ನವದೆಹಲಿ: ಟಿ20 ವಿಶ್ವಕಪ್ ನನ್ನ ಕನಸು. ಅದನ್ನು ಗೆಲ್ಲಲು ಟೀಂ ಇಂಡಿಯಾ ಸಿದ್ಧವಾಗಿದೆ. ಟಿ20 ವಿಶ್ವಕಪ್ ಸಿದ್ಧತೆಗಳಿಗೆ ಈ ವರ್ಷದ ಏಕದಿನ ಪಂದ್ಯಗಳು ತುಂಬಾ ಉಪಯುಕ್ತವಾಗಬಹುದು ಎಂದು ಭಾರತ ತಂಡದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾ ವಿರುದ್ಧದ ಗೆಲುವು ಭಾರತೀಯ ತಂಡದ ಮಾನಸಿಕ ಶಕ್ತಿ ಮತ್ತು ಒತ್ತಡದಲ್ಲಿ ಆಡುವ ಸಾಮರ್ಥ್ಯಕ್ಕೆ ಪುರಾವೆಯಾಗಿದೆ. ಸರಣಿಯ ಮೊದಲ ಪಂದ್ಯವು ಮುಂಬೈನ ವಾಂಖೆಡೆನಲ್ಲಿ ನಡೆಯಿತು, ಈ ವೇಳೆ ನಾವು ಸೋತಿದ್ದೆವು. ಇದರ ನಂತರ ತಂಡವು ಉತ್ತಮ ಪುನರಾಗಮನ ಮಾಡಿತು, ಇದು ಪ್ರಶಂಸನೀಯ. ನಾವು ಕ್ರಿಕೆಟ್ ಅನ್ನು ದೋಷರಹಿತವಾಗಿ ಆಡುತ್ತೇವೆ ಎಂಬುದಕ್ಕೆ ಈ ಗೆಲುವು ಸಾಕ್ಷಿ ಎಂದು ಹೇಳಿದರು.
ಟಾಸ್ನ ಮಹತ್ವದ ಕುರಿತು ಪ್ರತಿಕ್ರಿಯೆ ನೀಡಿದ ಶಾಸ್ತ್ರೀ, ನಾವು ಯಾವುದೇ ಪರಿಸ್ಥಿತಿಯಲ್ಲಿ ಯಾವುದೇ ದೇಶದ ತಂಡದ ವಿರುದ್ಧ ಉತ್ತಮವಾಗಿ ಆಡುತ್ತೇವೆ. ಇದು ನಮ್ಮ ತಂಡದ ಗುರಿಯೂ ಹೌದು. ಹೀಗಾಗಿ ಇಲ್ಲಿ ಟಾಸ್ ಗೆಲ್ಲುವುದು ಮುಖ್ಯ ಎನಿಸುವುದಿಲ್ಲ. ವಿಶ್ವಕಪ್ ಗೆಲ್ಲುವುದು ನಮ್ಮ ಉತ್ಸಾಹ ಮತ್ತು ಅದನ್ನು ಸಾಧಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ ಎಂದು ತಿಳಿಸಿದರು.
ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಗಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋಚ್, ಧವನ್ ಅನುಭವಿ ಆಟಗಾರರಾಗಿರುವುದರಿಂದ ಅವರ ಅನುಪಸ್ಥಿತಿ ಕಾಡುತ್ತದೆ. ತಂಡದ ಅನೇಕ ಆಟಗಾರರು ಗಾಯಗೊಂಡಿದ್ದಾರೆ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಾಗುವುದು ಎಂದರು.
ಕೆ.ಎಲ್.ರಾಹುಲ್ ವಿಕೆಟ್ ಕೀಪರ್ ಆಗಿ ಉತ್ತಮ ಆಯ್ಕೆ ಸಿಕ್ಕಿದೆ ಎಂದು ಇತ್ತೀಚೆಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಇದಕ್ಕೆ ರವಿಶಾಸ್ತ್ರಿ ಕೂಡ ಸಮ್ಮತಿಸಿ, ತಂಡಕ್ಕೆ ಹೆಚ್ಚಿನ ಆಯ್ಕೆಗಳು ಇರುವುದು ತುಂಬಾ ಒಳ್ಳೆಯದು. ಹೀಗಾಗಿ ರಾಹುಲ್ ಕೀಪಿಂಗ್ನಿಂದ ಬ್ಯಾಟಿಂಗ್ ಬಲವೂ ಹೆಚ್ಚುತ್ತದೆ ಎಂದು ತಿಳಿಸಿದರು.
ಕೇದಾರ್ ಜಾಧವ್ ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯೆ ನೀಡಿದ ಶಾಸ್ತ್ರಿ, ಜಾಧವ್ ಭಾರತೀಯ ಏಕದಿನ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಕೊಂಡಿದ್ದು, 5 ಟಿ20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಬೆನ್ನಲ್ಲೇ ಮಾರ್ಚ್ ನಲ್ಲಿಯೇ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಟಿ20 ವಿಶ್ವಕಪ್ ಟೂನಿ ಇದೇ ವರ್ಷ ಅಕ್ಟೋಬರ್ 18ರಿಂದ ನವೆಂಬರ್ 15 ರವರೆಗೆ ನಡೆಯಲಿದೆ.