನ್ನುವಂತೆ ಕಾಳುಗಳನ್ನ ಹಾಕಿ ಸಾಂಬರ್ ಮಾಡಲು ತೀರ್ಮಾನಿಸಲಾಗಿದೆ. ಈ ಹಿಂದೆ ರಾತ್ರಿ ವೇಳೆ ಪಲಾವ್ ಅಥವಾ ಅನ್ನ ಸಾಂಬರ್ ಒಂದೇ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿತ್ತು. ಈಗ ಮೆನು ಬದಲಾಗಿದ್ದರಿಂದ ಗ್ರಾಹಕರಿಗೆ ಹೊಸ ಅಡುಗೆಯ ರುಚಿ ನೋಡಬಹುದಾಗಿದೆ. ಇದು ಬಡವರಿಗೆ ತರಹೇವರಿ ಊಟ ಕೊಟ್ಟು ಮತಗಿಟ್ಟಿಸೊ ಪ್ಲಾನ್, ಇಲ್ಲ ನಿಜಕ್ಕೂ ಈ ಹೊಸ ಐಟಂಗಳು ಮುಂದುವರೆಯುತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಮೆನು ಬದಲಾಗಿದ್ದು ಒಳ್ಳೆಯದು ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.