ಧಾರವಾಡ: ಭಾರತ ದೇಶ ಗೋಮಾಂಸವನ್ನು ರಫ್ತು (Beef Export) ಮಾಡುವುದರಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಬ್ರೆಜಿಲ್ ನಂತರದ ಸ್ಥಾನದಲ್ಲಿ ಭಾರತ ಇದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಛತ್ತೀಸ್ಗಢ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿ 2ನೇ ಸ್ಥಾನದಲ್ಲಿದೆ. ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸಲ್ಲಬೇಕು ಎಂದು ಸಚಿವ ಸಂತೋಷ್ ಲಾಡ್ (Santosh Lad) ಟೀಕಿಸಿದ್ದಾರೆ.
ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವುದು ಬೇಡ ಎಂತಾದರೆ, ದೇಶಾದ್ಯಂತ ಗೋಶಾಲೆ ತೆರೆಯಲಿ. ಗೋಮಾಂಸ ರಫ್ತು ಮಾಡುವುದನ್ನು ಬ್ಯಾನ್ ಮಾಡಲಿ ಎಂದು ಸವಾಲು ಎಸೆದರು.
ಕೃಷಿ ವಿಶ್ವವಿದ್ಯಾಲಯ ಕೆಲವೊಂದಿಷ್ಟು ಜಾನುವಾರುಗಳನ್ನು ಹರಾಜು ಮಾಡುತ್ತಿರುವುದಕ್ಕೆ ಬಜರಂಗದಳ ವಿರೋಧ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಗೋವಾ ಮತ್ತು ಮಣಿಪುರದಲ್ಲಿ ಗೋಮಾಂಸಕ್ಕೆ ಅವಕಾಶ ಕೊಟ್ಟಿದ್ದಾರೆ. ಚುನಾವಣೆ ಬಂದಿರುವ ಕಾರಣ ಏನೇನೋ ವಿಚಾರ ತರುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿದ್ಯುತ್ ಕಂಪನಿಗಳ 389.66 ಕೋಟಿ ರೂ. ಬಾಕಿ ಮನ್ನಾ: ಸಿಎಂ ಘೋಷಣೆ
ಬಿಹಾರದಲ್ಲಿ ಒಂದು ವಾರದಲ್ಲಿ 8.5 ಲಕ್ಷ ಶೌಚಾಲಯ ಕಟ್ಟಿಸಿದ್ದೇವೆ ಎಂದು ಪ್ರಧಾನಿಯವರು ಹೇಳಿದ್ದಾರೆ. ಇದನ್ನು ನಂಬಲು ಸಾಧ್ಯವೇ? ಇರದೇ ಇರುವ ರೈಲ್ವೆ ನಿಲ್ದಾಣಗಳ ಪ್ರಸ್ತಾಪ ಮಾಡಿದ್ದಾರೆ. ರಾಣಿ, ದುರ್ಗಾ, ದೇವಿ ಸ್ಟೇಷನ್ ಅಂತೆಲ್ಲಾ ಹೇಳಿದ್ದಾರೆ. ಆ ಸ್ಟೇಷನ್ಗಳು ಭಾರತದಲ್ಲಿ ಇಲ್ಲ. ಆದರೂ ಬಿಜೆಪಿಯವರ ಪಿಚ್ಚರ್ ನಡೆಯುತ್ತಿದೆ, ನಡೆಯಲಿ ಎಂದು ಟಾಂಗ್ ನೀಡಿದರು.
ಬಜರಂಗದಳದವರು ಎಷ್ಟು ಜನ ಗೋವು ಸಾಕಿದ್ದಾರೆ? ಇಸ್ಕಾನ್ ಬಗ್ಗೆ ಮೇನಕಾ ಗಾಂಧಿ ಆರೋಪ ಮಾಡಿದ್ದಾರೆ. ಇದರ ಬಗ್ಗೆ ಯಾರು ಉತ್ತರ ಕೊಡಬೇಕು? ಬಿಜೆಪಿಯವರು ಯಾವುದಕ್ಕೂ ಉತ್ತರ ಕೊಡುತ್ತಿಲ್ಲ. ಎಲ್ಲದಕ್ಕೂ ನಾವೇ ಉತ್ತರ ಕೊಡಬೇಕಿದೆ. ಗೋವುಗಳ ಬಗ್ಗೆ ಪ್ರೀತಿ ಇರುವವರು ತಾವೇ ಗೋಶಾಲೆ ತೆರೆದು ತೆಗೆದುಕೊಂಡು ಹೋಗಲಿ ಎಂದು ಲಾಡ್ ಹೇಳಿದರು. ಇದನ್ನೂ ಓದಿ: ಸ್ವಾಮೀಜಿ ನಕ್ಸಲೈಟ್ ಆಗ್ಬೇಕಿತ್ತು, ದುರ್ದೈವ ಖಾವಿ ಹಾಕಿದ್ದಾರೆ: ಯತ್ನಾಳ್ ಕಿಡಿ