ನವದೆಹಲಿ: ಬ್ರಿಟನ್ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಪ್ರತಿಯಾಗಿ ಭಾರತ ಇಲ್ಲಿಗೆ ಆಗಮಿಸುವ ಬ್ರಿಟನ್ ಪ್ರಜೆಗಳಿಗೆ ಕಠಿಣ ನಿಯಮ ಜಾರಿ ಮಾಡಿ ಆದೇಶ ಹೊರಡಿಸಿದೆ.
ಬ್ರಿಟನ್ ಸರ್ಕಾರ ಕೆಲದಿನಗಳ ಹಿಂದೆ ಹೊರಡಿಸಿದ್ದ ಆದೇಶದಲ್ಲಿ ಭಾರತೀಯ ಪ್ರಯಾಣಿಕರು ಕೋವಿಶೀಲ್ಡ್ ಲಸಿಕೆಯನ್ನು ಪಡೆದು ಬ್ರಿಟನ್ಗೆ ತೆರಳಿದ್ದಲ್ಲಿ ಅದನ್ನು ಲಸಿಕೆ ಪಡೆದಿಲ್ಲ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ 10 ದಿನಗಳವರೆಗೆ ಐಸೊಲೇಷನ್ನಲ್ಲಿರಬೇಕೆಂಬ ನಿಯಮ ಜಾರಿಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಅ.04 ರಿಂದ ಭಾರತಕ್ಕೆ ಆಗಮಿಸುವ ಎಲ್ಲಾ ಬ್ರಿಟನ್ ಪ್ರಜೆಗಳಿಗೆ ಆರ್ಟಿಪಿಸಿಆರ್ ಪರೀಕ್ಷೆ ಹಾಗೂ 10 ದಿನಗಳ ಕಡ್ಡಾಯ ಕ್ವಾರಂಟೈನ್ನಲ್ಲಿರಬೇಕೆಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನವಜೋತ್ ಸಿಂಗ್ ಸಿಧುನಂತೆ ಕನ್ಹಯ್ಯ ಕುಮಾರ್ ಕಾಂಗ್ರೆಸ್ಸನ್ನು ನಾಶ ಮಾಡುತ್ತಾರೆ: ಆರ್ಜೆಡಿ
ಕೇಂದ್ರ ಸರ್ಕಾರ ಹೊರಡಿಸಿರುವ ಹೊದ ನಿಯಮದ ಪ್ರಕಾರ ಬ್ರಿಟನ್ನಿಂದ ಭಾರತಕ್ಕೆ ಆಗಮಿಸುವ ಬ್ರಿಟನ್ ಪ್ರಜೆಗಳು ಲಸಿಕೆ ಪಡೆದಿದ್ದರು, ಪಡೆಯದೆ ಇದ್ದರು ಕೂಡ ಕೋವಿಡ್-19 ಆರ್ಟಿಪಿಸಿಆರ್ ಪರೀಕ್ಷೆಯನ್ನು ಹೊರಡುವುದಕ್ಕೂ ಮುನ್ನವೇ ಮಾಡಿಸಿಕೊಂಡಿರಬೇಕಾಗುತ್ತದೆ. ನಂತರ ಭಾರತಕ್ಕೆ ಬಂದ ನಂತರ 8 ದಿನಗಳಾದ ಮೇಲೂ ಪರೀಕ್ಷೆಯನ್ನು ಮಾಡಬೇಕಾಗುತ್ತದೆ. ಅಲ್ಲದೆ ವಾಸವಾಗಿರುವ ಸ್ಥಳದಲ್ಲಿ 10 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ನಲ್ಲಿರಬೇಕೆಂದು ತಿಳಿಸಿದೆ. ಇದನ್ನೂ ಓದಿ: ಅಬ್ದುಲ್ ನಾಸಿರ್ ಮದನಿ ಕೇರಳಕ್ಕೆ ತೆರಳಲು ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್
ಬ್ರಿಟನ್ ಸರ್ಕಾರ ಭಾರತದ ಪ್ರಯಾಣಿಕರಿಗೆ ಕಠಿಣ ನಿಯಮವನ್ನು ಜಾರಿಗೊಳಿಸುತ್ತಿದ್ದಂತೆ, ಈ ನಿರ್ಧಾರಗಳನ್ನು ಬದಲಾಯಿಸದೆ ಇದ್ದಲ್ಲಿ ಬ್ರಿಟನ್ ಸರ್ಕಾರದ ನಿರ್ಧಾರಗಳಿಗೆ ಪ್ರತಿಯಾಗಿ ಭಾರತವೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿತ್ತು. ಬ್ರಿಟನ್ನ ಈ ನಡೆಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ತೀವ್ರ ಕಿಡಿಕಾರಿದ್ದರು.