ಧರ್ಮಶಾಲಾ: ಟೀಂ ಇಂಡಿಯಾ ಗೆಲುವಿಗೆ 87 ರನ್ ಬಾಕಿ. ನಾಳೆ ಭಾರತ 87 ರನ್ ಗಳಿಸಿದರೆ ಬಾರ್ಡರ್-ಗಾವಸ್ಕರ್ ಟ್ರೋಫಿ ಟೀಂ ಇಂಡಿಯಾ ಮಡಿಲಿಗೆ ಸೇರಲಿದೆ. ಸದ್ಯದ ಮಟ್ಟಿಗೆ ಭಾರತದ ಗೆಲುವು ಬಹುತೇಕ ಖಚಿತವಾಗಿದೆ.
106 ರನ್ಗಳ ಟಾರ್ಗೆಟ್ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಮೊದಲ ಓವರ್ನಲ್ಲೇ ಕೆ.ಎಲ್. ರಾಹುಲ್ 3 ಬೌಂಡರಿ ಬಾರಿಸಿ ಉತ್ತಮ ಆರಂಭ ನೀಡಿದರು. ದಿನದಾಟ ಮುಗಿದಾಗ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ. ಕೆ.ಎಲ್.ರಾಹುಲ್ 13 ಹಾಗೂ ಮುರಳಿ ವಿಜಯ್ 6 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನೂ 2 ದಿನಗಳ ಆಟ ಬಾಕಿಯಿದೆ.
ಧರ್ಮಶಾಲಾದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತದ ಬೌಲರ್ ಗಳು ತಮ್ಮ ಪರಾಕ್ರಮ ಮೆರೆದರು. ಇದರಿಂದಾಗಿ ಆಸೀಸ್ ತಂಡ 53.3 ಓವರ್ ಗಳಲ್ಲಿ ಕೇವಲ 137 ರನ್ ಗಳಿಸಿ 2ನೇ ಇನ್ನಿಂಗ್ಸ್ ನಲ್ಲಿ ಆಲೌಟ್ ಆಯಿತು.
ಆಸ್ಟ್ರೇಲಿಯಾ ಪರವಾಗಿ ಮ್ಯಾಕ್ಸ್ ವೆಲ್ 45 ಹಾಗೂ ವೇಡ್ 25 ರನ್ ಗಳಿಸಿ ತಂಡದ ಮೊತ್ತ 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆಸ್ಟ್ರೇಲಿಯಾ ತಂಡದಲ್ಲಿ ಒಟ್ಟು 6 ಮಂದಿ ಎರಡಂಕಿ ದಾಟುವಲ್ಲಿ ವಿಫಲರಾದರೆ ಅವರಲ್ಲಿ ಮೂವರು ಶೂನ್ಯಕ್ಕೆ ಔಟಾಗಿದ್ದು ವಿಶೇಷವಾಗಿತ್ತು. ಉಳಿದಂತೆ ರೆನ್ಶಾ 8, ವಾರ್ನರ್ 6, ಸ್ಮಿತ್ 17, ಹ್ಯಾಂಡ್ಸ್ ಕಾಂಬ್ 18, ಮಾರ್ಷ್ 1, ಕಮ್ಮಿನ್ಸ್ 12 ರನ್ ಗಳಿಸಿದರು.
ಟೀಂ ಇಂಡಿಯಾ ಪರವಾಗಿ ರವೀಂದ್ರ ಜಡೇಜಾ, ಆರ್.ಅಶ್ವಿನ್ ಹಾಗೂ ಉಮೇಶ್ ಯಾದವ್ ತಲಾ 3 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ 1 ವಿಕೆಟ್ ಗಳಿಸಿದರು.
ಮೊದಲ ಇನ್ನಿಂಗ್ಸ್ ನಲ್ಲಿ ನಲ್ಲಿ ಆಸ್ಟ್ರೇಲಿಯಾ – 300 ರನ್ ಗಳಿಸಿ ಆಲೌಟಾಗಿದ್ದರೆ ಭಾರತ 332 ರನ್ ಗಳಿಸಿ 32 ರನ್ಗಳ ಮುನ್ನಡೆ ಗಳಿಸಿತ್ತು.