ಲಂಡನ್: ಖಲಿಸ್ತಾನ್ ಪರ ಪ್ರತಿಭಟನೆ (Khalistan Protest) ನಡೆಸಿದ ಹೋರಾಟಗಾರರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಯುನೈಟೆಡ್ ಕಿಂಗ್ಡಮ್ (UK) ಜೊತೆ ಮುಕ್ತ ವ್ಯಾಪಾರ ಮಾತುಕತೆಯನ್ನು ಭಾರತ (India) ಸ್ಥಗಿತಗೊಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಮಾರ್ಚ್ 19 ರಂದು ಲಂಡನ್ನಲ್ಲಿರುವ (London) ಭಾರತದ ಹೈಕಮೀಷನ್ ಕಚೇರಿ ಮುಂಭಾಗ ಖಲಿಸ್ತಾನಿ ಪರ ಬೆಂಬಲಿಗರು ಪ್ರತಿಭಟನೆ ನಡೆಸಿ ಭಾರತದ ಧ್ವಜವನ್ನು ಎಸೆದು ಖಲಿಸ್ತಾನಿ ಧ್ವಜ ಹಾರಿಸಿದ್ದರು. ಈ ಘಟನೆಯ ಬಗ್ಗೆ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಭಾರತ ಹೋರಾಟಗಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು.
ಸೂಚನೆಯ ಹೊರತಾಗಿಯೂ ಯುಕೆ ಸರ್ಕಾರ ಈ ಘಟನೆಯನ್ನು ಖಂಡಿಸುವಲ್ಲಿ ಮತ್ತು ಹೋರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಯುಕೆ ಜೊತೆಗಿನ ವ್ಯಾಪಾರ ಮಾತುಕತೆಯನ್ನು (Trade Talks) ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಗುಜರಾತ್ ಗಲಭೆಯನ್ನು ಆಧಾರಿಸಿ ಬಿಬಿಸಿ (BBC) ಪ್ರಸಾರ ಮಾಡಿದ ಸಾಕ್ಷ್ಯಚಿತ್ರದ ಬಳಿಕ ಯುಕೆ ಮತ್ತು ಭಾರತದ ಸಂಬಂಧ ಹಳಸಿತ್ತು. ಇದರ ಬೆನ್ನಲ್ಲೇ ಖಲಿಸ್ತಾನಿ ಬೆಂಬಲಿಗರು ನಡೆಸಿದ ಗಲಾಟೆಯ ನಂತರ ಭಾರತ ಮತ್ತು ಯುಕೆ ಸಂಬಂಧ ಮತ್ತಷ್ಟು ಹಳಸಿದೆ. ಇದನ್ನೂ ಓದಿ: ದೆಹಲಿಯ ಬ್ರಿಟಿಷ್ ಹೈಕಮೀಷನ್ಗೆ ನೀಡಿದ ಭದ್ರತೆ ತೆಗೆದು ಯುಕೆಗೆ ಬಿಸಿ ಮುಟ್ಟಿಸಿದ ಭಾರತ
ವಿಶ್ವದ ಎರಡನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಹೂಡಿಕೆ ಮಾಡಲು ಯುಕೆ ಕಂಪನಿಗಳು ಆಸಕ್ತಿ ತೋರಿಸಿವೆ. ಅದೇ ರೀತಿಯಾಗಿ ರಕ್ಷಣೆಗೆ ಸಂಬಂಧಿಸಿದ ವಸ್ತುಗಳನ್ನು ಯುಕೆ ಪೂರೈಸುವುದಾಗಿ ಭಾರತಕ್ಕೆ ತಿಳಿಸಿದೆ. ಎರಡು ದೇಶಗಳ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ (FTA) ಸಹಿ ಹಾಕುವ ಸಂಬಂಧ ಮಾತುಕತೆ ನಡೆಯುತ್ತಿದೆ. ಎಲ್ಲವೂ ನಿಗದಿಯಂತೆ ಆಗಿದ್ದರೆ 2022ರ ದೀಪಾವಳಿಗೆ ಇದು ಜಾರಿಗೆ ಬರಬೇಕಿತ್ತು.