ಬೆಂಗಳೂರು: ಏನೇ ಮಾಡಿದರು ಇಂದಿರಾ ಕ್ಯಾಂಟೀನ್ ಗೋಳು ಮಾತ್ರ ಮುಗಿಯುತ್ತಲೇ ಇಲ್ಲ. ಒಳಚರಂಡಿ ಬಿಲ್ ಬಾಕಿ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಶೌಚಾಲಯದ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. ಈ ಕ್ರಮ ಕ್ಯಾಂಟೀನ್ಗೆ ಬರುವ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡಿದೆ.
ಬೆಂಗಳೂರಿನ ವಸಂತ ನಗರ, ಟಿ.ಸಿ ಪಾಳ್ಯ, ರಾಧಾಕೃಷ್ಣ ವಾರ್ಡ್ನಲ್ಲಿರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಶೌಚಾಲಯ ಬಂದ್ ಗೋಳು ತಲೆ ಕೆಡಿಸಿದೆ. ರಿಯಾಯಿತಿ ದರದಲ್ಲಿ ಊಟ ಮಾಡಲು ಬರುವ ಗ್ರಾಹಕರಿಗೆ ಮೂಲಭೂತ ಸೌಕರ್ಯವೇ ಇಲ್ಲದಂತೆ ಆಗಿದೆ. ಬಿಲ್ ಬಾಕಿ ಹಿನ್ನೆಲೆಯಲ್ಲಿ ಒಳಚರಂಡಿ ಮೇಲ್ವಿಚಾರಣ ಸಿಬ್ಬಂದಿ ಸ್ಯಾನಿಟರಿ ಲೈನ್ ಬ್ಲಾಕ್ ಮಾಡಿದ್ದಾರೆ. ಈ ನಿರ್ಧಾರದಿಂದ ಇಂದಿರಾ ಕ್ಯಾಂಟೀನ್ ಗಬ್ಬು ನಾರುತ್ತಿದೆ.
ಸ್ಯಾನಿಟರಿ ಬ್ಲಾಕ್ ಆದರೆ ಫುಡ್ ಪಾಯ್ಸನ್ ಹಾಗೂ ಸ್ವಚ್ಚತೆ ಸಮಸ್ಯೆ ಆಗಲಿದೆ ಎಂದು ಇಂದಿರಾ ಕ್ಯಾಂಟೀನ್ ಮ್ಯಾನೇಜರ್ ಮಹ್ಮದ್ ಹೇಳಿದ್ದಾರೆ. ಈ ಬಿಲ್ ಬಾಕಿ ಕಥೆ ತಿಳಿಯದ ಗ್ರಾಹಕ ಮಾತ್ರ ಶೌಚಾಲಯ ಸೇವೆ ಸ್ಥಗಿತ ಮಾಡಿರುವುದು ಸರಿ ಇಲ್ಲ. ಬೇಗ ಶೌಚಾಲಯ ವ್ಯವಸ್ಥೆ ಕೊಡಿ ಎಂದು ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಸ್ಟಾರ್ ಹೋಟೆಲ್, ಕೆಫೆ ಸೆಂಟರ್ ಹೀಗೆ ಯಾವ ಹೋಟೆಲ್ನಲ್ಲೂ ಗ್ರಾಹಕರು ಶೌಚಾಲಯ ಬಳಸುವುದನ್ನ ತಡೆಯುವಂತಿಲ್ಲ. ಆದರೆ ಇಂದಿರಾ ಕ್ಯಾಂಟೀನ್ನಲ್ಲಿ ಮಾತ್ರ 25 ಲಕ್ಷ ರೂ. ಬಿಲ್ ಬಾಕಿ ಹಿನ್ನೆಲೆ ಸ್ಯಾನಿಟರಿ ಲೈನ್ ಬ್ಲಾಕ್ ಮಾಡಲಾಗಿದ್ದು, ಇದೇ ನೆಪವೊಡ್ಡಿ ಗ್ರಾಹಕರಿಗೆ ಶೌಚಾಲಯ ಸೇವೆ ಸ್ಥಗಿತಗೊಳಿಸಿರುವುದು ಗ್ರಾಹಕರಿಗೆ ಬೇಸರ ತಂದಿದೆ.