ನ್ಯೂಯಾರ್ಕ್: 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪಾಕ್ನಲ್ಲಿರುವ ಉಗ್ರರ ನೆಲೆಗಳನ್ನು ಭಾರತ ಉಡೀಸ್ ಮಾಡಿದ ಕ್ರಮಗಳ ಬಗ್ಗೆ ಅಮೆರಿಕದ ನ್ಯೂಯಾರ್ಕ್ನಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ತಿಳಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಜಗತ್ತು ಒಟ್ಟಾಗಿ ಸೇರಬೇಕೆಂದು ಕರೆ ಕೊಟ್ಟಿದ್ದಾರೆ.
9/11 ಸ್ಮಾರಕಕ್ಕೆ ಸರ್ವಪಕ್ಷ ನಿಯೋಗದ ಸದಸ್ಯರು ಭೇಟಿ ನೀಡಿದರು. ಬಳಿಕ ಭಾರತೀಯ ಕಾನ್ಸುಲೆಟ್ನಲ್ಲಿ ಶಶಿ ತರೂರ್ ಅವರು ಭಾರತದ ಮೇಲೆ ಉಗ್ರರ ದಾಳಿಗಳ ಕುರಿತು ತಿಳಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಯು ನಮಗೆ ಭಾವನಾತ್ಮಕ ವಿಚಾರ. ನಮ್ಮ ದೇಶದಲ್ಲಿ ಕ್ರೂರ ಭಯೋತ್ಪಾದಕ ದಾಳಿಯ ಗಾಯಗಳನ್ನು ಇನ್ನೂ ಹೊಂದಿರುವ ನಗರದಲ್ಲಿ ನಾವಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಹೋಗುತ್ತಿರುವ ಪ್ರತಿಯೊಂದು ದೇಶದಲ್ಲೂ ಸಾರ್ವಜನಿಕ ಮತ್ತು ರಾಜಕೀಯ ಅಭಿಪ್ರಾಯದ ವಿವಿಧ ವರ್ಗಗಳೊಂದಿಗೆ ಮಾತನಾಡುವುದು ನಮ್ಮ ಆಲೋಚನೆಯಾಗಿದೆ. ಭಯೋತ್ಪಾದನಾ ಕೃತ್ಯಗಳು ಜಗತ್ತಿನಾದ್ಯಂತ ಜನತೆಗೆ ತೊಂದರೆಯಾಗಿದೆ. ಮೂಲಭೂತ ಸಮಸ್ಯೆ ಉಳಿದಿದೆ ಎಂದು ಹೇಳಿದ್ದಾರೆ.
ಜನರ ಧರ್ಮವನ್ನು ಕೇಳಿ ಉಗ್ರರು ಗುಂಡಿಕ್ಕಿ ಜನರನ್ನು ಕೊಂದಿದ್ದಾರೆ. ಮೃತರಲ್ಲಿ ಹೆಚ್ಚಿನವರು ಹಿಂದೂಗಳಾಗಿದ್ದಾರೆ. ಈ ದುಷ್ಕೃತ್ಯ ನಡೆದ ಒಂದು ಗಂಟೆಯೊಳಗೆ, ರೆಸಿಸ್ಟೆನ್ಸ್ ಫ್ರಂಟ್ ಎಂಬ ಗುಂಪು ಇದಕ್ಕೆ ಕಾರಣ ಎಂದು ಹೇಳಿಕೊಂಡಿತ್ತು. ರೆಸಿಸ್ಟೆನ್ಸ್ ಫ್ರಂಟ್ ಕೆಲವು ವರ್ಷಗಳಿಂದ ನಿಷೇಧಿತ ಲಷ್ಕರ್ ಇ ತೈಬಾ ಸಂಘಟನೆಯ ಭಾಗ ಎಂದು ತಿಳಿದುಬಂದಿದೆ. ಇದನ್ನು ಅಮೆರಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ ಎಂದು ಉಲ್ಲೇಖಿಸಿದ್ದಾರೆ.
9 ನಿರ್ದಿಷ್ಟ ಭಯೋತ್ಪಾದಕ ನೆಲೆಗಳು, ಪ್ರಧಾನ ಕಚೇರಿಗಳು ಮತ್ತು ಲಾಂಚ್ಪ್ಯಾಡ್ಗಳ ಮೇಲೆ ನಿಖರವಾದ ಭಾರತ ನಿಖರವಾದ ದಾಳಿ ನಡೆಸಿದೆ. ಭಯೋತ್ಪಾದನೆ ವಿರುದ್ಧ ಭಾರತ ಸ್ಪಷ್ಟ ಸಂದೇಶ ರವಾನಿಸಿದೆ. ಇದು ದೀರ್ಘಾವಧಿಯ ಯುದ್ಧದಲ್ಲಿ ಆರಂಭಿಕ ದಾಳಿಯಲ್ಲ, ಬದಲಾಗಿ ಕೇವಲ ಪ್ರತೀಕಾರದ ಕ್ರಮವಾಗಿದೆ. ಆ ಕೃತ್ಯವನ್ನು ನಿಲ್ಲಿಸಲು ನಾವು ಸಿದ್ಧರಿದ್ದೇವೆ ಎಂಬ ಸಂದೇಶವನ್ನು ರವಾನಿಸಿದೆ ಎಂದು ತರೂರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.