ನವದೆಹಲಿ: ಪಾಕಿಸ್ತಾನದ ಸೇನಾ ಪೋಸ್ಟ್ ಗಳ ಮೇಲೆ ದಾಳಿ ಮಾಡಿದ್ದನ್ನು ಭಾರತೀಯ ಸೇನೆ ಅಧಿಕೃತವಾಗಿ ಬಹಿರಂಗಪಡಿಸಿದೆ. ಜಮ್ಮು ಕಾಶ್ಮೀರದ ನೌಶೇರಾ ಸೆಕ್ಟರ್ನಲ್ಲಿ ನುಸುಳುಕೋರರಿಗೆ ನೆರವು ನೀಡಿದ್ದ ಪಾಕಿಸ್ತಾನದ ಸೇನಾ ಪೋಸ್ಟ್ ಗಳನ್ನ ಧ್ವಂಸ ಮಾಡಲಾಗಿದೆ.
ಸೇನಾ ವಕ್ತಾರರಾದ ಮೇಜರ್ ಜೆನರಲ್ ಅಶೋಕ್ ನರುಲಾ ಈ ಬಗ್ಗೆ ಹೇಳಿಕೆ ನೀಡಿದ್ದು, ಪಾಕಿಸ್ತಾನದ ಸೇನೆ ಶಸ್ತ್ರಾಸ್ತ್ರ ಸಜ್ಜಿತ ನುಸುಳುಕೋರರಿಗೆ ನೆರವು ನೀಡಿತ್ತು. ಇತ್ತೀಚೆಗೆ ನೌಶೆರಾದಲ್ಲಿ ನಡೆದ ದಾಳಿಯಲ್ಲಿ ನಾವು ಪಾಕಿಸ್ತಾನದ ಸೇನಾ ಪೋಸ್ಟ್ ಗಳನ್ನ ಧ್ವಂಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ದಾಳಿ ಯಾವಾಗ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ನರುಲಾ, ಇತ್ತೀಚೆಗೆ, ತೀರಾ ಇತ್ತೀಚಿನ ಕಾರ್ಯಾಚರಣೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆ ದಾಳಿಯ ವಿಡಿಯೋವನ್ನ ಕೂಡ ಬಿಡುಗಡೆ ಮಾಡಿದೆ. ಕಾಡಿನಂತಿರುವ ಪ್ರದೇಶದಲ್ಲಿ ಸ್ಫೋಟಕಗಳು ಸ್ಫೋಟಗೊಂಡ ನಂತರ ದಟ್ಟ ಹೊಗೆ ಆವರಿಸಿ ಕಟ್ಟದ ಕುಸಿಯುವುದನ್ನು ಕಾಣಬಹುದು.
ಇದನ್ನೂ ಓದಿ: ಕಲ್ಲು ತೂರಿದ್ದ ಯುವಕನನ್ನು ಜೀಪಿಗೆ ಕಟ್ಟಿ ಮೆರವಣಿಗೆ ಮಾಡಿದ್ದ ಅಧಿಕಾರಿಗೆ ಸೇನೆಯಿಂದ ಪ್ರಶಸ್ತಿ
ಭಯೋತ್ಪಾದನೆಯನ್ನ ಹತ್ತಿಕ್ಕುವ ತಂತ್ರಗಾರಿಕೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ. ಇದರಿಂದ ಉಗ್ರರ ಸಂಖ್ಯೆ ಕಡಿಮೆಯಾಗಿ, ಕಾಶ್ಮೀರದ ಯುವಕರು ಕೆಟ್ಟ ದಾರಿ ತುಳಿಯದಂತೆ ಆಗಬೇಕು ಎಂದು ನರುಲಾ ಹೇಳಿದ್ದಾರೆ.
ಮಂಜು ಕರಗಲು ಆರಂಭಿಸಿದ್ದು, ಉಗ್ರರ ಆಕ್ರಮಣಕ್ಕೆ ಪರ್ವತ ಕಣಿವೆಗಳು ತೆರೆದುಕೊಳ್ಳುತ್ತಿದ್ದರಿಂದ ನುಸುಳುಕೋರರ ಸಂಖ್ಯೆ ಹೆಚ್ಚಾಗಬಹುದು ಎಂಬ ಬಗ್ಗೆ ಸೇನೆಗೆ ಅರಿವಿತ್ತು. ಭಾರತೀಯ ಸೇನೆ ಗಡಿ ನಿಯಂತ್ರಣಾ ರೇಖೆಯಲ್ಲಿ ಪ್ರಾಬಲ್ಯ ಹೊಂದಿದೆ. ನಮಗೆ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಯಾವುದೇ ಸಮಯದಲ್ಲಿ ಯುದ್ಧ ನಡೆಯಬಹುದು, ಎಲ್ಲದಕ್ಕೂ ಸಿದ್ಧವಾಗಿರಿ: ಏರ್ ಚೀಫ್ ಮಾರ್ಷಲ್ ಪತ್ರ