ಉಡುಪಿ: ನವೆಂಬರ್ 5ರ ನಂತರ ಆರ್ಥಿಕತೆ ಸ್ಥಿರವಾಗಲಿದೆ ಎಂದು ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಅವರು ಭವಿಷ್ಯ ನುಡಿದ್ದಾರೆ.
ಭಾರತದ ಆರ್ಥಿಕ ಸ್ಥಿತಿ ಕುಸಿತದ ಕುರಿತು ಮಾತನಾಡಿದ ಅವರು, ಬೆಳವಣಿಗೆಯ ಸಂದರ್ಭದಲ್ಲಿ ಆರ್ಥಿಕ ಸ್ಥಿತಿಯಲ್ಲಿ ವ್ಯತ್ಯಾಸ ಬರುತ್ತದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯ ಮೇಲೆ ಜವಾಬ್ದಾರಿ ಹೊರಿಸುವುದು ಸರಿಯಲ್ಲ. ನೈಸರ್ಗಿಕ ಲಗ್ನ ಮೇಷ ಆಗುತ್ತದೆ. ಮೇಷಕ್ಕೆ ಅಷ್ಟಮದಲ್ಲಿ ಗುರು ಇದ್ದಾನೆ. ನವಮ ಸ್ಥಾನದಲ್ಲಿ ಶನಿ ಇದ್ದಾನೆ. ಹೀಗಿರುವಾಗ ಲೆಕ್ಕಾಚಾರಗಳೆಲ್ಲ ಬುಡಮೇಲು ಆಗುತ್ತದೆ ಎಂದು ತಿಳಿಸಿದರು.
ನವೆಂಬರ್ 5ರ ನಂತರ ದೇಶದ ಆರ್ಥಿಕ ಸ್ಥಿತಿ ಬೆಳವಣಿಗೆಯಾಗುತ್ತದೆ. ನವೆಂಬರ್ 5ಕ್ಕೆ ಗುರು ಧನುರಾಶಿಗೆ ಪ್ರವೇಶ ಮಾಡುತ್ತಾನೆ. ಇದರಿಂದಾಗಿ ಆರ್ಥಿಕ ಸಂಕಷ್ಟಗಳೆಲ್ಲ ಬಗೆಹರಿಯಲು ಆರಂಭವಾಗುತ್ತದೆ. 12 ವರ್ಷಗಳಿಗೊಮ್ಮೆ ಆರ್ಥಿಕ ಸಮಸ್ಯೆ ಬರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಈ ಬಗ್ಗೆ ಉಲ್ಲೇಖಗಳಿವೆ ಎಂದರು.
ದೇಶದ ಆರ್ಥಿಕತೆ ಬಲಿಷ್ಟವಾಗುವ ಲಕ್ಷಣ ಇದು. ಪ್ರಧಾನಿ ನರೇಂದ್ರ ಮೋದಿಯ ಜಾತಕ ನವೆಂಬರ್ ನಂತರ ಉತ್ತಮವಾಗಿದೆ. ವೃಶ್ಚಿಕ ರಾಶಿಗೆ ತೃತೀಯದಲ್ಲಿ ಶನಿ ಪ್ರವೇಶವಾಗಲಿದೆ. ದ್ವಿತೀಯದಲ್ಲಿ ಗುರುವಿನ ಪ್ರವೇಶ ಆಗಲಿದೆ. ಇದರಿಂದಾಗಿ ಮೋದಿಗೆ ಒಳ್ಳೆಯದಾಗಲಿದೆ ಎಂದು ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದ್ದಾರೆ.