ಮೆಲ್ಬರ್ನ್: ಆಸೀಸ್ ನೆಲದಲ್ಲಿ ಆರಂಭಗೊಂಡಿರುವ ಚುಟುಕು ಸಮರದಲ್ಲಿ ನಾಳೆ ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವೆ ಹೈವೋಲ್ಟೆಜ್ ಪಂದ್ಯ ನಡೆಯಲಿದೆ.
ಈಗಾಗಲೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದು, ಆಸ್ಟ್ರೇಲಿಯಾದ ಮೆಲ್ಬರ್ನ್ (Melbourne) ಸ್ಟೇಡಿಯಂ ಬದ್ಧವೈರಿಗಳ ಕಾದಾಟಕ್ಕೆ ವೇದಿಕೆಯಾಗಲಿದೆ. ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎದುರುಬದುರಾಗುತ್ತಿದೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಟ್ರಕ್ಗೆ ಡಿಕ್ಕಿ – ಐವರು ಪ್ರಾಣಾಪಾಯದಿಂದ ಪಾರು
ಕೆಲ ತಿಂಗಳ ಹಿಂದೆ ಏಷ್ಯಾಕಪ್ನಲ್ಲಿ (Asia Cup) ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಕಾದಾಡಿದ್ದವು. ಬಹುತೇಕ ಅಲ್ಲಿ ಆಡಿರುವ ಆಟಗಾರರೇ ಈ ಬಾರಿ ಟಿ20 ವಿಶ್ವಕಪ್ ತಂಡದಲ್ಲೂ ಇದ್ದಾರೆ. ಹಾಗಾಗಿ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮರ್ಥ್ಯದ ಅಗ್ನಿ ಪರೀಕ್ಷೆ ಆಸೀಸ್ ನೆಲದಲ್ಲಿ ನಡೆಯಲಿದೆ. ಇದನ್ನೂ ಓದಿ: ಭಾರತ ತಂಡದಲ್ಲಿ 150+ ವೇಗದ ಬೌಲರ್ ಇಲ್ಲ – ಇಂಗ್ಲೆಂಡ್ನಲ್ಲಿ ಪ್ರಧಾನಿಯೇ ಇಲ್ಲ: ಜಾಫರ್ ವ್ಯಂಗ್ಯ
ಈತನೇ ಭಾರತದ ಎಕ್ಸ್ ಫ್ಯಾಕ್ಟರ್:
ಭಾರತದ ಟಿ20 ವಿಶ್ವಕಪ್ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಇವರಿಬ್ಬರೂ ಸಿಡಿದರೆ, ಆರಂಭದಲ್ಲೇ ರನ್ ಬಿರುಗಾಳಿ ಬೀಸಲಿದೆ. ಆ ಬಳಿಕ ತಂಡದ ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಏಷ್ಯಾಕಪ್ ಸೇರಿದಂತೆ ಈ ಹಿಂದಿನ ಕೆಲ ಟೂರ್ನಿಗಳಲ್ಲಿ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ. ಇದೇ ನಿರೀಕ್ಷೆ ವಿಶ್ವಕಪ್ನಲ್ಲೂ ಇದೆ. ಇನ್ನೂ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ನಿಜವಾದ ಶಕ್ತಿಯಾಗಿ ಗುರುತಿಸಿಕೊಂಡಿರುವುದು ಸೂರ್ಯಕುಮಾರ್ ಯಾದವ್. 360 ಡಿಗ್ರಿ ಬ್ಯಾಟ್ಸ್ಮ್ಯಾನ್ ಎಂದು ಖ್ಯಾತಿಗಳಿಸಿರುವ ಸೂರ್ಯ ಪ್ರತಿಯೊಂದು ಟೂರ್ನಿಗಳಲ್ಲೂ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಎಕ್ಸ್ ಫ್ಯಾಕ್ಟರ್ ಆಗಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಔಟ್
ಕೆಲ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಹೊಡಿಬಡಿ ಆಟಗಾರರು. ಒಂದೆರಡು ಓವರ್ ಕ್ರಿಸ್ನಲ್ಲಿದ್ದರೂ ರನ್ ಪ್ರವಾಹ ಹರಿಸುವ ಸಾಮರ್ಥ್ಯ ಇವರಿಗಿದೆ. ಇವರೊಂದಿಗೆ ಅವಕಾಶ ಸಿಕ್ಕರೆ ಮಿಂಚಲು ರಿಷಭ್ ಪಂತ್, ದೀಪಕ್ ಹೂಡಾ, ಅಕ್ಷರ್ ಪಟೇಲ್ ತುದಿಗಾಲಲ್ಲಿ ನಿಂತಿದ್ದಾರೆ. ಬೌಲಿಂಗ್ನಲ್ಲಿ ಬುಮ್ರಾ ಬದಲು ತಂಡ ಸೇರಿಕೊಂಡಿರುವ ಮೊಹಮ್ಮದ್ ಶಮಿ ಮೇಲೆ ನಿರೀಕ್ಷೆ ಹೆಚ್ಚಿದೆ. ಇವರೊಂದಿಗೆ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್ ಮಿಂಚಲು ಸಿದ್ಧರಾಗಿದ್ದಾರೆ. ಸ್ಪಿನ್ ಜಾದೂ ಮಾಡಲು ಆರ್ ಅಶ್ವಿನ್, ಯಜುವೇಂದ್ರ ಚಾಹಲ್ ನಡುವೆ ಪೈಪೋಟಿ ಇದೆ.
ಈ ಎಲ್ಲಾ ಆಟಗಾರರೂ ತಂಡವಾಗಿ ಆಡಬೇಕಾಗಿದೆ. ಈ ಮೂಲಕ 15 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವಕಪ್ ಗೆಲ್ಲಬೇಕೆಂಬ ಕನಸಿನಲ್ಲಿರುವ ಭಾರತದ ಅಭಿಮಾನಿಗಳ ಕನಸು ನನಸು ಮಾಡಲು ಹೋರಾಡಬೇಕಾಗಿದೆ. ಇದೀಗ ಮೊದಲ ಪಂದ್ಯಕ್ಕೆ ಸಿದ್ಧವಾಗಿರುವ ಭಾರತ ಹಾಗೂ ಪಾಕ್ ತಂಡಗಳಿಗೆ ಮಳೆ ಕಾಟ ಕೊಡುವ ಸಾಧ್ಯತೆಯೂ ಹೆಚ್ಚಿದೆ. ನಾಳೆ ಮಧ್ಯಾಹ್ನ ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಪಂದ್ಯ ಆರಂಭವಾಗಲಿದೆ.
ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.