ನವದೆಹಲಿ: ಇಂಡಿಗೋ ವಿಮಾನಗಳ ಬಿಕ್ಕಟ್ಟಿಗೆ (Indigo) ಸಂಬಂಧಿಸಿದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರ (Central Govt) ಗಮನಹರಿಸಿ ಕ್ರಮ ಕೈಗೊಂಡಿದೆ. ಹೀಗಾಗಿ ತುರ್ತು ವಿಚಾರಣೆಯ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠದ ಮುಂದೆ ಅರ್ಜಿ ಪ್ರಸ್ತಾಪಿಸಿದ ವಕೀಲರು, ಕಳೆದ ಕೆಲವು ದಿನಗಳಿಂದ ಇಂಡಿಗೋ ವಿಮಾನಗಳು ಹಠಾತ್ತನೆ ರದ್ದಾಗುತ್ತಿವೆ. ಇದರಿಂದ ದೇಶದ ಹಲವಾರು ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಮುಂಚಿತವಾಗಿ ತಿಳಿಸದೇ ಕಂಪನಿಯು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಇದು ಅತ್ಯಂತ ಗಂಭೀರ ಸಮಸ್ಯೆ ಎಂದು ಹೇಳಿದರು.ಇದನ್ನೂ ಓದಿ: ಮುಂದುವರಿದ `ಇಂಡಿಗೋ’ ಸಮಸ್ಯೆ: ಬೆಂಗಳೂರಲ್ಲಿ 127 ಸೇರಿ ದೇಶಾದ್ಯಂತ 450ಕ್ಕೂ ಹೆಚ್ಚು ವಿಮಾನಗಳು ರದ್ದು
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ಲಕ್ಷಾಂತರ ಜನರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದು ನಮಗೆ ತಿಳಿದಿದೆ. ತುರ್ತು ಕೆಲಸವಿರುವವರು, ತುರ್ತು ಚಿಕಿತ್ಸೆ ಬೇಕಾದ ರೋಗಿಗಳೂ ಸೇರಿದಂತೆ ಅನೇಕರು ಸಂಕಷ್ಟದಲ್ಲಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಗಮನಿಸಿ, ಕ್ರಮಗಳನ್ನು ತೆಗೆದುಕೊಂಡಿದೆ. ಇನ್ನೂ ಸ್ವಲ್ಪ ಸಮಯ ಕಾಯೋಣ, ಏನಾಗುತ್ತದೆ ನೋಡೋಣ. ಈಗ ತುರ್ತು ವಿಚಾರಣೆಯ ಅಗತ್ಯ ಇಲ್ಲ ಎಂದು ತಿಳಿಸಿದರು.
ದೇಶಾದ್ಯಂತ ಸೋಮವಾರ (ಡಿ.8) 450ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದುಗೊಂಡಿದೆ. ಈಗಾಗಲೇ ಈ ಸಂಬಂಧ ಡಿಜಿಸಿಎ ಇಂಡಿಗೋ ಸಿಇಓಗೆ ಶೋಕಾಸ್ ನೋಟಿಸ್ ನೀಡಿದ್ದು, ಏಕಾಏಕಿ ವಿಮಾನಗಳ ಹಾರಾಟ ರದ್ದು, ಸಂಚಾರ ವ್ಯತ್ಯಯಕ್ಕೆ ಕಾರಣ ಕೇಳಿದೆ.ಇದನ್ನೂ ಓದಿ: 610 ಕೋಟಿ ರೂ. ಮೌಲ್ಯದ ಟಿಕೆಟ್ಗಳ ಹಣ ಮರುಪಾವತಿಸಿದ ಇಂಡಿಗೋ

