ಭಾರತದ ಮೇಲೆ ದಾಳಿ ಮುಂದುವರಿಸುತ್ತೇವೆ: ಪಾಕ್‌ನಲ್ಲಿ ಉಗ್ರ ಅಜರ್‌ ಭಾಷಣ? – ಭಾರತ ಸಿಡಿಮಿಡಿ

Public TV
1 Min Read
Masood Azhar

ನವದೆಹಲಿ: ನಿಷೇಧಿತ ಭಯೋತ್ಪಾದನಾ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammed) ಮುಖ್ಯಸ್ಥ ಹಾಗೂ 2011ರ ಸಂಸತ್ ದಾಳಿಯಂತಹ ಭಯೋತ್ಪಾದಕ ಕೃತ್ಯಗಳ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ (Masood Azhar) ವಿರುದ್ಧ ಪಾಕಿಸ್ತಾನ ಕ್ರಮಕೈಗೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.

ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದ ಇಸ್ಲಾಮಿಕ್ ಸೆಮಿನರಿಯಲ್ಲಿ ಅಜರ್ ಸಾರ್ವಜನಿಕ ಭಾಷಣ ಮಾಡಿದ್ದಾನೆ. ‘ಭಾರತದ ಮೇಲೆ ದಾಳಿಯನ್ನು ಮುಂದುವರೆಸಲಾಗುವುದು’ ಎಂದು ಭಾಷಣದಲ್ಲಿ ಪ್ರತಿಜ್ಞೆ ಮಾಡಿದ್ದಾನೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾನೆ. ಆತನ ಭಾಷಣದ ವರದಿ ಆಧರಿಸಿ ಭಾರತ (India) ಕ್ರಮಕ್ಕೆ ಆಗ್ರಹಿಸಿದೆ.

INDIA PAKISTAN

ಅಜರ್‌ನ ಭಾಷಣದ ವರದಿಗಳನ್ನು ಉಲ್ಲೇಖಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇದು ನಿಜವಾಗಿದ್ದರೆ, ಗಡಿಯಾಚೆಗೆ ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದಕರನ್ನು ಒಳಗೊಂಡಿರುವ ಪಾಕಿಸ್ತಾನದ ದ್ವಂದ್ವ ನಿಲುವನ್ನು ಬಹಿರಂಗಪಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಸೂದ್ ಅಜರ್ ಭಾರತದಲ್ಲಿನ ಗಡಿಯಾಚೆಗಿನ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಆದ್ದರಿಂದ ಅವನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು. ಆದರೆ, ಅವನು ಪಾಕಿಸ್ತಾನದಲ್ಲಿ ಇಲ್ಲ ಎಂದು ಆ ದೇಶ ಹೇಳಿದೆ. ಆದರೆ, ವರದಿಗಳನ್ನು ನಂಬುವುದಾದರೆ, ಅದು ಪಾಕಿಸ್ತಾನದ ದ್ವಂದ್ವವನ್ನು ಬಹಿರಂಗಪಡಿಸುತ್ತದೆ ಎಂದು ಬೇಸರ ಹೊರಹಾಕಿದ್ದಾರೆ.

ಅಜರ್ ತನ್ನ ಅತಿರೇಕದ ಭಾಷಣದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ‘ಇಲಿ’ ಎಂದು ಕರೆದಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯನ್ನು ಹೆಚ್ಚಿಸುವ ಉದ್ದೇಶವನ್ನು ಘೋಷಿಸಿದ್ದಾನೆ.

ಈ ಭಾಷಣವನ್ನು ನವೆಂಬರ್‌ನಲ್ಲಿ ಮಾಡಲಾಗಿದೆ ಎಂದು ವರದಿಯಾಗಿದೆ. ಅಜರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ.

Share This Article