ಬೆಂಗಳೂರು: ಭಾರತೀಯ ಸೈನಿಕರ ಗುಂಡಿನ ದಾಳಿಗೆ ಪ್ರತಿದಿನ ಗಡಿಯಲ್ಲಿ 5-6 ಉಗ್ರರು ಹತ್ಯೆಯಾಗುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನ ಪದೇ-ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ನೆರೆಯ ದೇಶಗಳು ನಿರಂತರವಾಗಿ ಭಾರತದ ಗಡಿಯೊಳಗೆ ಉಗ್ರಗಾಮಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ಭಾರತೀಯ ಸೈನಿಕರ ಗುಂಡಿಗೆ ಪ್ರತಿ ದಿನ 5-6 ಉಗ್ರರು ಸಾಯುತ್ತಿದ್ದಾರೆ ಎಂದು ತಿಳಿಸಿದರು.
ನೀವಾಗಿಯೇ ಮೊದಲು ಗುಂಡನ್ನು ಹಾರಿಸಬೇಡಿ, ಒಂದು ವೇಳೆ ಪಾಕಿಸ್ತಾನದಿಂದ ಒಂದು ಗುಂಡು ನಮ್ಮ ಗಡಿ ಪ್ರದೇಶವನ್ನು ದಾಟಿದರೂ, ಪ್ರತ್ಯುತ್ತರವಾಗಿ ಅಸಂಖ್ಯಾತ ಗುಂಡುಗಳನ್ನು ಹಾರಿಸುವಂತೆ ತಿಳಿಸಿರುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಚೀನಾದೊಂದಿಗಿನ ಡೋಕ್ಲಾಂ ಗಡಿ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಭಾರತದ ದುರ್ಬಲ ದೇಶವಲ್ಲ, ಡೋಕ್ಲಾಂ ಸಂಘರ್ಷವನ್ನು ಚೀನಾದೊಂದಿಗೆ ಬಗೆಹರಿಸಿದ ವಿಧಾನವೇ ಭಾರತದ ಬಲವನ್ನು ತಿಳಿಸುತ್ತದೆ. ವಿಶ್ವ ಹಲವು ಜನರು ಆಸಕ್ತಿಯಿಂದ ಚೀನಾ ಮತ್ತು ಭಾರತದ ನಡುವಿನ ಸಂಘರ್ಷವನ್ನು ಗಮನಿಸುತ್ತಿದ್ದರು ಎಂದು ತಿಳಿಸಿದರು.
ಒಂದು ವೇಳೆ ಭಾರತವು ದುರ್ಬಲ ರಾಷ್ಟ್ರವಾಗಿದ್ದಾರೆ ಚೀನಾದೊಡನೆ ಇದ್ದ ಸಂಘರ್ಷವನ್ನು ಪರಿಹಾರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.